ನವದೆಹಲಿ: ಬಿಜೆಪಿಯು ದೆಹಲಿಯ ತನ್ನ ನಾಲ್ವರು ಶಾಸಕರನ್ನು ಸಂಪರ್ಕಿಸಿದ್ದು, ಪಕ್ಷ ಬದಲಿಸಿ ಕೇಸರಿ ಪಕ್ಷಕ್ಕೆ ಸೇರುವಂತೆ ಕೇಳಿಕೊಂಡಿದೆ ಎಂದು ಆಮ್ ಆದ್ಮಿ ಪಕ್ಷ(ಎಎಪಿ) ಬುಧವಾರ ಆರೋಪಿಸಿದೆ.
ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಎಪಿ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು, ಶಾಸಕರಾದ ಅಜಯ್ ದತ್, ಸಂಜೀವ್ ಝಾ, ಸೋಮನಾಥ್ ಭಾರತಿ ಮತ್ತು ಕುಲದೀಪ್ ಕುಮಾರ್ ಅವರನ್ನು ಭಾರತೀಯ ಜನತಾ ಪಕ್ಷ(ಬಿಜೆಪಿ)ದ ನಾಯಕರು ಸಂಪರ್ಕಿಸಿದ್ದಾರೆ ಎಂದು ಹೇಳಿದರು.
"ಈ ನಾಲ್ವರು ಎಎಪಿ ಶಾಸಕರು ಬಿಜೆಪಿಗೆ ಸೇರಿದರೆ ತಲಾ 20 ಕೋಟಿ ರೂ. ಮತ್ತು ಇತರ ಶಾಸಕರನ್ನು ತಮ್ಮೊಂದಿಗೆ ಕರೆತಂದರೆ 25 ಕೋಟಿ ರೂ.ಗಳನ್ನು ನೀಡುವ ಭರವಸೆ ನೀಡಲಾಗಿದೆ" ಎಂದು ಸಂಜ್ ಸಿಂಗ್ ದೂರಿದ್ದಾರೆ.
"ನಮ್ಮ ಶಾಸಕರು ಆಫರ್ ಒಪ್ಪಿಕೊಂಡು ಬಿಜೆಪಿ ಸೇರದಿದ್ದರೆ (ದೆಹಲಿ ಉಪಮುಖ್ಯಮಂತ್ರಿ) ಮನೀಶ್ ಸಿಸೋಡಿಯಾ ಅವರಂತೆ ಸಿಬಿಐ ಮತ್ತು ಇಡಿ ದಾಖಲಿಸುವ ಸುಳ್ಳು ಪ್ರಕರಣಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿರುವುದಾಗಿ" ಎಎಪಿ ನಾಯಕ ಹೇಳಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು, ಇದು "ಬಹಳ ಗಂಭೀರ ವಿಷಯ" ಮತ್ತು "ಪರಿಸ್ಥಿತಿಯ ಅವಲೋಕನಕ್ಕಾಗಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯ(ಪಿಎಸಿ) ಸಭೆಯನ್ನು ಸಂಜೆ 4 ಗಂಟೆಗೆ ತಮ್ಮ ನಿವಾಸದಲ್ಲಿ ಕರೆಯಲಾಗಿದೆ" ಎಂದು ಹೇಳಿದ್ದಾರೆ.
Advertisement