ಅಶೋಕ್ ಗೆಹ್ಲೋಟ್- ಸಚಿನ್ ಪೈಲಟ್ ಕೆಸರೆರಚಾಟಕ್ಕೆ ಬ್ರೇಕ್: ಇಬ್ಬರು ಕಾಂಗ್ರೆಸ್ ಪಕ್ಷದ ಆಸ್ತಿ; ರಾಹುಲ್ ಗಾಂಧಿ ಪ್ಯಾಚ್ ಅಪ್!

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ , ಸಚಿನ್ ಪೈಲಟ್ ಅವರನ್ನು ದೇಶದ್ರೋಹಿ ಎಂದು ಕರೆದಿರುವ ವಿವಾದ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಧ್ಯ ಪ್ರವೇಶಿಸಿದ್ದು ಇಬ್ಬರು ನಾಯಕರು ಕಾಂಗ್ರೆಸ್ ಪಕ್ಷದ ಆಸ್ತಿ ಎಂದಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on

ಭೂಪಾಲ್: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಅವರನ್ನು ದೇಶದ್ರೋಹಿ ಎಂದು ಕರೆದಿರುವ ವಿವಾದ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಧ್ಯ ಪ್ರವೇಶಿಸಿದ್ದು ಇಬ್ಬರು ನಾಯಕರು ಕಾಂಗ್ರೆಸ್ ಪಕ್ಷದ ಆಸ್ತಿ ಎಂದಿದ್ದಾರೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ಮಾತನಾಡಿದ ಅವರು ಇಬ್ಬರ ನಡುವಿನ ಜಟಾಪಟಿಯಿಂದ ಭಾರತ್‌ ಜೋಡೋ ಯಾತ್ರೆಗೆ ಹಾನಿಯಾಗುವುದಿಲ್ಲ. ಇಬ್ಬರು ನಾಯಕರು ಪಕ್ಷದ ಆಸ್ತಿಯಾಗಿದ್ದಾರೆ.

ಯಾರು ಏನು ಹೇಳುತ್ತಾರೆಂದು ನಾನು ಹೇಳಲು ಬಯಸುವುದಿಲ್ಲ, ಇಬ್ಬರು ನಾಯಕರು (ಗೆಹ್ಲೋಟ್ ಮತ್ತು ಪೈಲಟ್) ಪಕ್ಷಕ್ಕೆ ಆಸ್ತಿ ಎಂದು ನಾನು ಹೇಳಬಲ್ಲೆ. ರಾಜಸ್ಥಾನದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನಾನು ಖಾತರಿಪಡಿಸುತ್ತೇನೆ ಎಂದು ರಾಹುಲ್ ಇಂದೋರ್‌ನಲ್ಲಿ ಹೇಳಿದರು.

ಭಾರತ್ ಜೋಡೋ ಯಾತ್ರೆ ಮುಂದಿನ ವಾರ ರಾಜಸ್ಥಾನ ಪ್ರವೇಶಿಸಲಿದ್ದು, ಕಾದಾಡುತ್ತಿರುವ ಬಣಗಳ ನಡುವೆ ಶಾಂತಿ ಮರುಸ್ಥಾಪಿಸಲು ಮತ್ತು ರಾಜಸ್ಥಾನದಲ್ಲಿ ರಾಹುಲ್ ಅವರ ಯಾತ್ರೆಯನ್ನು ಬಿರುಕಿನಿಂದ ರಕ್ಷಿಸಲು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರಾಯಭಾರಿ ಕೆ ಸಿ ವೇಣುಗೋಪಾಲ್ ಮಂಗಳವಾರ ಜೈಪುರ ತಲುಪಲಿದ್ದಾರೆ.

ಇದೇ ವೇಳೆ, ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್ ಸಂದರ್ಶನವನ್ನು ಗಂಭೀರವಾಗಿ ಪರಿಗಣಿಸಿದೆ. ಶಿಸ್ತಿನ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನೂ ಸಂಸದ ಜೈರಾಮ್‌ ರಮೇಶ್‌ ನೀಡಿದ್ದಾರೆ. ಪಕ್ಷಕ್ಕೆ ಗೆಹ್ಲೋಟ್ ಅವರ ಅನುಭವ ಮತ್ತು ಪೈಲಟ್‌ನ ಶಕ್ತಿ ಅಷ್ಟೇ ಮುಖ್ಯ ಎಂದು ಹೇಳಿದ್ದರು. ಪಕ್ಷದ ಸಂಘಟನೆಯನ್ನು ಬಲಪಡಿಸಬಲ್ಲವರನ್ನು ಪಕ್ಷದ ಉನ್ನತ ನಾಯಕತ್ವವು ರಾಜಸ್ಥಾನದಲ್ಲಿ ಆಯ್ಕೆ ಮಾಡುತ್ತದೆ. ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದರೆ ಅದನ್ನು ತೆಗೆದುಕೊಳ್ಳುತ್ತೇವೆ, ಅಥವಾ ರಾಜಿ ಮಾಡಿಕೊಳ್ಳಬೇಕಾಗಿ ಬಂದರೆ ಅದನ್ನೂ ಮಾಡಲಾಗುವುದು ಎಂದಿದ್ದರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಥಿಯಿಂದ ಸ್ಪರ್ಧೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಾಹುಲ್‌, “ಈ ಬಗ್ಗೆ ಒಂದು ಅಥವಾ ಒಂದುವರೆ ವರ್ಷದ ನಂತರ ತೀರ್ಮಾನಿಸಲಾಗುವುದು. ಪ್ರಸ್ತುತ ನನ್ನ ಗಮನ ಎಲ್ಲವೂ ಭಾರತ್‌ ಜೋಡೋ ಯಾತ್ರೆ ಕುರಿತಾಗಿದೆ,’ ಎಂದು ಹೇಳಿದರು. ಭಾರತ್ ಜೋಡೋ ಯಾತ್ರೆ ನನಗೆ ತಾಳ್ಮೆ ಕಲಿಸಿದೆ, ನಿಜವಾದ ಭಾರತದ ಕಲ್ಪನೆಗಾಗಿ ನಿಲ್ಲುವುದು ತಪಸ್ಸು , ಮೊದಲು ನಾನು ಒಂದು-ಎರಡು ಗಂಟೆಗಳಲ್ಲಿ ಕಿರಿಕಿರಿಗೊಳ್ಳುತ್ತಿದ್ದೆ. ಈಗ ನಾನು ಎಂಟು ಗಂಟೆಗಳವರೆಗೆ ತಾಳ್ಮೆಯಿಂದ ಇರುತ್ತೇನೆ ಎಂದು ರಾಹುಲ್  ಗಾಂಧಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com