ಹೈದರಾಬಾದ್: ಕೇಂದ್ರ ಸರ್ಕಾರದ ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ ಅನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಕೇಂದ್ರ ನಾಯಕರು ನೀಡುತ್ತಿರುವ ಹೇಳಿಕೆಗಳು ವಿವಾದಕ್ಕೀಡಾಗುತ್ತಿದ್ದು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಬೆನ್ನಲ್ಲೇ ಕೇಂದ್ರ ಸಚಿವ ಕಿಶನ್ ರೆಡ್ಡಿ ಹೇಳಿಕೆ ವಿವಾದಕ್ಕೆ ಗ್ರಾಸವಾಗಿದೆ.
ಅಗ್ನಿವೀರರು ಸೇನೆಯಿಂದ ಹೊರಬಂದ ಬಳಿಕ ಅವರಿಗೆ ವಾಹನ ಚಾಲನೆ, ಎಲೆಕ್ಟ್ರಿಷಿಯನ್, ಪ್ಲಂಬಿಂಗ್ ಹಾಗೂ ಕ್ಷೌರಿಕರ ತರಬೇತಿ ನೀಡಲಾಗುವುದು ಎಂದು ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅವರು ಹೇಳಿಕೆ ನೀಡಿದ್ದು, ಈ ಕುರಿತ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗ್ನಿ ವೀರರಿಗೆ ವಾಹನ ಚಾಲನೆ, ಎಲೆಕ್ಟ್ರಿಷಿಯನ್, ಪ್ಲಂಬಿಂಗ್ ಹಾಗೂ ಕ್ಷೌರಿಕರ ತರಬೇತಿ ನೀಡಲಾಗುವುದು. 4 ವರ್ಷಗಳ ತರಬೇತಿಯ ನಂತರ ಅಗ್ನಿವೀರರಿಗೆ ಈ ಹುದ್ದೆಗಳ ಅನುಭವ ಸಹಾಯಕವಾಗಬಹುದು ಎಂದು ಹೇಳಿದ್ದಾರೆ.
ಕಿಶನ್ ರೆಡ್ಡಿ ಅವರ ಹೇಳಿಕೆಗೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ‘ಸೇನಾಪಡೆಗಳು ಈಗ ತರಬೇತಿ ಕೇಂದ್ರಗಳಾಗುತ್ತಿವೆ. ಚಾಲಕರು, ಎಲೆಕ್ಟ್ರಿಷಿಯನ್ ಮೊದಲಾದ ಕೌಶಲ ತರಬೇತಿ ಪಡೆದ ಕಾರ್ಮಿಕರನ್ನು ದೇಶಕ್ಕೆ ನೀಡಲಾಗುತ್ತದೆ. ಇದು ಹೊಸ ಸಾಧನೆ’ ಎಂದು ಶಿವಸೇನಾ ನಾಯಕಿ ಹಾಗೂ ಸಂಸದೆ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.
‘ಇದು ದೇಶದ ನಿರುದ್ಯೋಗಿ ಯುವಕರು ಹಾಗೂ ಸೇನಾಪಡೆಯ ಶೌರ್ಯಕ್ಕೆ ಮಾಡಿದ ದೊಡ್ಡ ಅಪಮಾನ. ಬಿಜೆಪಿ ಕ್ಷಮೆ ಕೇಳಬೇಕು’ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಘಟಕದ ಮಾಧ್ಯಮ ಮುಖ್ಯಸ್ಥ ಕೆ.ಕೆ. ಮಿಶ್ರಾ ಟ್ವೀಟ್ ಮಾಡಿದ್ದಾರೆ.
‘ಅಗ್ನಿವೀರರಿಗೆ ಬಿಜೆಪಿ ಕಚೇರಿಯಲ್ಲಿ ‘ಸೆಕ್ಯುರಿಟಿ ಗಾರ್ಡ್’ ಕೆಲಸ ನೀಡುವುದಾಗಿ ವಿಜಯವರ್ಗೀಯ ಹೇಳಿದ್ದಾರೆ. 2019ರಲ್ಲಿ ಬಿಜೆಪಿ ಆರಂಭಿಸಿದ್ದ ‘ನಾನೂ ಚೌಕಿದಾರ’ ಅಭಿಯಾನದ ಅರ್ಥ ಏನು ಎಂಬುದು ಈಗ ಸ್ಪಷ್ಟಗೊಂಡಿದೆ’ ಎಂದು ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಹೇಳಿದ್ದಾರೆ.
Advertisement