18 ವರ್ಷ ಮೇಲ್ಪಟ್ಟವರಿಗೆ 'ಬೂಸ್ಟರ್ ಡೋಸ್' ಆಗಿ ಭಾರತ್ ಬಯೋಟೆಕ್ ನ ನಾಸಲ್ ವ್ಯಾಕ್ಸಿನ್ ಗೆ 'ಕೇಂದ್ರ' ಅನುಮೋದನೆ, ಇಂದಿನಿಂದ ಕೋವಿನ್ ನಲ್ಲೂ ಲಭ್ಯ!

ಜಗತ್ತಿನಾದ್ಯಂತ ಕೊರೋನಾ ಮಹಾಮಾರಿ ಮತ್ತೆ ಆರ್ಭಟ ಮುಂದುವರೆಸುತ್ತಿರುವಂತೆಯೇ ಇತ್ತ ಕೇಂದ್ರ ಸರ್ಕಾರ ಭಾರತ್ ಬಯೋಟೆಕ್ ನ ಮೂಗಿನ ಮೂಲಕ ನೀಡುವ ಕೊರೊನಾ ಲಸಿಕೆಗೆ ಔಷಧ ನಿಯಂತ್ರಣ ಪ್ರಾಧಿಕಾರ ಈಗಾಗಲೇ ಅನುಮೋದನೆ ನೀಡಿದ್ದು, 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಆಗಿ ಇದನ್ನು ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. 
ನಾಸಲ್ ವ್ಯಾಕ್ಸಿನ್
ನಾಸಲ್ ವ್ಯಾಕ್ಸಿನ್

ನವದೆಹಲಿ: ಜಗತ್ತಿನಾದ್ಯಂತ ಕೊರೋನಾ ಮಹಾಮಾರಿ ಮತ್ತೆ ಆರ್ಭಟ ಮುಂದುವರೆಸುತ್ತಿರುವಂತೆಯೇ ಇತ್ತ ಕೇಂದ್ರ ಸರ್ಕಾರ ಭಾರತ್ ಬಯೋಟೆಕ್ ನ ಮೂಗಿನ ಮೂಲಕ ನೀಡುವ ಕೊರೊನಾ ಲಸಿಕೆಗೆ ಔಷಧ ನಿಯಂತ್ರಣ ಪ್ರಾಧಿಕಾರ ಈಗಾಗಲೇ ಅನುಮೋದನೆ ನೀಡಿದ್ದು, 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಆಗಿ ಇದನ್ನು ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. 

ಈ ನಾಸಲ್ ಲಸಿಕೆಗೆ ದರ ನಿಗದಿಪಡಿಸುವ ಕಾರ್ಯ ನಡೆಯುತ್ತಿದ್ದು, ಬಳಿಕ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇಂದು ಸಂಜೆ ವೇಳೆಗೆ ಈ ನಾಸಲ್ ವ್ಯಾಕ್ಸಿನ್ ಅನ್ನು ಕೋವಿನ್  ಆ್ಯಪ್ ವ್ಯವಸ್ಥೆಗೆ ಸೇರಿಸುವ ಕೆಲಸವಾಗಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಈಗಾಗಲೇ ಕೋ ವ್ಯಾಕ್ಸಿನ್ ಲಸಿಕೆ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದೀಗ ಸಿದ್ದಗೊಂಡಿರುವ ನಾಸಲ್ ವ್ಯಾಕ್ಸಿನ್ ಮುಂದಿನ ವಾರದೊಳಗೆ ಲಭ್ಯವಿರುವಂತೆ ನೋಡಿಕೊಳ್ಳಲಾಗುತ್ತದೆ. ಈಗ ಕಂಡು ಬರುತ್ತಿರುವ ಓಮಿಕ್ರಾನ್ ಉಪತಳಿ BF.7 ಗೆ ನಾಸಲ್ ವ್ಯಾಕ್ಸಿನ್ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ. ನಾಸಲ್ ವ್ಯಾಕ್ಸಿನ್ ಮೂರನೇ ಹಂತದ ಪರೀಕ್ಷೆಯೂ ಪೂರ್ಣಗೊಂಡಿದ್ದು, ಫಲಿತಾಂಶ ತೃಪ್ತಿದಾಯಕವಾಗಿದೆ.

ಹೀಗಾಗಿಯೇ ನಾಸಲ್ ವ್ಯಾಕ್ಸಿನ್ ಅನ್ನು 18 ವರ್ಷ ಮೇಲ್ಪಟ್ಟವರಿಗೆ ನೀಡಲು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಜೇಷನ್ (CDSCO) ಹಸಿರು ನಿಶಾನೆ ತೋರಿಸಿದ್ದು, ಇದೀಗ ಕೋವಿನ್ ಪೋರ್ಟಲ್ ಮೂಲಕ ಲಭ್ಯವಾಗಲಿದೆ. ಇದು ಮೂಗಿನ ಮೂಲಕ ನೀಡುವ ಲಸಿಕೆ ಆಗಿರುವುದರಿಂದ ಇದಕ್ಕೆ ಇತರೆ ಲಸಿಕೆ ನೀಡುವಂತೆ ಪರಿಣಿತರ ಅಗತ್ಯವಿರುವುದಿಲ್ಲ. ಹೀಗಾಗಿ ಇದು ಎಲ್ಲರಿಗೂ ಸೂಕ್ತ ಎಂದು ಹೇಳಲಾಗುತ್ತಿದ್ದು, ಬೂಸ್ಟರ್ ಡೋಸ್ ಆಗಿ ಮುಂದಿನ ವಾರದಿಂದ ಲಭ್ಯವಾಗುವ ನಿರೀಕ್ಷೆ ಇದೆ.

ಮೊದಲಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಇದು ಲಭ್ಯವಾಗಲಿದ್ದು, ಬಳಿಕ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಗಲಿದೆ. ಚುಚ್ಚುಮದ್ದಿಗೆ ಹೆದರುವವರಿಗೆ ನಾಸಲ್‌ ವ್ಯಾಕ್ಸಿನ್ ವರದಾನವಾಗಿದ್ದು, ಉಳಿದ ಲಸಿಕೆಗಳಷ್ಟೇ ಇದು ಪರಿಣಾಮಕಾರಿ ಎಂದು ಹೇಳಲಾಗಿದೆ.

ಮತ್ತೆ ಉಲ್ಬಣಿಸುತ್ತಿರುವ ಮಹಾಮಾರಿ
ಚೀನಾ, ಜಪಾನ್, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮಾರಣಾಂತಿಕ ಕೊರೊನಾ ಮಹಾಮಾರಿ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಕೊರೊನಾ ಪರೀಕ್ಷೆಗಳನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲಾಗಿದ್ದು, ಕೊರೊನಾ ಇನ್ನೂ ಸಂಪೂರ್ಣವಾಗಿ ತೊಲಗಿಲ್ಲ.

ಹೀಗಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದೂ ಸೇರಿದಂತೆ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com