ಚೆನೈ: ನೀವೇನಾದ್ರೂ ಓಡಾಟಕ್ಕೆ ಓಲಾ, ಉಬರ್ ಕ್ಯಾಬ್ ಬುಕ್ ಮಾಡ್ತೀರಾ? ಹಾಗಾದರೆ ನೀವು ಇಂತಹ ವಿಷಯಗಳ ಬಗ್ಗೆ ಎಚ್ಚರವಾಗಿರಲೇಬೇಕು. ಯಾಕಂದ್ರೆ ಡ್ರೈವರ್ ಗೆ ಓಟಿಪಿ ನಂಬರ್ ಹೇಳಲು ತಡಮಾಡಿದರೆ ಪ್ರಾಣವೇ ಹೋಗಿ ಬಿಡಬಹುದು.
ಹೌದು... ಇಂಥದ್ದೊಂದು ಘಟನೆ ನೆರೆ ರಾಜ್ಯ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಚೆನ್ನೈನಲ್ಲಿ ಕ್ಯಾಬ್ ಹತ್ತುವ ಮೊದಲು ಒನ್-ಟೈಮ್ ಪಾಸ್ವರ್ಡ್ ಅಥವಾ ಒಟಿಪಿಯನ್ನು ಒದಗಿಸುವಲ್ಲಿ ವಿಳಂಬವಾದ ಕಾರಣ ಪ್ರಯಾಣಿಕರನ್ನು ಕೊಂದ ಆರೋಪದ ಮೇಲೆ ಓಲಾ ಚಾಲಕನನ್ನು ಬಂಧಿಸಲಾಗಿದೆ.
ಓಟಿಪಿ ತಿಳಿಸುವ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದ ನಂತರ ಚಾಲಕ ವ್ಯಕ್ತಿಗೆ ಹಲವು ಬಾರಿ ಗುದ್ದಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉಮೇಂದ್ರ ಎಂದು ಗುರುತಿಸಲಾಗಿರುವ ವ್ಯಕ್ತಿ ಕೊಯಮತ್ತೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ವಾರಾಂತ್ಯದಲ್ಲಿ ಸಂಬಂಧಿಕರನ್ನು ಭೇಟಿ ಮಾಡಲು ಅವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಚೆನ್ನೈನಲ್ಲಿದ್ದರು. ಭಾನುವಾರ ಈ ಕುಟುಂಬವು ಕೊಯಮತ್ತೂರು ಮಾಲ್ನಲ್ಲಿ ಚಲನಚಿತ್ರವನ್ನು ವೀಕ್ಷಿಸಿ ಮನೆಗೆ ಮರಳುತ್ತಿದ್ದಾಗ, ಅವರ ಪತ್ನಿ ಕ್ಯಾಬ್ ಬುಕ್ ಮಾಡಿದ್ದಾರೆ.
ಕ್ಯಾಬ್ ಬಂದಾಗ OTPಯಲ್ಲಿ ಸ್ವಲ್ಪ ಗೊಂದಲ ಉಂಟಾಯಿತು. ಈ ವೇಳೆ ಕ್ಯಾಬ್ ಚಾಲಕ , ಉಮೇಂದ್ರ ಅವರ ಪತ್ನಿ ಮತ್ತು ಮಕ್ಕಳನ್ನು ವಾಹನದಿಂದ ಕೆಳಗಿಳಿಸಿ ಮೊದಲು ಒಟಿಪಿಯನ್ನು ಖಚಿತಪಡಿಸಲು ಹೇಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಳಗೆ ಇಳಿಯುವಾಗ ಉಮೇಂದ್ರ ಕ್ಯಾಬ್ನ ಬಾಗಿಲು ಜೋರಾಗಿ ಹಾಕಿದ್ದೇ ಇಬ್ಬರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.
ಚಾಲಕನು ಮೊದಲು ತನ್ನ ಫೋನ್ ಅನ್ನು ಉಮೇಂದ್ರನತ್ತ ಎಸೆದು ನಂತರ ಆತನಿಗೆ ಗುದ್ದಲು ಪ್ರಾರಂಭಿಸಿದನು. ಚಾಲಕ ಪದೇ ಪದೇ ಗುದ್ದಿದ್ದರಿಂದ ಉಮೇಂದ್ರ ಕುಸಿದು ಬಿದ್ದಿದ್ದು ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ದಾರಿಮಧ್ಯದಲ್ಲೇ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಪೊಲೀಸರು ತಿಳಿಸಿದರು. ಕ್ಯಾಬ್ ಚಾಲಕನನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದ್ದು ತನಿಖೆ ನಡೆಯುತ್ತಿದೆ.
Advertisement