ಪಿಎಫ್ಐ ಸಂಘಟನೆ ನಿಷೇಧಕ್ಕೆ ಆರ್ ಎಸ್ಎಸ್ ನ ಮುಸ್ಲಿಂ ಶಾಖೆ ಕೇಂದ್ರ ಸರ್ಕಾರಕ್ಕೆ ಆಗ್ರಹ
ನವದೆಹಲಿ: ಹಲವು ಕೇಂದ್ರೀಯ ತನಿಖಾ ತಂಡಗಳು ತೀವ್ರಗಾಮಿ ಸಂಘಟನೆ ಪಿಎಫ್ಐ ವಿರುದ್ಧ ದಾಳಿ ನಡೆಸಿದ ಬೆನ್ನಲ್ಲೇ ಆರ್ ಎಸ್ಎಸ್ ನ ಮುಸ್ಲಿಂ ಶಾಖೆ ಪಿಎಫ್ಐ ನ್ನು ಸಂಪೂರ್ಣ ನಿಷೇಧಿಸಬೇಕೆಂದು ಆಗ್ರಹಿಸಿವೆ.
ಆರ್ ಎಸ್ಎಸ್ ನ ಮುಸ್ಲಿಂ ರಾಷ್ಟ್ರೀಯ ಮಂಚ್, ತಕ್ಷಣವೇ ಕೇಂದ್ರ ಸರ್ಕಾರ ಪಿಎಫ್ಐ ನ್ನು ನಿಷೇಧಿಸಬೇಕೆಂದು ಆಗ್ರಹಿಸಿದೆ. ಪಿಎಫ್ಐ ಸಂಘಟನೆ ದೇಶಕ್ಕೆ ಮಾರಕವಾಗುತ್ತಿದೆ ಎನ್ನುವುದಾದರೆ ಅದನ್ನು ಇನ್ನೂ ಏಕೆ ನಿಷೇಧಿಸಿಲ್ಲ? ಅದಕ್ಕೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನೇಕೆ ಮುಟ್ಟುಗೋಲು ಹಾಕಿಕೊಂಡಿಲ್ಲ? ಅದರ ಆಸ್ತಿಗಳನ್ನು ಏಕೆ ವಶಕ್ಕೆ ಪಡೆದಿಲ್ಲ? ಅದರ ಪದಾಧಿಕಾರಿಗಳು ಹಾಗೂ ನಾಯಕರ ವಿರುದ್ಧ ಕಠಿಣ ಕ್ರಮವನ್ನೇಕೆ ಕೈಗೊಂಡಿಲ್ಲ? ಎಂದು ಪ್ರಶ್ನಿಸಿದೆ.
ಆದರೆ ಕೇಂದ್ರ ಸರ್ಕಾರ ಕೆಲವೇ ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಗೆ ಪಿಎಫ್ಐ ನಿಷೇಧದ ಬಗ್ಗೆ ಮಾಹಿತಿ ನೀಡಿದ್ದು, ಹಲವು ರಾಜ್ಯಗಳಲ್ಲಿ ಈಗಾಗಲೇ ಪಿಎಫ್ಐ ನಿಷೇಧಕ್ಕೊಳಗಾಗಿದ್ದು, ಈ ತೀವ್ರಗಾಮಿ ಸಂಘಟನೆಯನ್ನು ನಿಷೇಧಿಸಲಾಗುತ್ತದೆ ಎಂದು ಹೇಳಿಕೆ ನೀಡಿದೆ.
ರಾಷ್ಟ್ರೀಯ ಸಂಘಟನೆಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿರುವ ಮುಸ್ಲಿಂ ರಾಷ್ಟ್ರೀಯ ಮಂಚ್ ನ ರಾಷ್ಟ್ರೀಯ ಸಂಚಾಲಕ ಮೊಹಮ್ಮದ್ ಅಫ್ಜಲ್ ಹಾಗೂ ಶಹೀದ್ ಅಖ್ತರ್, ಪಿಎಫ್ಐ ನ್ನು ಸಿಮಿ ಉಗ್ರ ಸಂಘಟನೆಗಿಂತಲೂ ಮಾರಕವಾದ ಸಂಘಟನೆ ಎಂದು ಹೇಳಿದ್ದಾರೆ. ಕೇಂದ್ರೀಯ ತನಿಖಾ ದಳ ನಡೆಸಿದ ದಾಳಿ ವೇಳೆ ಸಂಗ್ರಹವಾದ ದಾಖಲೆಗಳೇ ಈ ಸಂಘಟನೆಯನ್ನು ನಿಷೇಧಿಸುವುದಕ್ಕೆ ಸಾಕಾಗುತ್ತವೆ ಎಂದೂ ಅವರು ಅಭಿಪ್ರಾಯಪಟ್ಟಿದ್ದು, ತಕ್ಷಣವೇ ಕೇಂದ್ರ ಪಿಎಫ್ಐ ಗೆ ನಿಷೇಧ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ