ಚೀನಾದ ಸೇನೆ ಮಾಡಲಾಗದ್ದನ್ನು ನೋಟು ಅಮಾನ್ಯೀಕರಣ, ಜಿಎಸ್ಟಿ ಮಾಡಿದೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, 'ನೋಟು ಅಮಾನ್ಯೀಕರಣ ಮತ್ತು ದೋಷಪೂರಿತ ಜಿಎಸ್ಟಿ ಮೂಲಕ ಬಿಜೆಪಿ ಸರ್ಕಾರವು ಉದ್ಯೋಗ ಸೃಷ್ಟಿ, ಎಂಎಸ್ಎಂಇ ಮತ್ತು ಕೃಷಿ ವಲಯದ ಬೆನ್ನೆಲುಬನ್ನು ಹಾಳುಮಾಡಿದೆ' ಎಂದು ಆರೋಪಿಸಿದರು.
Published: 28th November 2022 10:39 AM | Last Updated: 28th November 2022 10:40 AM | A+A A-

ಭಾನುವಾರ ಇಂದೋರ್ನಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಲೇಖಕ ಹರ್ಷ್ ಮಂದರ್ ಅವರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.
ಭೋಪಾಲ್: ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯವಿರುವ ಮಾಲ್ವಾ-ನಿಮಾರ್ ಪ್ರದೇಶದ ಮೂಲಕ ನಾಲ್ಕು ದಿನಗಳ ನಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಭಾನುವಾರ ದೇಶದ ಸ್ವಚ್ಛ ನಗರ ಇಂದೋರ್ಗೆ ಆಗಮಿಸಿತು.
ಈ ವೇಳೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, 'ನೋಟು ಅಮಾನ್ಯೀಕರಣ ಮತ್ತು ದೋಷಪೂರಿತ ಜಿಎಸ್ಟಿ ಮೂಲಕ ಬಿಜೆಪಿ ಸರ್ಕಾರವು ಉದ್ಯೋಗ ಸೃಷ್ಟಿ, ಎಂಎಸ್ಎಂಇ ಮತ್ತು ಕೃಷಿ ವಲಯದ ಬೆನ್ನೆಲುಬನ್ನು ಹಾಳುಮಾಡಿದೆ' ಎಂದು ಆರೋಪಿಸಿದರು.
'ಚೀನಾದ ಸೇನೆಯು ಭಾರತಕ್ಕೆ ಏನನ್ನು ಮಾಡಲು ಸಾಧ್ಯವಾಗಲಿಲ್ಲವೋ ಅದನ್ನು ನೋಟು ಅಮಾನ್ಯೀಕರಣ ಮತ್ತು ದೋಷಪೂರಿತ ಜಿಎಸ್ಟಿಯಿಂದ ಮಾಡಲಾಗಿದೆ. ವಿನಾಶಕಾರಿ ನೀತಿಗಳು ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳು/ಉದ್ಯಮಗಳು ಮತ್ತು ರೈತರ ಹಣದ ಹರಿವನ್ನು ಕೊನೆಗೊಳಿಸಿದೆ. ವಾಸ್ತವವಾಗಿ ಇವರೇ ದೇಶದ ಅತಿದೊಡ್ಡ ಉದ್ಯೋಗ ಸೃಷ್ಟಿದಾರರಾಗಿದ್ದರು. ಇದರ ಪರಿಣಾಮವಾಗಿ ಉದ್ಯೋಗಗಳ ಅಂತ್ಯವಾಯಿತು. ಎಂಎಸ್ಎಂಇ, ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳು ಮತ್ತು ರೈತರನ್ನು ಪುನರುಜ್ಜೀವನಗೊಳಿಸದ ಹೊರತು, ಭಾರತದ ಯುವಕರಿಗೆ ಉದ್ಯೋಗ ಸಿಗುವುದಿಲ್ಲ' ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.
ಇಂದೋರ್ನ ಐತಿಹಾಸಿಕ ರಾಜವಾಡ ಅರಮನೆಯಲ್ಲಿ ಭಾನುವಾರ ಸಂಜೆ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 'ಏರುತ್ತಿರುವ ಬೆಲೆಗಳ ಹಣ ಎಲ್ಲಿಗೆ ಹೋಗುತ್ತಿದೆ, ಇದು ಹಣ ವರ್ಗಾವಣೆ ಎಂಬ ಕಾರ್ಯವಿಧಾನದ ಮೂಲಕ ಮೂವರಲ್ಲ, ಆದರೆ ಕೇವಲ ಇಬ್ಬರು ದೊಡ್ಡ ಬಿಲಿಯನೇರ್ಗಳ ಜೇಬಿಗೆ ಹೋಗುತ್ತಿದೆ' ಎಂದು ದೂರಿದರು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ವೇಳೆ ನೆಲಕ್ಕೆ ಬಿದ್ದ ದಿಗ್ವಿಜಯ್ ಸಿಂಗ್; ಕಳಪೆ ರಸ್ತೆ ಕಾರಣ ಎಂದ ಕಾಂಗ್ರೆಸ್
ಬಡವರ ಜೇಬಿನಿಂದ ಬಂದ ಹಣವು ವೇಗವಾಗಿ ಜೇಬುಗಳನ್ನು ಬದಲಾಯಿಸುತ್ತಿದೆ ಮತ್ತು ಬಿಜೆಪಿ ಬೊಕ್ಕಸವನ್ನು ತಲುಪುತ್ತಿದೆ. ನಂತರ ಅದನ್ನು ರಾಜ್ಯಗಳಲ್ಲಿ ಚುನಾಯಿತ ಸರ್ಕಾರಗಳನ್ನು ಉರುಳಿಸಲು ದುರಾಸೆಯ ಶಾಸಕರ ಜೇಬಿಗೆ ಹಾಕಲಾಗುತ್ತದೆ. 2018ರಲ್ಲಿ ನೀವು ಮಧ್ಯ ಪ್ರದೇಶದಲ್ಲಿ ಆಯ್ಕೆ ಮಾಡಿದ ಸರ್ಕಾರವನ್ನು ಕೆಳಗಿಳಿಸಿದಾಗ ಇದು ಸಂಭವಿಸಿತು. ಇದು ಭ್ರಷ್ಟಾಚಾರವಲ್ಲದಿದ್ದರೆ, ಭ್ರಷ್ಟಾಚಾರ ಎಂದರೇನು? ಎಂದು ಪ್ರಶ್ನಿಸಿದರು.
ಸ್ವಚ್ಛ ನಗರ ಎಂಬ ಟ್ಯಾಗ್ ಪಡೆದಿದ್ದಕ್ಕಾಗಿ ಇಂದೋರ್ನ ಜನರನ್ನು ಅಭಿನಂದಿಸಿದ ಅವರು, ಒಮ್ಮೆ ತಮ್ಮ ಪಕ್ಷದ ಸರ್ಕಾರವು ಮಧ್ಯ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ, ಇಂದೋರ್ ಭಾರತದ ಅತಿದೊಡ್ಡ ವಿಮಾನ ನಿಲ್ದಾಣವನ್ನು ಹೊಂದಲಿದೆ. ನಮ್ಮ ಸರ್ಕಾರವು ಅಮೆರಿಕಕ್ಕೆ ಚಿಕಾಗೊ ಹೇಗೋ ಹಾಗೆ ಇಂದೋರ್ ಅನ್ನು ಭಾರತಕ್ಕಾಗಿ ಮಾಡುತ್ತದೆ' ಎಂದು ಅವರು ಹೇಳಿದರು.