ಚೆನ್ನೈ: ಪಳನಿಸ್ವಾಮಿ, ಪನ್ನೀರ್ ಸೆಲ್ವಂ ಬೆಂಬಲಿಗರ ಹೊಡೆದಾಟ; ಕಚೇರಿ ಬಾಗಿಲು ಧ್ವಂಸ, ಸೀಲ್! ವಿಡಿಯೋ
ಚೆನ್ನೈ: ತಮಿಳುನಾಡಿನ ಎಐಎಡಿಎಂಕೆ ಪಕ್ಷ ಕವಲುದಾರಿಯತ್ತ ಸಾಗಿದ್ದು, ನಾಯಕತ್ವ ವಿವಾದದಿಂದಾಗಿ ಇಂದು ಪಳನಿಸ್ವಾಮಿ ಹಾಗೂ ಪನ್ನೀರ್ ಸೆಲ್ವಂ ಬೆಂಬಲಿಗರ ನಡುವೆ ಘರ್ಷಣೆ, ಹೊಡೆದಾಟ ನಡೆದಿದೆ.
ಪಕ್ಷದ ಕಚೇರಿಯಲ್ಲಿ ಪಳನಿಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಗೂ ಮುನ್ನ ಭಾರೀ ಗಲಾಟೆ ನಡೆದಿದ್ದು, ಉಭಯ ಮುಖಂಡರ ಬೆಂಬಲಿಗರು ಪರಸ್ಪರ ಚೇರ್ ಗಳನ್ನು ಎಸೆದು, ಹೊಡೆದಾಡಿಕೊಂಡಿದ್ದಾರೆ. ಪಕ್ಷದ ಕಚೇರಿಯ ಬಾಗಿಲು ಮುರಿದು ಒಳನುಗ್ಗಿದ ಪಳನಿಸ್ವಾಮಿ ಬೆಂಬಲಿಗರು ಪ್ರತಿಭಟನೆ ನಡೆಸಿ, ಸಭೆಗೆ ಅಡ್ಡಿಪಡಿಸಿದ್ದಾರೆ. ಗಲಾಟೆ ವೇಳೆಯಲ್ಲಿ ಹಲವು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಬೆಂಬಲಿಗರ ನಡುವಿನ ಅನಿರೀಕ್ಷಿತ ಘರ್ಷಣೆ, ಮಾರಾಮಾರಿ ನಂತರ ತಮಿಳುನಾಡು ಕಂದಾಯ ಇಲಾಖೆ ಎಐಎಡಿಎಂಕೆ ಪಕ್ಷದ ಕಚೇರಿಗೆ ಬೀಗ ಹಾಕಿದೆ.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಪಳನಿಸ್ವಾಮಿ, ಪಕ್ಷದ ಕಚೇರಿಗೆ ರಕ್ಷಣೆ ನೀಡುವಂತೆ ದೂರು ನೀಡಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹಾಗೂ ಪನ್ನೀರ್ ಸೆಲ್ವಂ ಒಟ್ಟಾಗಿ ಯೋಜಿಸಿ ಪಕ್ಷದ ಕಚೇರಿಯನ್ನು ಹಾಳು ಮಾಡಿದ್ದಾರೆ. ಈ ಘಟನೆಯನ್ನು ಬಲವಾಗಿ ಖಂಡಿಸುವುದಾಗಿ ಹೇಳಿದರು.
ಸಾಮಾನ್ಯ ಸಭೆಯಲ್ಲಿ ನನನ್ನು ವಜಾಗೊಳಿಸಿರುವುದಕ್ಕೆ ಮಾನ್ಯತೆ ಇಲ್ಲ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಪಳನಿಸ್ವಾಮಿಗೆ ನನನ್ನು ಪಕ್ಷದಿಂದ ತೆಗೆಯುವ ಹಕ್ಕಿಲ್ಲ. ಪಕ್ಷದ 1.5 ಕೋಟಿ ಕಾರ್ಯಕರ್ತರಿಂದ ನಾನು ಪಕ್ಷದ ಸಮನ್ವಯಕಾರನಾಗಿ ಚುನಾಯಿತನಾಗಿದ್ದೇನೆ. ಕಾನೂನು ಪ್ರಕಾರ ಕೋರ್ಟ್ ನಲ್ಲಿ ಇದನ್ನು ಪ್ರಶ್ನಿಸುತ್ತೇನೆ ಎಂದು ಪನ್ನೀರ್ ಸೆಲ್ವಂ ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ