ಉತ್ತರಾಖಂಡದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ರೋಪ್‌ವೇ ಯೋಜನೆಗಳ ನಿರ್ಮಾಣ: ಪ್ರಧಾನಿ ಮೋದಿ

ರೋಪ್‌ವೇ ಯೋಜನೆಗಳ ನಿರ್ಮಾಣವು ಉತ್ತರಾಖಂಡದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ.
ಉತ್ತರಾಖಂಡದಲ್ಲಿ ಪ್ರಧಾನಿ ಮೋದಿ
ಉತ್ತರಾಖಂಡದಲ್ಲಿ ಪ್ರಧಾನಿ ಮೋದಿ

ಬದರಿನಾಥ್ (ಉತ್ತರಾಖಂಡ): ರೋಪ್‌ವೇ ಯೋಜನೆಗಳ ನಿರ್ಮಾಣವು ಉತ್ತರಾಖಂಡದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ. 

ಉತ್ತರಾಖಂಡದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಮುಂಜಾನೆ ಕೇದಾರನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ಬದರಿನಾಥಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಮಾಣ ಗ್ರಾಮದಲ್ಲಿ ರಸ್ತೆ ಮತ್ತು ರೋಪ್ ವೇ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ರೋಪ್‌ವೇ ಯೋಜನೆಗಳ ನಿರ್ಮಾಣವು ಉತ್ತರಾಖಂಡದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿದೆ. ಪರಂಪರೆ ಮತ್ತು ಅಭಿವೃದ್ಧಿಯು ನವ ಭಾರತದ ಎರಡು ಆಧಾರ ಸ್ತಂಭಗಳಾಗಿವೆ. ಇದರಿಂದ 21 ನೇ ಶತಮಾನದ ನಿರ್ಮಾಣ ಮಾಡಬಹುದು ಎಂದು ಹೇಳಿದರು. 

ಮಾಣ ಗ್ರಾಮವನ್ನು ಭಾರತದ ಕೊನೆಯ ಗ್ರಾಮವೆಂದು ಪರಿಗಣಿಸಲಾಗಿದೆ. ಆದರೆ ಇನ್ನು ಮುಂದೆ ಗಡಿ ಭಾಗದಲ್ಲಿರುವ ಪ್ರತಿಯೊಂದು ಗ್ರಾಮವನ್ನು ಭಾರತದ ಮೊದಲ ಗ್ರಾಮ ಎಂದು ಪರಿಗಣಿಸಲಾಗುವುದು ಎಂದು ತಿಳಿಸಿದರು. 

ಕೇದಾರನಾಥಕ್ಕೆ ಸಂಪರ್ಕಿಸುವ 9.7 ಕಿಮೀ ಉದ್ದದ ಗೌರಿಕುಂಡ್ ರೋಪ್​ವೇಗೆ ಶಂಕುಸ್ಥಾಪನೆ ನೆರವೇರಿದೆ. 2 ಸ್ಥಳಗಳ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ 6ರಿಂದ 7 ಗಂಟೆಗಳ ಸಮಯವನ್ನು 30 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. 

ಹೇಮಕುಂಡ್ ರೋಪ್‌ವೇ ಗೋವಿಂದಘಾಟ್‌ನಿಂದ ಹೇಮಕುಂಡ್ ಸಾಹಿಬ್‌ಗೆ ಸಂಪರ್ಕ ಕಲ್ಪಿಸುತ್ತದೆ. ಇದು ಸುಮಾರು 12.4 ಕಿಮೀ ಉದ್ದವಿದ್ದು, ಪ್ರಯಾಣದ ಸಮಯವನ್ನು ಒಂದು ದಿನಕ್ಕಿಂತ ಹೆಚ್ಚು ಸಮಯದಿಂದ ಕೇವಲ 45 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ಈ ರೋಪ್‌ವೇ ಘಂಗಾರಿಯಾವನ್ನು ಸಹ ಸಂಪರ್ಕಿಸುತ್ತದೆ. ಇದು ವ್ಯಾಲಿ ಆಫ್ ಫ್ಲವರ್ಸ್ ನ್ಯಾಷನಲ್ ಪಾರ್ಕ್‌ಗೆ ಗೇಟ್‌ವೇ ಆಗಿದೆ.

ರೋಪ್‌ವೇ ಯೋಜನೆಗಳ ನಿರ್ಮಾಣ (ಗೌರಿಕುಂಡ್‌ನಿಂದ ಕೇದಾರನಾಥ ಮತ್ತು ಗೋವಿಂದ್‌ಘಾಟ್‌ನಿಂದ ಹೇಮಕುಂಡ್ ಸಾಹಿಬ್) ಸಂಪರ್ಕವನ್ನು ಒದಗಿಸಲು ಮಾತ್ರವಲ್ಲ, ಇದು ಉತ್ತರಾಖಂಡ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ. ದೇಶದ ಎಲ್ಲಾ ಪ್ರವಾಸಿಗರು ತಮ್ಮ ಪ್ರಯಾಣದ ಬಜೆಟ್‌ನ ಕನಿಷ್ಠ ಶೇ.5 ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ಖರ್ಚು ಮಾಡುವಂತೆ ನಾನು ಮನವಿ ಮಾಡುತ್ತೇನೆ ಎಂದು ಹೇಳಿದರು.

ಮಾಣಾದಿಂದ ಮಾಣಾ ಪಾಸ್‌ವರೆಗೆ ನಿರ್ಮಿಸುವ ರಸ್ತೆಯು ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಗಡಿ ಗ್ರಾಮವಾದ ಮನಗೆ ಭೇಟಿ ನೀಡದೆ ಯಾವುದೇ ಪ್ರವಾಸಿಗರು ಇಲ್ಲಿಂದ ಹಿಂತಿರುಗುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ.  ಭಾರತಮಾಲಾ ಮತ್ತು ಸಾಗರಮಾಲಾ ಸಂಪರ್ಕ ಯೋಜನೆಗಳಂತೆ ಪರ್ವತಮಾಲಾಗೆ ಕೆಲಸ ನಡೆಯುತ್ತಿದೆ. ಇದರ ಅಡಿಯಲ್ಲಿ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಾದ್ಯಂತ ರೋಪ್‌ವೇ ಯೋಜನೆಗಳ ದೊಡ್ಡ ಜಾಲವನ್ನು ನಿರ್ಮಿಸಲಾಗುತ್ತಿದೆ. 

ಮಾಣ ಗ್ರಾಮಕ್ಕೆ ಕೂಡ ಡಿಜಿಟಲ್ ಸಂಪರ್ಕ ತಲುಪಿದೆ. ಇಲ್ಲಿಯ ಅಂಗಡಿಯವರು ಕ್ಯೂಆರ್ ಕೋಡ್‌ಗಳು ಮತ್ತು ಇತರ ಮೋಡ್‌ಗಳನ್ನು ಬಳಸಿ ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುತ್ತಿದ್ದಾರೆ. ಇದು ನಮ್ಮ ದೇಶದ ಶಕ್ತಿಯಾಗಿದೆ. ನನಗೆ ಈ ಬಗ್ಗೆ ಹೆಮ್ಮೆಯಿದೆ ಎಂದು ತಿಳಿಸಿದರು. 

ಪರ್ವತ ಪ್ರದೇಶಗಳಲ್ಲಿ ಸಂಪರ್ಕವು ಒಂದು ದೊಡ್ಡ ಸವಾಲಾಗಿದೆ. ಅಂತಹ ಪ್ರದೇಶಗಳಿಗೆ ಸಂಪರ್ಕವನ್ನು ಒದಗಿಸಲು ನಮ್ಮ ಸರ್ಕಾರವು ಕೆಲಸ ಮಾಡುತ್ತಿದೆ. ದೆಹಲಿ ಮತ್ತು ಉತ್ತರ ಪ್ರದೇಶದಿಂದ ಉತ್ತರಾಖಂಡ ರಾಜ್ಯವನ್ನು ಸಂಪರ್ಕಿಸಲು 4 ಪಥದ ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸಲಾಗುತ್ತಿದೆ. ನಮ್ಮ ಸರ್ಕಾರವು ಪರ್ವತ ಪ್ರದೇಶಗಳಲ್ಲಿ ವಸ್ತುಗಳನ್ನು ತಲುಪಿಸಲು ಡ್ರೋನ್‌ಗಳ ಬಳಕೆಗೆ ಕೆಲಸ ಮಾಡುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com