ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಂಗಳವಾರ ತಮ್ಮ ಯುವ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಅಧಿಕಾರ ಹಸ್ತಾಂತರಿಸಲು ಎದುರು ನೋಡುತ್ತಿರುವ ಬಗ್ಗೆ ಮತ್ತಷ್ಟು ಸುಳಿವು ನೀಡಿದ್ದಾರೆ ಎಂದು ಆಡಳಿತಾರೂಢ 'ಮಹಾಘಟಬಂಧನ್' ಶಾಸಕರ ಸಭೆಯಲ್ಲಿ ಭಾಗವಹಿಸಿದ್ದ ನಾಯಕರು ತಿಳಿಸಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷವನ್ನು "ಪ್ರತಿಪಕ್ಷಗಳ ಒಕ್ಕೂಟ" ಸೋಲಿಸಬಹುದು ಎಂದಿರುವ ಜೆಡಿಯು ಮುಖ್ಯಸ್ಥ, ಮುಂದಿನ ಲೋಕಸಭೆ ಚುನಾವಣೆಗೆ ತಾವು ಪ್ರಧಾನಿ ಅಭ್ಯರ್ಥಿ ಅಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ತೇಜಸ್ವಿ ಯಾದವ್ ಅವರು 2025 ರ ಬಿಹಾರ ಚುನಾವಣೆಯಲ್ಲಿ ಆಡಳಿತರೂಢ ಮೈತ್ರಿಕೂಟವನ್ನು ಮುನ್ನಡೆಸಲಿದ್ದಾರೆ ಎಂದು ನಿತೀಶ್ ಕುಮಾರ್ ಅವರು ಘೋಷಿಸಿದ್ದಾರೆ. ಅಲ್ಲದೆ ತೇಜಸ್ವಿ ಅವರನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದ್ದಾರೆ.
"ನಾನು ಪ್ರಧಾನಿ ಅಭ್ಯರ್ಥಿ ಅಥವಾ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ. ಬಿಜೆಪಿಯನ್ನು ಸೋಲಿಸುವುದೇ ನನ್ನ ಗುರಿ" ಎಂದು ಬಿಹಾರದ ಆಡಳಿತರೂಢ 'ಮಹಾಘಟಬಂಧನ್' ಶಾಸಕರ ಸಭೆಯಲ್ಲಿ ನಿತೀಶ್ ಕುಮಾರ್ ಹೇಳಿದ್ದಾರೆ.
"ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತೇಜಸ್ವಿ ಜೀ ಭವಿಷ್ಯದ ನಾಯಕರಾಗಿದ್ದಾರೆ, ಅವರ ನೇತೃತ್ವದಲ್ಲಿ ರಾಜ್ಯದಲ್ಲಿ 2025 ರ ವಿಧಾನಸಭಾ ಚುನಾವಣೆಯನ್ನು ಎದುರಿಸಲಾಗುವುದು" ಎಂದು ಹೇಳಿರುವುದಾಗಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸಿಸ್ಟ್ ಲೆನಿನಿಸ್ಟ್)ದ ಶಾಸಕಾಂಗ ಪಕ್ಷದ ನಾಯಕ ಮೆಹಬೂಬ್ ಆಲಂ ಹೇಳಿದ್ದಾರೆ.
"ಬಿಜೆಪಿ ಪ್ರತಿನಿಧಿಸುವ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುತ್ತಿರುವ ಮಹಾಮೈತ್ರಿಕೂಟಕ್ಕೆ ಇದು ದೊಡ್ಡ ಲಾಭವಾಗಲಿದೆ ಎಂದು ನಾವು ಭಾವಿಸುತ್ತೇವೆ. ತೇಜಸ್ವಿ ಜಿ ಯುವ ಮತ್ತು ಶಕ್ತಿಯುತ ನಾಯಕ" ಎಂದು ಅವರು ತಿಳಿಸಿದ್ದಾರೆ.
Advertisement