ದರೋಡೆಕೋರರು-ಭಯೋತ್ಪಾದಕರ ನಂಟು: ದೇಶದ ವಿವಿಧೆಡೆ ಎನ್ಐಎ ದಾಳಿ, ಶೋಧನೆ

ದರೋಡೆಕೋರ-ಭಯೋತ್ಪಾದಕರ ಜಾಲ ಬೆನ್ನತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಬೆಳಿಗ್ಗೆ ದೇಶದ ವಿವಿಧೆಡೆ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದರೋಡೆಕೋರ-ಭಯೋತ್ಪಾದಕರ ಜಾಲ ಬೆನ್ನತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಬೆಳಿಗ್ಗೆ ದೇಶದ ವಿವಿಧೆಡೆ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದೆ.

ಉತ್ತರ ಪ್ರದೇಶ, ಪಂಜಾಬ್, ದೆಹಲಿ, ರಾಜಸ್ಥಾನ ಮತ್ತು ಹರಿಯಾಣ ಸೇರಿ ಹಲವೆಡೆ ಎನ್ಐಎ ದಾಳಿ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಭಾರತ ಮತ್ತು ವಿದೇಶಗಳಲ್ಲಿ ನೆಲೆಸಿರುವ ಭಯೋತ್ಪಾದಕರು, ದರೋಡೆಕೋರರು ಮತ್ತು ಮಾದಕವಸ್ತು ಕಳ್ಳಸಾಗಣೆದಾರರ ನಡುವಿನ ನಂಟನ್ನು ಕಡಿದು ಹಾಕುವ ಉದ್ದೇಶದಿಂದ ಈ ನಾಲ್ಕು ರಾಜ್ಯಗಳು ಮತ್ತು ದೆಹಲಿಯಾದ್ಯಂತ ಆರು ಜಿಲ್ಲೆಗಳಲ್ಲಿ ದರೋಡೆಕೋರರಿಗೆ ಸಂಬಂಧಿಸಿದ ವಸತಿ ಮತ್ತು ಇತರ ಆವರಣಗಳಲ್ಲಿ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವಾರ ಲಾರೆನ್ಸ್ ಬಿಷ್ಣೋಯ್, ನವೀನ್ ದಬಾಸ್ ಮತ್ತು ಸುನಿಲ್ ಬಲಿಯಾನ್ ಅಲಿಯಾಸ್ ಟಿಲ್ಲು ತಾಜ್ಪುರಿಯಾ ಎಂಬ ಮೂರು ದರೋಡೆಕೋರರನ್ನು ವಶಕ್ಕೆ ತೆಗೆದುಕೊಂಡಿದ್ದ ಎನ್‌ಐಎ, ಪಂಜಾಬ್ ಮತ್ತು ರಾಜಸ್ಥಾನದಾದ್ಯಂತ ಕೂಡ ಕಾರ್ಯಾಚರಣೆ ನಡೆಸಿದೆ. ಕಳೆದ ತಿಂಗಳು ಕೂಡಾ ರಾಷ್ಟ್ರೀಯ ತನಿಖಾ ಸಂಸ್ಥೆ ಇದೇ ರೀತಿಯ ಶೋಧ ನಡೆಸಿತ್ತು.

ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಇತರ ರಾಜ್ಯಗಳಲ್ಲಿನ 50ಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿ ನಡೆಸಿ ದರೋಡೆಕೋರರಿಗೆ ಭಯೋತ್ಪಾದಕರು ಮತ್ತು ಮಾದಕವಸ್ತು ಕಳ್ಳಸಾಗಣೆದಾರರೊಂದಿಗಿನ ಸಂಪರ್ಕದ ಬಗ್ಗೆ ವಿವರಗಳನ್ನು ಪಡೆದಿತ್ತು. ರಾಜಸ್ಥಾನದ ಚುರು ಎಂಬಲ್ಲಿನ ಸಂಪತ್ ನೆಹ್ರಾ ಅವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಿದ ಬಗ್ಗೆ ವರದಿಯಾಗಿದೆ.

ಅಕ್ಟೋಬರ್‌ನಲ್ಲಿ, ಉತ್ತರ ಭಾರತದ ನಾಲ್ಕು ರಾಜ್ಯಗಳು ಮತ್ತು ದೆಹಲಿಯಾದ್ಯಂತ 52 ಸ್ಥಳಗಳಲ್ಲಿ ಎನ್‌ಐಎ ಶೋಧಿಸಿ ವಕೀಲರ ಮತ್ತು ಹರಿಯಾಣದ ದರೋಡೆಕೋರನನ್ನು ಬಂಧಿಸಿತ್ತು. ಬಂಧಿತ ವಕೀಲರನ್ನು ಈಶಾನ್ಯ ದೆಹಲಿಯ ಉಸ್ಮಾನ್‌ಪುರ ಪ್ರದೇಶದ ಗೌತಮ್ ವಿಹಾರ್ ನಿವಾಸಿ ಆಸಿಫ್ ಖಾನ್ ಎಂದು ಗುರುತಿಸಲಾಗಿದೆ. ಅವರ ನಿವಾಸದಲ್ಲಿ ನಡೆಸಿದ ಶೋಧದ ಸಮಯದಲ್ಲಿ ನಾಲ್ಕು ಶಸ್ತ್ರಾಸ್ತ್ರಗಳು ಮತ್ತು ಕೆಲವು ಪಿಸ್ತೂಲ್‌ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿತ್ತು. ವಿಚಾರಣೆ ವೇಳೆ ಆಸಿಫ್ ಜೈಲಿನಲ್ಲಿರುವ ದರೋಡೆಕೋರರ ಜತೆ ಸಂಪರ್ಕದಲ್ಲಿದ್ದುದು ಬಹಿರಂಗವಾಗಿದೆ ಎಂದು ಎನ್​ಐಎ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com