ಮೇಘಾಲಯ ಬಿಜೆಪಿ ನಾಯಕನ ರೆಸಾರ್ಟ್ ಮೇಲೆ ಪೊಲೀಸ್ ದಾಳಿ ;'ವೇಶ್ಯಾಗೃಹ' ಪತ್ತೆ, 6 ಅಪ್ರಾಪ್ತ ಯುವತಿಯರ ರಕ್ಷಣೆ!

ಮೇಘಾಲಯ ಬಿಜೆಪಿ ನಾಯಕನ ರೆಸಾರ್ಟ್ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದು ಈ ವೇಳೆ ರೆಸಾರ್ಟ್ ನಲ್ಲಿ ವೇಶ್ಯಾಗೃಹ ನಡೆಸುತ್ತಿದ್ದ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗುವಾಹತಿ: ಮೇಘಾಲಯ ಬಿಜೆಪಿ ನಾಯಕನ ರೆಸಾರ್ಟ್ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದು ಈ ವೇಳೆ ರೆಸಾರ್ಟ್ ನಲ್ಲಿ ವೇಶ್ಯಾಗೃಹ ನಡೆಸುತ್ತಿದ್ದ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಬಿಜೆಪಿಗೆ ತೀವ್ರ ಮುಜುಗರಕ್ಕೀಡಾದ ಪ್ರಕರಣವೊಂದರಲ್ಲಿ ಮೇಘಾಲಯದ ರಾಜ್ಯ ಘಟಕದ ಉಪಾಧ್ಯಕ್ಷ ಮತ್ತು ಮಾಜಿ ಉಗ್ರಗಾಮಿ ನಾಯಕ ಬರ್ನಾರ್ಡ್ ಎನ್ ಮರಕ್ ಅಲಿಯಾಸ್ ರಿಂಪು ವಿರುದ್ಧ ಅನೈತಿಕ ಕಳ್ಳಸಾಗಣೆ ಮತ್ತು ವೇಶ್ಯಾಗೃಹ ಪ್ರಕರಣ ದಾಖಲಾಗಿದೆ.

ಮೇಘಾಲಯದ ಪಶ್ಚಿಮ ಗರೋ ಹಿಲ್ ಜಿಲ್ಲೆಯ ತುರಾದಲ್ಲಿ ಬರ್ನಾರ್ಡ್ ಎನ್ ಮರಾಕ್ ಒಡೆತನದ ರೆಸಾರ್ಟ್‌ನಲ್ಲಿ ದಾಳಿ ನಡೆಸಿದ್ದು, ಈ ವೇಳೆ ಅಕ್ರಮ ವೇಶ್ಯಾಗೃಹ ಪತ್ತೆಯಾಗಿದೆ. ಅಲ್ಲದೆ ಘಟನಾ ಸ್ಥಳದಿಂದ ವೇಶ್ಯಾವಾಟಿಕೆಗೆ ಬಳಸಲಾಗುತ್ತಿದ್ದ 6 ಮಂದಿ ಅಪ್ರಾಪ್ತ ಯುವತಿಯರನ್ನು ರಕ್ಷಣೆ ಮಾಡಲಾಗಿದೆ. ಆರು ಮಕ್ಕಳು ಕೊಳಕು ಕ್ಯಾಬಿನ್ ತರಹದ ಅನೈರ್ಮಲ್ಯ ಕೊಠಡಿಗಳಲ್ಲಿ ಲಾಕ್ ಆಗಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ರೆಸಾರ್ಟ್‌ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದು, ಬಿಜೆಪಿ ನಾಯಕ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಪ್ರಕರಣದಲ್ಲಿ ಇದುವರೆಗೆ 73 ಮಂದಿಯನ್ನು ಬಂಧಿಸಲಾಗಿದ್ದು, ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಮೇಘಾಲಯ ಪೊಲೀಸರು ಹೇಳಿದ್ದಾರೆ. 

ಎಲ್ಲಾ ಮಕ್ಕಳು ಆಘಾತಕ್ಕೊಳಗಾಗಿದ್ದರು ಮತ್ತು ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ರಿಂಪು ಬಗಾನ್‌ನಲ್ಲಿ ವಶಪಡಿಸಿಕೊಂಡ ಸಾಮಗ್ರಿಗಳು ಮತ್ತು ಕಟ್ಟಡದ ವಿನ್ಯಾಸ ಇತ್ಯಾದಿಗಳಿಂದ, ಈ ಸ್ಥಳವನ್ನು ಬರ್ನಾಡ್ ಬಳಸುತ್ತಿದ್ದ ಎಂದು ತೋರುತ್ತದೆ.  ದಾಳಿ ವೇಳೆ 27 ವಾಹನಗಳು, ಎಂಟು ದ್ವಿಚಕ್ರ ವಾಹನಗಳು, ಸುಮಾರು 400 ಮದ್ಯದ ಬಾಟಲಿಗಳು, 500 ಕ್ಕೂ ಹೆಚ್ಚು ಬಳಕೆಯಾಗದ ಕಾಂಡೋಮ್‌ಗಳು ವಶಪಡಿಸಿಕೊಳ್ಳಲಾಗಿದೆ. ಒಂದು ವಾರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿರುವುದು ದೃಢಪಟ್ಟಿದ್ದು, ಐಪಿಸಿ ಸೆಕ್ಷನ್ 366ಎ (ಅಪ್ರಾಪ್ತ ಬಾಲಕಿಯ ಸಂಪಾದನೆ), 376 (ಅತ್ಯಾಚಾರಕ್ಕೆ ಶಿಕ್ಷೆ) ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ತನ್ನನ್ನು ಮತ್ತು ಆಕೆಯ ಸ್ನೇಹಿತೆಯನ್ನು ಆರೋಪಿಗಳು ರಿಂಪು ಬಗಾನ್‌ಗೆ ಕರೆದೊಯ್ದಿದ್ದಾರೆ ಎಂದು ಸಂತ್ರಸ್ಥ ಬಾಲಕಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆರೋಪಿಗಳು ಅಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದು ಆಕೆಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಬರ್ನಾರ್ಡ್ ಎನ್ ಮರಕ್ ಗರೋ ಹಿಲ್ ಸ್ವಾಯತ್ತ ಜಿಲ್ಲಾ ಕೌನ್ಸಿಲ್‌ನ ಚುನಾಯಿತ ಸದಸ್ಯರಾಗಿದ್ದು, ಬಿಜೆಪಿ ಪಾಲುದಾರರಾಗಿರುವ ರಾಜ್ಯದಲ್ಲಿ ಆಡಳಿತಾರೂಢ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (ಎಮ್‌ಡಿಎ) ಸರ್ಕಾರಕ್ಕೆ ಭಾರಿ ಮುಜುಗರ ತಂದಿಟ್ಟಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com