ತವಾಂಗ್ ಘರ್ಷಣೆಯಲ್ಲಿ ನಮ್ಮ ಸೈನಿಕರು ಹುತಾತ್ಮರಾಗಿಲ್ಲ, ಗಂಭೀರ ಗಾಯಗಳೂ ಆಗಿಲ್ಲ; ಭಾರತ ತಕ್ಕ ಉತ್ತರ ನೀಡುತ್ತದೆ: ರಾಜನಾಥ್ ಸಿಂಗ್
ಭಾರತ ಮತ್ತು ಚೀನಾ ಸೈನಿಕರ ನಡುವೆ ತವಾಂಗ್ ನ ಯಾಂಗ್ಟ್ಸೆ ಪ್ರದೇಶದಲ್ಲಿ ನಡೆದ ಘರ್ಷಣೆಯ ಕುರಿತು ಲೋಕಸಭೆಗೆ ಇಂದು ಮಂಗಳವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದರು. ನಮ್ಮ ಸೈನಿಕರಿಗೆ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Published: 13th December 2022 12:48 PM | Last Updated: 13th December 2022 01:51 PM | A+A A-

ಲೋಕಸಭೆಯಲ್ಲಿ ಉತ್ತರ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿರೋಧ ಪಕ್ಷ ನಾಯಕರು ಸದನದಿಂದ ಹೊರನಡೆಯುತ್ತಿರುವುದು
ನವದೆಹಲಿ: ಭಾರತ ಮತ್ತು ಚೀನಾ ಸೈನಿಕರ ನಡುವೆ ತವಾಂಗ್ ನ(Tawang sector) ಯಾಂಗ್ಟ್ಸೆ ಪ್ರದೇಶದಲ್ಲಿ ನಡೆದ ಘರ್ಷಣೆಯ ಕುರಿತು ಲೋಕಸಭೆಗೆ ಇಂದು ಮಂಗಳವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದರು. ನಮ್ಮ ಸೈನಿಕರಿಗೆ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಮ್ಮ ಗಡಿಯೊಳಗೆ ಚೀನೀ ಸೈನಿಕರ ಉಲ್ಲಂಘನೆಯ ಪ್ರಯತ್ನವನ್ನು ನಿಲ್ಲಿಸಲು ನಮ್ಮ ಸಶಸ್ತ್ರ ಪಡೆಗಳು ಯಾವಾಗಲೂ ಸಿದ್ಧವಾಗಿವೆ ಎಂದು ತಿಳಿಸಿದರು. ನಮ್ಮ ಸಶಸ್ತ್ರ ಪಡೆಗಳು ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಬದ್ಧವಾಗಿವೆ, ನಮ್ಮ ಸಶಸ್ತ್ರ ಪಡೆಗಳ ಸಾಮರ್ಥ್ಯ, ಶೌರ್ಯ ಮತ್ತು ಬದ್ಧತೆಯನ್ನು ದೇಶದ ನಾಗರಿಕರು ಮತ್ತು ಸರ್ಕಾರ ಗೌರವಿಸುತ್ತದೆ ಎಂಬ ವಿಶ್ವಾಸವಿದೆ ಎಂದರು.
ಘರ್ಷಣೆ ಬಗ್ಗೆ ಇಂದು ಲೋಕಸಭೆಯಲ್ಲಿ ರಾಜನಾಥ್ ಸಿಂಗ್ ಹೇಳಿಕೆ: ಡಿಸೆಂಬರ್ 9 ರಂದು, ಚೀನಾದ ಗಡಿ ವಾಸ್ತವ ರೇಖೆಯಲ್ಲಿ ಚೀನಾದ ಸೇನಾಪಡೆ ಯೋಧರು ಯಾಂಗ್ಟ್ಸೆ, ತವಾಂಗ್ ಸೆಕ್ಟರ್ನಲ್ಲಿ ಆಕ್ರಮಣ ಮಾಡಿಕೊಂಡು ಒಳನುಸುಳಿದರು. ಅಲ್ಲಿನ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿತು. ಇದನ್ನು ನಮ್ಮ ಪಡೆಗಳು ದೃಢವಾದ ರೀತಿಯಲ್ಲಿ ನಿಭಾಯಿಸಿದರು.
ಇದನ್ನೂ ಓದಿ: ತವಾಂಗ್ ಘರ್ಷಣೆ: ಅರುಣಾಚಲ ಪ್ರದೇಶದಲ್ಲಿ ಭಾರತೀಯ ಯುದ್ಧ ವಿಮಾನಗಳ ಗಸ್ತು ಆರಂಭ
ಈ ಮುಖಾಮುಖಿ ಘರ್ಷಣೆಯಲ್ಲಿ ಎರಡೂ ಕಡೆಯ ಕೆಲವು ಸೈನಿಕರು ಗಾಯಗೊಂಡರು. ನಮ್ಮ ಸೈನಿಕರಲ್ಲಿ ಯಾರೂ ಹುತಾತ್ಮರಾಗಿಲ್ಲ ಮತ್ತು ಗಂಭೀರ ಗಾಯವನ್ನು ಅನುಭವಿಸಿಲ್ಲ. ಭಾರತೀಯ ಸೇನಾ ಕಮಾಂಡರ್ಗಳ ಸಮಯೋಚಿತ ಮಧ್ಯಸ್ಥಿಕೆಯೊಂದಿಗೆ ಗಡಿ ವಾಸ್ತವ ರೇಖೆಯಿಂದ ಸದ್ಯ ಸೈನಿಕರು ಹಿಂದಕ್ಕೆ ಹೋಗಿದ್ದಾರೆ, ಘರ್ಷಣೆಯಲ್ಲಿ ಎರಡೂ ಕಡೆಯ ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದರು.
ಈ ವಿಷಯವನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾದೊಂದಿಗೆ ಚರ್ಚಿಸಲಾಗುವುದು. ನಮ್ಮ ಸೇನಾಪಡೆ ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಸಂಪೂರ್ಣವಾಗಿ ಬದ್ಧವಾಗಿವೆ. ಚೀನಾ ವಿರುದ್ಧ ಯಾವುದೇ ಪ್ರಯತ್ನವನ್ನು ತಡೆಯಲು ಯಾವಾಗಲೂ ಸಿದ್ಧವಾಗಿದೆ ಎಂದರು.
Making a statement in Lok Sabha https://t.co/H17eHCiW0x
— Rajnath Singh (@rajnathsingh) December 13, 2022
ಸದನದಿಂದ ಹೊರನಡೆದ ವಿರೋಧ ಪಕ್ಷ ಸದಸ್ಯರು: ತವಾಂಗ್ ಘಟನೆಯ ಬಗ್ಗೆ ರಕ್ಷಣಾ ಸಚಿವರಿಂದ ವಿವರಣೆ ಕೇಳಲು, ವಿವಿಧ ವಿರೋಧ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಗದ್ದಲವನ್ನು ಸೃಷ್ಟಿಸಿದರು. ಅವರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು. ಬಳಿಕ ಕಾಂಗ್ರೆಸ್, ಎನ್ಸಿಪಿ, ಡಿಎಂಕೆ ಮತ್ತು ಎಐಎಡಿಎಂಕೆ ಸದಸ್ಯರು ಸದನದಿಂದ ಹೊರನಡೆದರು.