ರಾಹುಲ್ ಗಾಂಧಿಯಿಂದಲೇ 113 ಬಾರಿ ಶಿಷ್ಟಾಚಾರ ಉಲ್ಲಂಘನೆ; ಕಾಂಗ್ರೆಸ್ ಭದ್ರತಾ ವೈಫಲ್ಯ ಆರೋಪಕ್ಕೆ CRPF ತಿರುಗೇಟು
ನವದೆಹಲಿ: ಭಾರತ್ ಜೋಡೋ ಯಾತ್ರೆ ವೇಳೆ ಭದ್ರತಾ ವೈಫಲ್ಯವಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಖಡಕ್ ತಿರುಗೇಟು ನೀಡಿರುವ ಕೇಂದ್ರೀಯ ಅರೆಸೇನಾ ಪಡೆ CRPF, ರಾಹುಲ್ ಗಾಂಧಿಯಿಂದಲೇ 113 ಬಾರಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಹೇಳಿದೆ.
ದೆಹಲಿ ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ಹಲವಾರು ಸಂದರ್ಭಗಳಲ್ಲಿ ಭದ್ರತಾ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ ಎಂದು ಕೇಂದ್ರ ಅರೆಸೇನಾ ಪಡೆ ಸಿಆರ್ಪಿಎಫ್ ಹೇಳಿದೆ. ಅಂತೆಯೇ ಕಾಂಗ್ರೆಸ್ ಅರೋಪಗಳನ್ನು ತಳ್ಳಿ ಹಾಕಿರುವ ಸಿಆರ್ ಪಿಎಫ್, ನಿಗದಿತ ಮಾರ್ಗಸೂಚಿಗಳ ಪ್ರಕಾರ ರಾಹುಲ್ ಗಾಂಧಿಗೆ ಭದ್ರತಾ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಮಾಡಲಾಗಿದೆ. "ರಕ್ಷಕರು ಸೂಚಿಸಿದ ಮಾರ್ಗಸೂಚಿಗಳನ್ನು ಅನುಸರಿಸಿದಾಗ ರಕ್ಷಕರ ಸುರಕ್ಷತೆಯು ಕಾರ್ಯನಿರ್ವಹಿಸುತ್ತದೆ ಎಂದೂ ಹೇಳಿದೆ.
"ಭಾರತ್ ಜೋಡೋ ಯಾತ್ರೆಯ ದೆಹಲಿ ಕಾರ್ಯಕ್ರಮದಲ್ಲಿ, ರಾಹುಲ್ ಗಾಂಧಿ ಅವರೇ' ಭದ್ರತಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ರಾಹುಲ್ ಗಾಂಧಿ ಅವರಿಂದ 113 ಬಾರಿ ಭದ್ರತಾ ಮಾರ್ಗಸೂಚಿಗಳ 'ಉಲ್ಲಂಘನೆಗಳು' ನಡೆದಿವೆ ಎಂದು ಹೇಳಿದ್ದಾರೆ.
ಡಿಸೆಂಬರ್ 24 ರ ಯಾತ್ರೆ ವೇಳೆ ತನ್ನ ನಾಯಕ ರಾಹುಲ್ ಗಾಂಧಿ ಭದ್ರತೆಯಲ್ಲಿ ಲೋಪವಾಗಿತ್ತು ಎಂದು ಕಾಂಗ್ರೆಸ್ ಆರೋಪಿಸಿತ್ತು. ಅಲ್ಲದೆ ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಕೂಡ ಬರೆದಿತ್ತು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದ ಒಂದು ದಿನದ ನಂತರ ಕೇಂದ್ರ ಪಡೆಯ ಪ್ರತಿಕ್ರಿಯೆ ಬಂದಿದೆ. ಯಾತ್ರೆಯು ರಾಜಧಾನಿಯ ಮೂಲಕ ಹಾದುಹೋದಾಗ ರಾಹುಲ್ ಗಾಂಧಿ ಅವರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ದೆಹಲಿ ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ವೇಣುಗೋಪಾಲ್ ಆರೋಪಿಸಿದ್ದಾರೆ. ಯಾತ್ರೆಯು ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದ ಸೂಕ್ಷ್ಮ ವಲಯಗಳನ್ನು ಪ್ರವೇಶಿಸಿದಾಗ ನಾಯಕನಿಗೆ ಸೂಕ್ತ ಭದ್ರತೆ ನೀಡುವಂತೆ ಅವರು ಪತ್ರದಲ್ಲಿ ಕೋರಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ