ಮುಂಬೈ: ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶ ನಿರೀಕ್ಷಿತ. ಆದರೆ ಅದು ರಾಷ್ಟ್ರದ ಮನಸ್ಥಿತಿಯನ್ನು ಬಿಂಬಿಸುವುದಿಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್ಸಿಪಿ)ದ ಅಧ್ಯಕ್ಷ ಶರದ್ ಪವಾರ್ ಅವರು ಗುರುವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ನಲ್ಲಿ ಬಿಜೆಪಿ ದಾಖಲೆಯ ಗೆಲುವಿನತ್ತ ಸಾಗುತ್ತಿದ್ದು, ಐದು ಸುತ್ತಿನ ಮತ ಏಣಿಕೆ ನಂತರ ಲಭ್ಯವಾದ ಮಾಹಿತಿಗಳ ಪ್ರಕಾರ, ರಾಜ್ಯದ 182 ಸ್ಥಾನಗಳ ಪೈಕಿ 155 ಸ್ಥಾನಗಳಲ್ಲಿ ಕೇಸರಿ ಪಕ್ಷ ಮುನ್ನಡೆ ಸಾಧಿಸಿದೆ.
ಎನ್ಸಿಪಿಯ ರಾಜ್ಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶರದ್ ಪವಾರ್, "ಗುಜರಾತ್ ತೀರ್ಪು ನಿರೀಕ್ಷಿತ, ಏಕೆಂದರೆ ಸಂಪೂರ್ಣ ಇಡೀ ದೇಶದ ಆಡಳಿತ ಯಂತ್ರವನ್ನು ಒಂದು ನಿರ್ದಿಷ್ಟ ರಾಜ್ಯದ ಅನುಕೂಲಕ್ಕಾಗಿ ಬಳಸಲಾಗಿದೆ ಮತ್ತು ಯೋಜನೆಗಳನ್ನು ಅಲ್ಲಿಗೆ ವರ್ಗಾಯಿಸಲಾಗಿದೆ" ಎಂದು ಹೇಳಿದರು.
"ಗುಜರಾತ್ ಫಲಿತಾಂಶ ದೇಶದ ಮನಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ, ಬಿಜೆಪಿಯನ್ನು ಸೋಲಿಸಿದ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಕ ಚುನಾವಣೆಯ ಫಲಿತಾಂಶಗಳು ಅದನ್ನು ಸಾಬೀತುಪಡಿಸುತ್ತವೆ" ಎಂದು ಮಾಜಿ ಕೇಂದ್ರ ಸಚಿವರು ಹೇಳಿದ್ದಾರೆ.
Advertisement