ಏಕನಾಥ್ ಶಿಂಧೆ ಬಣವು ಬಿಜೆಪಿಯ ತೊಡೆಯ ಮೇಲೆ ಕುಳಿತಿದೆ: ಉದ್ಧವ್ ಠಾಕ್ರೆ ಬಣ ಸುಪ್ರೀಂಗೆ ಪ್ರತಿಕ್ರಿಯೆ

ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಪಕ್ಷದ ಗುಂಪು 'ತಮ್ಮ ಪಕ್ಷ ವಿರೋಧಿ ನಿಲುವನ್ನು ಸಮರ್ಥಿಸಿಕೊಳ್ಳಲು, ಸುಳ್ಳಿನ ಕಥೆಯನ್ನು ಹೆಣೆಯುತ್ತಿದೆ' ಎಂದು ಉದ್ಧವ್ ಠಾಕ್ರೆ ಅವರ ಶಿವಸೇನೆ ಬಣ ಆರೋಪಿಸಿದೆ. ಇಂದು ಸುಪ್ರೀಂ ಕೋರ್ಟ್‌ಗೆ ನೀಡಿರುವ ಉತ್ತರದಲ್ಲಿ ಠಾಕ್ರೆ ಬಣ ಈ ಆರೋಪಗಳನ್ನು ಮಾಡಿದೆ.
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಪಕ್ಷದ ಗುಂಪು 'ತಮ್ಮ ಪಕ್ಷ ವಿರೋಧಿ ನಿಲುವನ್ನು ಸಮರ್ಥಿಸಿಕೊಳ್ಳಲು, ಸುಳ್ಳಿನ ಕಥೆಯನ್ನು ಹೆಣೆಯುತ್ತಿದೆ' ಎಂದು ಉದ್ಧವ್ ಠಾಕ್ರೆ ಅವರ ಶಿವಸೇನೆ ಬಣ ಆರೋಪಿಸಿದೆ. ಮಹಾರಾಷ್ಟ್ರದ ಶಿವಸೇನೆ ಪಕ್ಷವು ಯಾರ ಹಿಡಿತದಲ್ಲಿರಬೇಕು ಎಂಬ ಕುರಿತು ನಿರ್ಣಾಯಕ ವಿಚಾರಣೆಗೆ ಮುಂಚಿತವಾಗಿ ಇಂದು ಸುಪ್ರೀಂ ಕೋರ್ಟ್‌ಗೆ ನೀಡಿರುವ ಉತ್ತರದಲ್ಲಿ ಠಾಕ್ರೆ ಬಣ ಈ ಆರೋಪಗಳನ್ನು ಮಾಡಿದೆ.

'ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆಗಿನ ಶಿವಸೇನೆಯ ಮೈತ್ರಿಯ ಬಗ್ಗೆ ಮತದಾರರು ಕೋಪಗೊಂಡಿದ್ದಾರೆ ಎಂದು ಶಿಂಧೆ ಬಣ ಹೇಳುತ್ತಿದೆ. ವಾಸ್ತವವೆಂದರೆ, ಈ ಶಾಸಕರು ಎರಡೂವರೆ ವರ್ಷಗಳ ಕಾಲ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ, ಆಗ ಅವರು ಅದನ್ನು ಎಂದಿಗೂ ಹೇಳಲಿಲ್ಲ' ಎಂದು ಠಾಕ್ರೆ ಬಣ ಸುಪ್ರೀಂ ಕೋರ್ಟ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದೆ.

'ಬಹುಮತ ಸಾಭೀತು ಮತ್ತು ಶಿಂಧೆ ಅವರನ್ನು ನೂತನ ಮುಖ್ಯಮಂತ್ರಿಯಾಗಿ ನೇಮಕ ಮಾಡುವುದು ಸೇರಿದಂತೆ ಎಲ್ಲಾ ಘಟನೆಗಳು ಕೂಡ ವಿಷದ ಮರದ ಹಣ್ಣುಗಳಾಗಿವೆ. ಈ ಹಣ್ಣುಗಳ ಬೀಜಗಳನ್ನು ತಪ್ಪಿತಸ್ಥ ಶಾಸಕರು ಸುಪ್ರೀಂ ಕೋರ್ಟ್‌ನಲ್ಲಿ ಕೂಡ ನಾಚಿಕೆಯಿಲ್ಲದೆ ಬಿತ್ತಿದ್ದಾರೆ' ಎಂದು  ದೂರಿದೆ.

'ಬಂಡಾಯ ಶಾಸಕರು ತಮ್ಮ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮುಚ್ಚಿಹಾಕಲು 'ನಿಜವಾದ ಸೇನೆ'ಯ ಹಕ್ಕುಗಳನ್ನು ಮುಂದಿಟ್ಟುಕೊಂಡು ಚುನಾವಣಾ ಆಯೋಗವನ್ನು ಸಂಪರ್ಕಿಸಿದ್ದಾರೆ. ಬಂಡಾಯ ಶಾಸಕರು ಮಹಾರಾಷ್ಟ್ರ ತೊರೆದು ಬಿಜೆಪಿ ಆಡಳಿತವಿರುವ ಗುಜರಾತ್‌ಗೆ ಹೋದರು ಮತ್ತು ಅಸ್ಸಾಂನಲ್ಲಿ ಬಿಜೆಪಿ ತೊಡೆಯ ಮೇಲೆ ಏಕೆ ಕುಳಿತರು. ಗುಜರಾತ್ ಮತ್ತು ಅಸ್ಸಾಂನಲ್ಲಿ ಶಿವಸೇನೆಯ ಕಾರ್ಯಕರ್ತರು ಇರಲಿಲ್ಲ. ಆದರೆ, ಬಿಜೆಪಿ ಕಾರ್ಯಕರ್ತರು ಮಾತ್ರ ಇವರಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ' ಎಂದು ಆರೋಪಿಸಿದ್ದಾರೆ.

ಜೆಪಿಯ ಬೆಂಬಲದೊಂದಿಗೆ ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ರಚಿಸಿರುವ ಶಿಂಧೆ ನೇತೃತ್ವದ ಬಣವು ಶಿವಸೇನೆಯು ಬಿಜೆಪಿಯ ಹಳೆಯ ಮಿತ್ರ ಎಂದು ಕರೆಯುತ್ತಿದೆ. ಆದರೆ, ಬಿಜೆಪಿ ಎಂದಿಗೂ ಶಿವಸೇನೆಗೆ ಸಮಾನ ಸ್ಥಾನಮಾನವನ್ನು ನೀಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಣ ದೂರಿದೆ.

'ಮಹಾ ವಿಕಾಸ್ ಅಘಾಡಿ ಸಮ್ಮಿಶ್ರ ಸರ್ಕಾರದಲ್ಲಿ ಶಿವಸೇನೆಯ ನಾಯಕನಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿತು. ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಈ ಶಾಸಕರು ಲಾಭವನ್ನು ಪಡೆಯುತ್ತಲೇ ಇದ್ದರೂ. ಹಿಂದೆಂದೂ ಮತದಾರರು ಮತ್ತು ಕಾರ್ಯರರ್ತರಲ್ಲಿ ಅಸಮಾಧಾನವಿರುವ ವಿಷಯವನ್ನು ಪ್ರಸ್ತಾಪಿಸಿರಲಿಲ್ಲ. ಈ ಸರ್ಕಾರದ ಭಾಗವಾಗಲು ಅವರಿಗೆ ಕಷ್ಟವಾಗಿದ್ದರೆ, ಮೊದಲ ದಿನವೇ ಸಂಪುಟಕ್ಕೆ ಸೇರುತ್ತಿರಲಿಲ್ಲ ಎಂದು ಠಾಕ್ರೆ ಬಣವು ಆರೋಪಿಸಿದೆ.

ಬಂಡಾಯ ಶಾಸಕರ ಅನರ್ಹತೆ ಕುರಿತು ನಿರ್ಧಾರ ಕೈಗೊಳ್ಳುವವರೆಗೆ ಶಿವಸೇನೆ ಪಕ್ಷದ ಮೇಲೆ ಯಾರ ಹಿಡಿತವಿದೆ ಎಂಬುದನ್ನು ಚುನಾವಣಾ ಆಯೋಗ ನಿರ್ಧರಿಸುವುದನ್ನು ತಡೆಯುವಂತೆ ಠಾಕ್ರೆ ತಂಡ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಬಿಜೆಪಿಯ ಬೆಂಬಲದೊಂದಿಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದ ನಂತರ ಏಕನಾಥ್ ಶಿಂಧೆ ಅವರ ತಂಡವು ಇದುವೇ "ನಿಜವಾದ ಶಿವಸೇನೆ" ಎಂದು ಹೇಳಿಕೊಂಡಿದೆ.

ಮಹಾರಾಷ್ಟ್ರದ ಶಿವಸೇನೆ ಪಕ್ಷವನ್ನು ಯಾರು ಪ್ರತಿನಿಧಿಸುತ್ತಾರೆ ಎಂಬುದನ್ನು ಸಾಬೀತುಪಡಿಸಲು ಆಗಸ್ಟ್ 8 ರೊಳಗೆ ದಾಖಲೆಗಳನ್ನು ಒದಗಿಸುವಂತೆ ಚುನಾವಣಾ ಆಯೋಗವು ಎರಡೂ ಸೇನಾ ಬಣಗಳಿಗೆ ತಿಳಿಸಿದೆ. ಆ ಬಳಿಕವಷ್ಟೇ ಚುನಾವಣಾ ಆಯೋಗವು ಪ್ರಕರಣದ ವಿಚಾರಣೆ ನಡೆಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com