ನವದೆಹಲಿ: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರ ನಿವಾಸದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಎರಡು ಕಾರುಗಳನ್ನು ಧ್ವಂಸಗೊಳಿಸಿದ್ದಾರೆಂದು ಸೋಮವಾರ ತಿಳಿದುಬಂದಿದೆ.
ಈ ಕುರಿತು ಸ್ವತಃ ಸ್ವಾತಿ ಮಲಿವಾಲ್ ಅವರೇ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಮಾಹಿತಿ ನೀಡಿದ್ದಾರೆ.
ಈಗಷ್ಟೇ ಸ್ವಲ್ಪ ಗಂಟೆಗಳ ಹಿಂದೆ ದುಷ್ಕರ್ಮಿಗಳು ನನ್ನ ಮನೆಯ ಮೇಲೆ ದಾಳಿ ನಡೆಸಿದ್ದು, ಎರಡು ಕಾರುಗಳನ್ನು ಧ್ವಂಸಗೊಳಿಸಿದ್ದಾರೆ. ʻಧ್ವಂಸಗೊಳಿಸಲಾದ ಎರಡು ಕಾರುಗಳಲ್ಲಿ ಒಂದು ನನಗೆ ಮತ್ತು ಇನ್ನೊಂದು ನನ್ನ ತಾಯಿಗೆ ಸೇರಿದ್ದು. ಮನೆಯ ಸುತ್ತ ಗಾಜಿನ ಚೂರುಗಳು ಬಿದ್ದಿದ್ದರಿಂದ ಮನೆ ಪ್ರವೇಶಿಸುವುದು ಕಷ್ಟವಾಯಿತು. ಅದೃಷ್ಟವಶಾತ್, ಘಟನೆ ನಡೆದ ಸಮಯದಲ್ಲಿ ನನ್ನ ತಾಯಿ ಮತ್ತು ನಾನು ಮನೆಯಲ್ಲಿ ಇರಲಿಲ್ಲ. ಇದ್ದಿದ್ದರೆ ಏನಾಗುತ್ತಿತ್ತು ಎಂದು ನನಗೆ ತಿಳಿದಿಲ್ಲ. ನೀವು ಏನು ಮಾಡಿದರೂ ನಾನು ಹೆದರುವುದಿಲ್ಲʼ ಎಂದು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್'ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಪ್ರತಿಕ್ರಿಯೆ ನೀಡಿದ್ದು, ಕಳೆದ ಕೆಲವು ತಿಂಗಳುಗಳಲ್ಲಿ ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ತುಂಬಾ ಹದಗೆಟ್ಟಿದೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷರೂ ಸುರಕ್ಷಿತವಾಗಿಲ್ಲ. ಬಹಿರಂಗ ಕೊಲೆಗಳು ನಡೆಯುತ್ತಿವೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿಪಡಿಸಲು ಲೆಫ್ಟಿನೆಂಟ್ ಗವರ್ನರ್ ಸಾಹೇಬರು ಸ್ವಲ್ಪ ಸಮಯವನ್ನು ನೀಡುತ್ತಾರೆಂಬು ಭಾವಿಸುತ್ತೇನೆಂದು ತಿಳಿಸಿದ್ದಾರೆ.
Advertisement