ಭಾರತದ ಜಿ20 ಅಧ್ಯಕ್ಷತೆ ಆರಂಭ: 100 ಸ್ಮಾರಕಗಳಿಗೆ ಒಂದು ವಾರ ದೀಪಾಲಂಕಾರ!
ನವದೆಹಲಿ: ಅಂತಾರಾಷ್ಟ್ರೀಯ ಆರ್ಥಿಕ ಸಹಕಾರದ ಪ್ರಧಾನ ವೇದಿಕೆಯಾದ ಜಿ20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಗುರುವಾರದಿಂದ ಭಾರತ ಅಧಿಕೃತವಾಗಿ ವಹಿಸಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳೂ ಸೇರಿದಂತೆ ಜಿ20 ಲಾಂಛನವನ್ನು ಹೊಂದಿರುವಂತೆ ದೇಶದ 100 ಸ್ಮಾರಕಗಳು ಡಿಸೆಂಬರ್ 1 ರಿಂದ 7 ರವರೆಗೆ ದೀಪಾಲಂಕಾರದಿಂದ ಝಗಮಗಿಸಲಿವೆ.
ಶ್ರೀನಗರದ ಶಂಕರಾಚಾರ್ಯ ದೇವಸ್ಥಾನ, ದೆಹಲಿಯ ಕೆಂಪು ಕೋಟೆ, ತಂಜಾವೂರಿನ ಚೋಳರ ದೇವಸ್ಥಾನ, ಹುಮಾಯೂನ್ ಸಮಾಧಿ, ಗುಜರಾತ್ನ ಮೊಧೇರಾ ಸೂರ್ಯ ದೇವಾಲಯ, ಒಡಿಶಾದ ಕೋನಾರ್ಕ್ ಸೂರ್ಯ ದೇವಾಲಯ, ಬಿಹಾರದ ಶೇರ್ ಶಾ ಸೂರಿಯ ಸಮಾಧಿ ಸೇರಿದಂತೆ ನೂರು ಸ್ಮಾರಕಗಳು ಪಟ್ಟಿಯಲ್ಲಿದ್ದು, ಏಳು ದಿನಗಳ ಕಾಲ ಪ್ರಕಾಶಿಸಲ್ಪಡುತ್ತವೆ.
‘ವಸುಧೈವ ಕುಟುಂಬಕಂ’ ಎಂಬ ಧ್ಯೇಯವಾಕ್ಯ ಜತೆ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬುದು ಭಾರತದ ಜಿ20 ಅಧ್ಯಕ್ಷತೆಯ ಥೀಮ್ ಆಗಿದೆ. ಈ ಥೀಮ್ ಮಾನವ, ಪ್ರಾಣಿ, ಸಸ್ಯ ಮತ್ತು ಸೂಕ್ಷ್ಮಜೀವಿಗಳು ಮತ್ತು ಭೂಮಿಯ ಮೇಲೆ ಮತ್ತು ವಿಶಾಲ ವಿಶ್ವದಲ್ಲಿ ಅವುಗಳ ಪರಸ್ಪರ ಸಂಬಂಧ ಸೇರಿದಂತೆ ಎಲ್ಲಾ ಜೀವನದ ಮೌಲ್ಯವನ್ನು ದೃಢೀಕರಿಸುತ್ತದೆ.
ಈ ವರ್ಷದ ಅಧ್ಯಕ್ಷೀಯ ಅವಧಿಯಲ್ಲಿ ಭಾರತವು 50 ಕ್ಕೂ ಹೆಚ್ಚು ನಗರಗಳು ಮತ್ತು 32 ವಿವಿಧ ವಲಯಗಳಲ್ಲಿ ರಾಷ್ಟ್ರಾದ್ಯಂತ 200 ಸಭೆಗಳನ್ನು ಆಯೋಜಿಸಲಿದೆ.
ಮುಂದಿನ ವರ್ಷದ ಶೃಂಗಸಭೆಯಲ್ಲಿ ಸುಸ್ಥಿರ ಪರಿಸರ ಅಭಿವೃದ್ಧಿಗಾಗಿ ಕೈಗೆಟುಕುವ ತಂತ್ರಜ್ಞಾನ ಪೂರೈಕೆಯ ಉದ್ದೇಶವನ್ನು ಒಳಗೊಂಡಿವೆ. ಅಷ್ಟೇ ಅಲ್ಲದೇ, ದೇಶದ ಡಿಜಿಟಲ್ ರೂಪಾಂತರವನ್ನು ಜಗತ್ತಿಗೆ ತೋರಿಸುತ್ತದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ