ಮೊರಾದಾಬಾದ್: ತನ್ನ ಅಕ್ರಮ ಚಟುವಟಿಕೆಗಳಿಗೆ ಈತನಿಂದ ಬೆದರಿಕೆ ಎಂದು ನಂಬಿದ ಸ್ಥಳೀಯ ರೌಡಿ ಶೀಟರ್ನ ಸೂಚನೆ ಮೇರೆಗೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಠಾಕುರ್ದ್ವಾರ ಪ್ರದೇಶದಲ್ಲಿ 30 ವರ್ಷದ ದಲಿತ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಮೊರಾದಾಬಾದ್ ಎಸ್ಎಸ್ಪಿ ಹೇಮರಾಜ್ ಮೀನಾ ಮಾತನಾಡಿ, ರೌಡಿ ಶೀಟರ್ ಅತುಲ್ ಶರ್ಮಾ ಪಂಡಿತ್ ಮತ್ತು ಅವರ ಸಹಾಯಕ ಗೋಲು ಅವರ ಸೂಚನೆ ಮೇರೆಗೆ ಬಿಲಾಲ್ ವಿಶಾಲ್ ವಾಲ್ಮೀಕಿಯನ್ನು ಗುಂಡು ಹಾರಿಸಿ ಕೊಂದಿದ್ದಾನೆ. ಸಂತ್ರಸ್ತನ ಕುಟುಂಬದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಐದು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಆರೋಪಿಗಳಾದ ಅತುಲ್ ಶರ್ಮಾ, ಬಿಲಾಲ್ ಮತ್ತು ಗೋಲು ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಜೊತೆಗೆ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ, 1989ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿಶಾಲ್ ಅವರ ತಂದೆ ಮುಖೇಶ್ ವಾಲ್ಮೀಕಿ, 'ನನ್ನ ಮಗ ಇತ್ತೀಚೆಗೆ ಬಲಪಂಥೀಯ ಸಂಘಟನೆಗೆ ಸೇರಿದ್ದ ಮತ್ತು ಎಲ್ಲಾ ಸಮುದಾಯಗಳ ಯುವಕರಲ್ಲಿ ಆತನ ಜನಪ್ರಿಯತೆ ಹೆಚ್ಚುತ್ತಿತ್ತು. ದಲಿತನೊಬ್ಬ ಜನಪ್ರಿಯನಾಗುತ್ತಿರುವ ಸತ್ಯವನ್ನು ಒಪ್ಪಿಕೊಳ್ಳಲು ಶರ್ಮಾಗೆ ಸಾಧ್ಯವಾಗಲಿಲ್ಲ' ಎಂದು ಹೇಳಿದ್ದಾರೆ.
ಈ ಹತ್ಯೆಯನ್ನು ಖಂಡಿಸಿ ಮಂಗಳವಾರದಿಂದ ಸ್ವಚ್ಛತಾ ಕಾರ್ಮಿಕರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಠಾಕುರ್ದ್ವಾರದ ಸರ್ಕಲ್ ಆಫೀಸರ್ ಅರ್ಪಿತ್ ಕಪೂರ್, 'ಕೊಲೆಯ ನಂತರ ಇಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಪ್ರಕರಣದಲ್ಲಿ ಹೆಸರಿಸಲಾದ ಎಲ್ಲಾ ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದು, ಅವರನ್ನು ಶೀಘ್ರವಾಗಿ ಬಂಧಿಸಲು ನಾವು ಪ್ರಯತ್ನಿಸುತ್ತಿದ್ದೇವೆ' ಎಂದು ಹೇಳಿದರು.
Advertisement