ಶ್ರೀನಗರ: ಉಗ್ರರ ವಿರುದ್ದದ ಹೋರಾಟದಲ್ಲಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಭಾರತೀಯ ಸೇನೆಯ ಶ್ವಾನ ಜೂಮ್ ಗುರುವಾರ ಸಾವನ್ನಪ್ಪಿದೆ.
ಎರಡು ಬಾರಿ ಉಗ್ರರಿಂದ ಗುಂಡೇಟು ತಿಂದಿದ್ದ ಈ ಶ್ವಾನವನ್ನು ಶ್ರೀನಗರದ ಸಶಸ್ತ್ರ ಪಡೆಗಳ ಪಶು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಖ ಮತ್ತು ಹಿಂಭಾಗದ ಬಲಗಾಲಿನ ಮೇಲೆ ಗುಂಡಿನ ಗಾಯವಾಗಿದ್ದ ಕಾರಣ ಅದಕ್ಕೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.
ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ಸೇನೆಯ ಶ್ವಾನ ಇಂದು ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಸಾವನ್ನಪ್ಪಿದೆ. ಬೆಳಗ್ಗೆ 11-45ರವರೆಗೂ ನೋಡಲು ಚೆನ್ನಾಗಿದ್ದ, ಸ್ಪಂದಿಸುತ್ತಿದ್ದ ಶ್ವಾನ, ಇದಕ್ಕಿದ್ದಂತೆ ಏದುಸಿರು ಬಿಡುತ್ತಾ, ಕೆಳಗೆ ಬಿದ್ದಿತು ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಗ್ರರು ಅಡಗಿರುವ ಮನೆಯಿಂದ ಆ ಉಗ್ರರನ್ನು ಹೊರಗೆ ಕರೆತರುವ ಕೆಲಸವನ್ನು ಜೂಮ್ ನಾಯಿಗೆ ವಹಿಸಲಾಗಿತ್ತು. ಆ ನಾಯಿ ಮನೆಯೊಳಗೆ ಹೋಗಿ ಉಗ್ರರ ಮೇಲೆ ದಾಳಿ ಮಾಡಿತ್ತು. ಈ ಕಾರ್ಯಾಚರಣೆಯ ಸಮಯದಲ್ಲಿ ಆ ನಾಯಿಯ ಮೇಲೆ ಎರಡು ಬಾರಿ ಗುಂಡಿನ ದಾಳಿ ನಡೆಸಿದ್ದರಿಂದ ನಾಯಿಗೆ ಗಂಭೀರವಾದ ಗಾಯವಾಗಿತ್ತು.
ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದರೂ ಹೆದರದ ಈ ನಾಯಿ ತನ್ನ ಕಾರ್ಯವನ್ನು ಮುಂದುವರೆಸಿತು. ಅಲ್ಲದೆ ಇಬ್ಬರು ಭಯೋತ್ಪಾದಕರ ಹತ್ಯೆಗೂ ಕಾರಣವಾಗಿತ್ತು. ಜೂಮ್ ನಿಧನಕ್ಕೆ ಸೇನೆಯ ಉತ್ತರ ಕಮಾಂಡೋ ತೀವ್ರ ಸಂತಾಪ ಸೂಚಿಸಿದೆ.
Advertisement