ಗ್ಯಾಂಬಿಯಾದಲ್ಲಿ ಕೆಮ್ಮಿನ ಸಿರಪ್ ದುರಂತ: ತನಿಖೆಗೆ ಆದೇಶಿಸಿದ ಭಾರತ ಸರ್ಕಾರ

ಆಫ್ರಿಕಾ ಖಂಡದ ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಭಾರತದ 4 ಕೆಮ್ಮಿನ ಸಿರಪ್ ಉತ್ಪನ್ನಗಳು ಸಂಬಂಧಪಟ್ಟಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದ ಬಳಿಕ ಭಾರತ ಸರ್ಕಾರ ಹರ್ಯಾಣ ಮೂಲದ ಫಾರ್ಮಾಸ್ಯುಟಿಕಲ್ ಸಂಸ್ಥೆಯ ವಿರುದ್ಧ ತನಿಖೆ ಆರಂಭಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಆಫ್ರಿಕಾ ಖಂಡದ ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಭಾರತದ 4 ಕೆಮ್ಮಿನ ಸಿರಪ್ ಉತ್ಪನ್ನಗಳು ಸಂಬಂಧಪಟ್ಟಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದ ಬಳಿಕ ಭಾರತ ಸರ್ಕಾರ ಹರ್ಯಾಣ ಮೂಲದ ಫಾರ್ಮಾಸ್ಯುಟಿಕಲ್ ಸಂಸ್ಥೆಯ ವಿರುದ್ಧ ತನಿಖೆ ಆರಂಭಿಸಿದೆ.

ಮೂಲಗಳ ಪ್ರಕಾರ WHO ಸೆಪ್ಟೆಂಬರ್ 29ರಂದು ಕೆಮ್ಮಿನ ಸಿರಪ್‌ಗಳ ಬಗ್ಗೆ ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾಗೆ (DCGI) ಎಚ್ಚರಿಕೆ ನೀಡಿದೆ. ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ತಕ್ಷಣವೇ ಈ ವಿಷಯವನ್ನು ಹರಿಯಾಣ ನಿಯಂತ್ರಣ ಪ್ರಾಧಿಕಾರದೊಂದಿಗೆ ಕೈಗೆತ್ತಿಕೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಈ ಕೆಮ್ಮಿನ ಸಿರಪ್‌ಗಳನ್ನು ಹರ್ಯಾಣದ ಸೋನಿಪತ್‌ನಲ್ಲಿರುವ ಮೇಡನ್ ಫಾರ್ಮಾಸ್ಯುಟಿಕಲ್ ಲಿಮಿಟೆಡ್ ತಯಾರಿಸಿದೆ. ಸಂಸ್ಥೆ ಈ ಉತ್ಪನ್ನಗಳನ್ನು ಗ್ಯಾಂಬಿಯಾಗೆ ಮಾತ್ರವೇ ರಫ್ತು ಮಾಡಿದೆ ಎನ್ನಲಾಗುತ್ತಿದೆ. ಆದರೆ ಈ ಆರೋಪಗಳಿಗೆ ಕಂಪನಿ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದೆಹಲಿಯ ಪಿತಾಂಪುರದಲ್ಲಿರುವ ಸಂಸ್ಥೆಯ ಆಡಳಿತ ಕಚೇರಿ ಇಂದು ಬೆಳಗ್ಗೆ ಮುಚ್ಚಿರುವುದು ಕಂಡುಬಂದಿರುವುದಾಗಿ ವರದಿಯಾಗಿದೆ. 

ಬುಧವಾರ ವಿಶ್ವ ಆರೋಗ್ಯ ಸಂಸ್ಥೆ (WHO) ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಭಾರತದ 4 ಶೀತ ಹಾಗೂ ಕೆಮ್ಮಿನ ಸಿರಪ್‌ಗಳು ಗ್ಯಾಂಬಿಯಾದ 66 ಮಕ್ಕಳ ಸಾವಿಗೆ ಕಾರಣವಾಗಿವೆ ಹಾಗೂ ಉತ್ಪನ್ನಗಳನ್ನು ಬಳಸಿದವರಲ್ಲಿ ಮೂತ್ರಪಿಂಡದ ಗಾಯಗಳು ಕಂಡುಬಂದಿರುವುದಾಗಿ ತಿಳಿಸಿದ್ದರು.

ಆದರೆ ಈ ಸಾವುಗಳು ಯಾವಾಗ ಸಂಭವಿಸಿವೆ ಎಂಬ ಸ್ಪಷ್ಟ ವಿವರಗಳನ್ನು ನೀಡಿಲ್ಲ. ಇದೀಗ 4 ಕೆಮ್ಮಿನ ಸಿರಪ್‌ಗಳ ಮಾದರಿಗಳನ್ನು ಕೇಂದ್ರ ಮತ್ತು ಪ್ರಾದೇಶಿಕ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಇದರ ಫಲಿತಾಂಶ 3 ದಿನಗಳಲ್ಲಿ ಬರಲಿವೆ ಎಂದು ಮೂಲಗಳು ತಿಳಿಸಿವೆ.

ಪ್ರೋಟೋಕಾಲ್ ಪ್ರಕಾರ, ಭಾರತದಿಂದ ರಫ್ತು ಮಾಡುವ ಯಾವುದೇ ಔಷಧವನ್ನು ಸ್ವೀಕರಿಸುವ ದೇಶಗಳು ಪರೀಕ್ಷೆಗಳನ್ನು ನಡೆಸಬೇಕು. ಆದರೆ ಗ್ಯಾಂಬಿಯಾದಲ್ಲಿ ಸರಿಯಾಗಿ ಪರೀಕ್ಷೆ ನಡೆಸಿರಲಿಲ್ಲವೇ ಅಥವಾ ಔಷಧದ ಹಾನಿಕಾರಕ ಅಂಶಗಳು ಪತ್ತೆಯಾಗದೇ ಹೋಗಿವೆಯೇ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com