
ಸಂಗ್ರಹ ಚಿತ್ರ
ಗಾಂಧಿನಗರ (ಗುಜರಾತ್): ಗುಜರಾತ್ ವಿಧಾನಸಬಾ ಚುನಾವಣೆ 2022ರ ಬಹಿರಂಗ ಪ್ರಚಾರ ಮಂಗಳವಾರಕ್ಕೆ ಮುಕ್ತಾಯಗೊಂಡಿದ್ದು, ಡಿಸೆಂಬರ್ 1 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ.
ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಇತರ ರಾಜಕೀಯ ಪಕ್ಷಗಳ ಉನ್ನತ ನಾಯಕರು ಅಬ್ಬರ ಪ್ರಚಾರ ನಡೆಸಿದ್ದರು.
ಆಕಾಶದೆತ್ತರದ ಭರವಸೆಗಳು ಮತ್ತು ಆರೋಪಗಳು ಮತ್ತು ಪ್ರತ್ಯಾರೋಪಗಳ ಮಾಡುತ್ತಿದ್ದ ರ್ಯಾಲಿಗಳು ಮತ್ತು ರೋಡ್ ಶೋಗಳು ಇಂದಿಗೆ ಮುಕ್ತಾಯಗೊಂಡಿದೆ.
ಇದನ್ನೂ ಓದಿ: ಖರ್ಗೆ ಹೇಳಿಕೆ 'ಮಣ್ಣಿನ ಮಗ' ಮೋದಿಗೆ ಮಾಡಿದ ಅವಮಾನ: ಗುಜರಾತಿಗರು ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಿ; ಬಿಜೆಪಿ ನಾಯಕರ ಕರೆ
182 ಸ್ಥಾನಗಳ ವಿಧಾನಸಭೆಯಲ್ಲಿ 89 ಸ್ಥಾನಗಳಿಗೆ ಮೊದಲ ಹಂತದಲ್ಲಿ ಗುರುವಾರ ಮತದಾನ ನಡೆಯಲಿದೆ. 89 ಸ್ಥಾನಕ್ಕೆ 788 ಜನ ಸ್ಪರ್ಧೆ ಮಾಡಿದ್ದು, ಉಳಿದ 93 ಸ್ಥಾನಗಳಿಗೆ ಡಿ.5 ರಂದು ಮತದಾನ ನಡೆಯಲಿದೆ. ಡಿ.8 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ಬಿಜೆಪಿ, ಕಾಂಗ್ರೆಸ್ ಆಪ್ ಚುನಾವಣಾ ಕದನದಲ್ಲಿ ಹೋರಾಟ ಮಾಡುತ್ತಿವೆ.
"ಮೊದಲ ಹಂತದ ಗುಜರಾತ್ ವಿಧಾನಸಭಾ ಚುನಾವಣೆಯ ಪ್ರಚಾರ ಕೊನೆಗೊಂಡಿದ್ದು, ಚುನಾವಣೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಮತ್ತು ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ" ಎಂದು ಗುಜರಾತ್ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಪಿ ಭಾರತಿ ಎಎನ್ಐಗೆ ತಿಳಿಸಿದ್ದಾರೆ.
ಬಿಜೆಪಿ ದಾಖಲೆಯ ಏಳನೇ ಅವಧಿಗೆ ಅಧಿಕಾರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ರಾಜ್ಯದಲ್ಲಿ ಭರ್ಜರಿ ರ್ಯಾಲಿಗಳು ಮತ್ತು ರೋಡ್ಶೋಗಳನ್ನು ನಡೆಸಿದ್ದರು.
ಇದನ್ನೂ ಓದಿ: ಪ್ರಧಾನಿ ಮೋದಿಗೆ ರಾವಣನಂತೆ 100 ತಲೆಗಳಿವೆಯೇ?: ಮಲ್ಲಿಕಾರ್ಜುನ್ ಖರ್ಗೆ
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಅಸ್ಸಾಂ, ಗೋವಾ ಮುಖ್ಯಮಂತ್ರಿಗಳು, ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಮನ್ಸುಖ್ ಮಾಂಡವಿಯಾ, ಪರ್ಷೋತ್ತಮ್ ರೂಪಾಲಾ, ರವಿಶಂಕರ್ ಪ್ರಸಾದ್, ಪಿಯೂಷ್ ಗೋಯಲ್, ನಿತಿನ್ ಗಡ್ಕರಿ ಅವರು ಮೊದಲ ಹಂತದ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ಮುಖಂಡರಾದ ಮನೋಜ್ ತಿವಾರಿ ಮತ್ತು ರವಿ ಕಿಶನ್ ಕೂಡ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಪಡೆಯಲು ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಎಎಪಿಗೆ ಹಿನ್ನಡೆ: ಗುಜರಾತ್ ಚುನಾವಣಾ ಕಣ ತೊರೆದು ಬಿಜೆಪಿ ಸೇರಿದ ಮತ್ತೊಬ್ಬ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ!
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪಕ್ಷದ ಪ್ರಚಾರದಲ್ಲಿ ತೊಡಗಿದ್ದರು. ಪಕ್ಷದ ನಾಯಕ ರಾಹುಲ್ ಗಾಂಧಿ ರಾಜ್ಯದಲ್ಲಿ ಎರಡು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದರು.
ಇನ್ನು ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ವಿವಿಧ ಭರವಸೆಗಳನ್ನು ನೀಡುತ್ತಲೇ ರಾಜ್ಯದಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದರು.