
ಬಾಬಾ ರಾಮದೇವ್
ಹರಿದ್ವಾರ (ಉತ್ತರಾಖಂಡ): ಯೋಗ ಎಲ್ಲರಿಗೂ ಸೇರಿದ್ದು, ಅದನ್ನು ಯಾವುದೇ ಧರ್ಮ ಅಥವಾ ರಾಜಕೀಯ ಪಕ್ಷದೊಂದಿಗೆ ಜೋಡಿಸಬೇಡಿ ಎಂದು ಯೋಗ ಗುರು ಬಾಬಾ ರಾಮ್ ದೇವ್ ಅವರು ಮಂಗಳವಾರ ಹೇಳಿದ್ದಾರೆ.
ಅಂತರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ ಯೋಗ ಗುರು ಬಾಬಾ ರಾಮ್ದೇವ್ ಅವರು ಇಂದು ಹರಿದ್ವಾರದ ಪತಾಂಜಲಿ ಯೋಗಪೀಠದಲ್ಲಿ ಯೋಗ ಮಾಡಿದರು.
ಇಂದು ಬೆಳಿಗ್ಗೆ 5 ಗಂಟೆಗೆ ಯೋಗವನ್ನು ಪ್ರಾರಂಭಿಸಿದ ಅವರು, ಬೆಳಿಗ್ಗೆ 8 ಗಂಟೆಯವರೆಗೂ ವಿವಿಧ ಯೋಗಾಸನಗಳನ್ನು ಮಾಡಿದರು. ಈ ವೇಳೆ 10,000 ಹೆಚ್ಚು ಮಂದಿ ಅವರ ಅನುಯಾಯಿಗಳೂ ಯೋಗಭ್ಯಾಸ ಮಾಡಿದರು.
ಈ ವೇಳೆ ಬಾಬಾ ರಾಮ್ ದೇವ್ ಅವರು ನಿರ್ದಿಷ್ಟ ಯೋಗ ಆಸನಗಳನ್ನು ಮಾಡುವ ಮೂಲಕ ವಿವಿಧ ಆರೋಗ್ಯ ಪ್ರಯೋಜನಗಳು ಮತ್ತು ವಿವಿಧ ಕಾಯಿಲೆಗಳನ್ನು ಗುಣಪಡಿಸುವ ಬಗ್ಗೆ ವಿವರಿಸಿದರು.
ಇದನ್ನೂ ಓದಿ: ಯೋಗದಿಂದ ಸಮಾಜಕ್ಕೆ, ದೇಶಕ್ಕೆ, ವಿಶ್ವಕ್ಕೆ ಶಾಂತಿ ಸಿಗುತ್ತದೆ: ಮೈಸೂರಿನಲ್ಲಿ ಪ್ರಧಾನಿ ಮೋದಿ
ಯೋಗಾಭ್ಯಾಸದ ಬಳಿಕ ಮಾತನಾಡಿದ ರಾಮ್ ದೇವ್ ಅವರು, ರಾಷ್ಟ್ರವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ನಾವು ನಮ್ಮ ದೇಹವನ್ನು ಯಾವುದೇ ಅನಾರೋಗ್ಯದಿಂದ ಮುಕ್ತವಾಗಿಡುವ ಗುರಿಯನ್ನು ಹೊಂದಬೇಕು. ಇದಕ್ಕಾಗಿ ಪ್ರತಿದಿನ 4ರಿಂದ 5 ಯೋಗಾಸನಗಳನ್ನು ಮಾಡಬೇಕು ಎಂದು ಹೇಳಿದರು.
ಇದೇ ವೇಳೆ ಯೋಗ ಎಲ್ಲರಿಗೂ ಸೇರಿದ್ದಾಗಿದ್ದು, ಅದನ್ನು ಯಾವುದೇ ಧರ್ಮ ಅಥವಾ ರಾಜಕೀಯ ಪಕ್ಷದೊಂದಿಗೆ ಜೋಡಿಸಬಾರದು ಎಂದೂ ಕರೆ ನೀಡಿದರು.
"ಎಲ್ಲ ಧರ್ಮದ ಜನರು ತಮ್ಮ ದೇಹವನ್ನು ಸದೃಢವಾಗಿಡಲು ಮತ್ತು ದೀರ್ಘಕಾಲದ ಕಾಯಿಲೆಯನ್ನು ಗುಣಪಡಿಸಲು ಯೋಗ ಮಾಡುತ್ತಾರೆ. ಕೆಲವರು ತಮ್ಮ ಅಜೆಂಡಾದೊಂದಿಗೆ ಅದನ್ನು ಧರ್ಮದೊಂದಿಗೆ ಜೋಡಿಸಲು ಪ್ರಯತ್ನಿಸುತ್ತಿದ್ದಾರೆ. ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳ ನಾಯಕರು ಯೋಗ ಮಾಡುವಂತೆ ನಾನು ವಿನಂತಿಸುತ್ತೇನೆ. ಏಕೆಂದರೆ ಯೋಗ ಆಧ್ಯಾತ್ಮಿಕವೇ ಹೊರತು ಯಾವುದೇ ಧರ್ಮಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿಸಿದರು.