ಸಾಂವಿಧಾನಿಕ ಸಂಸ್ಥೆಗಳ ಅಧಿಕಾರ ದುರ್ಬಳಕೆ; ಪ್ರಜಾಪ್ರಭುತ್ವ ಕಾಪಾಡಿ: ವೇದಿಕೆ ಮೇಲೆ ಸಿಜೆಐಗೆ ಮಮತಾ ಬ್ಯಾನರ್ಜಿ ಒತ್ತಾಯ
ಎಲ್ಲಾ ಪ್ರಜಾಸತಾತ್ಮಕ ಅಧಿಕಾರ ಕೆಲ ವ್ಯಕ್ತಿಗಳಿಂದ ಕಬಳಿಸಲ್ಪಟ್ಟಿದ್ದು, ಪ್ರಜಾಪ್ರಭುತ್ವ ಏಲ್ಲಿದೆ? ಎಂದು ಭಾರತದ ಮುಖ್ಯ ನ್ಯಾಯಾಧೀಶರನ್ನೇ ಪ್ರಶ್ನಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದಯವಿಟ್ಟು ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ವೇದಿಕೆ ಮೇಲೆಯೇ ಮನವಿ ಮಾಡಿದ್ದಾರೆ.
Published: 31st October 2022 03:50 PM | Last Updated: 31st October 2022 04:38 PM | A+A A-

ಸಿಜೆಐ ಉದಯ್ ಉಮೇಶ್ ಲಲಿತ್ ಅವರೊಂದಿಗೆ ಸಂವಾದ ನಡೆಸುತ್ತಿರುವ ಸಿಎಂ ಮಮತಾ ಬ್ಯಾನರ್ಜಿ
ಕೊಲ್ಕತ್ತ: ಎಲ್ಲಾ ಪ್ರಜಾಸತಾತ್ಮಕ ಅಧಿಕಾರ ಕೆಲ ವ್ಯಕ್ತಿಗಳಿಂದ ಕಬಳಿಸಲ್ಪಟ್ಟಿದ್ದು, ಪ್ರಜಾಪ್ರಭುತ್ವ ಏಲ್ಲಿದೆ? ಎಂದು ಭಾರತದ ಮುಖ್ಯ ನ್ಯಾಯಾಧೀಶ ಯುಯು ಲಲಿತ್ ಅವರನ್ನು ಪ್ರಶ್ನಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದಯವಿಟ್ಟು ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ವೇದಿಕೆ ಮೇಲೆಯೇ ಮನವಿ ಮಾಡಿದ್ದಾರೆ.
ಭಾನುವಾರ ನಡೆದ ನ್ಯಾಷನಲ್ ಯೂನಿವರ್ಸಿಟಿ ಆಫ್ ಜುರಿಡಿಕಲ್ ಸೈನ್ಸಸ್ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಮತಾ ಬ್ಯಾನರ್ಜಿ, ಪ್ರಜಾಸತಾತ್ಮಕ ಅಧಿಕಾರವನ್ನು ಯಾರು ಕಬಳಿಸಿದ್ದಾರೆ ಎಂಬ ಆರೋಪ ಕುರಿತು ಯಾರ ಹೆಸರನ್ನು ಹೇಳದೆ,ದೇಶದ ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಆಕೆಯ ಮಾತಿನಲ್ಲಿ ದೇಶದಲ್ಲಿನ ಪ್ರಜಾಸತಾತ್ಮಕ ಸಂಸ್ಥೆಗಳ ಅಧಿಕಾರ ಬಿಗಿಗೊಳಿಸಬೇಕು ಎಂಬುದಾಗಿತ್ತು. ಇಂದಿನ ದಿನಗಳಲ್ಲಿ ಅನಗತ್ಯವಾಗಿ ಕಿರುಕುಳ ಹೆಚ್ಚಾಗುತ್ತಿದೆ. ಇದು ಹೀಗೆಯೇ ದೇಶಾದ್ಯಂತ ಮುಂದುವರೆದರೆ ಅಧ್ಯಕ್ಷೀಯ ಸರ್ಕಾರ ರಚನೆಯತ್ತ ಸಾಗಲಿದೆ. ಪ್ರಜಾಪ್ರಭುತ್ವ ಏಲ್ಲಿದೆ ಎಂದು ಪ್ರಶ್ನಿಸಿದರು. ಮಾಧ್ಯಮಗಳ ತಾರತಮ್ಯ ಕುರಿತು ವಾಗ್ದಾಳಿ ನಡೆಸಿದ ಮಮತಾ, ಅವರು ಯಾರನ್ನೂ ಬೇಕಾದರೂ ನಿಂದಿಸಬಹುದು? ಆರೋಪಿಸಬಹುದು? ನಿಮ್ಮ ಪ್ರತಿಷ್ಠೆಯನ್ನು ಕಿತ್ತುಕೊಂಡರೆ ಏನೂ ಉಳಿಯುವುದಿಲ್ಲ, ನಮ್ಮ ದೇಶದ ಒಕ್ಕೂಟ ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನ್ಯಾಯಾಂಗ ಮತ್ತು ಭವಿಷ್ಯದ ನಾಯಕರು ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದರು.
ಇದನ್ನೂ ಓದಿ: 20-30 ಟಿಆರ್ಎಸ್ ಶಾಸಕರನ್ನು ಖರೀದಿಸಿ, ಸರ್ಕಾರ ಬೀಳಿಸಲು ಬಿಜೆಪಿ ಯತ್ನಿಸುತ್ತಿದೆ: ಸಿಎಂ ಚಂದ್ರಶೇಖರ್ ರಾವ್
ತೀರ್ಪು ಹೊರಬೀಳುವ ಮುನ್ನವೇ ಹಲವು ವಿಷಯಗಳು ನಡೆಯುತ್ತಿವೆ ಎಂದು ಆರೋಪಿಸಿದ ಮಮತಾ, ಇದನ್ನು ಹೇಳಲು ನನಗೆ ವಿಷಾದವಿದೆ. ನಾನು ಹೇಳುವುದು ತಪ್ಪು ಎಂದು ನೀವು ಭಾವಿಸಿದರೆ. ಕ್ಷಮೆಯಾಚಿಸುವುದಾಗಿ ತಿಳಿಸಿದರು.
ಎನ್ ಯುಜೆಎಸ್ ವಿಶ್ವದಲ್ಲಿಯೇ ಅತ್ಯಂತ ಪ್ರಮುಖವಾದ ಸಂಸ್ಥೆ ಎಂದು ಪ್ರತಿಪಾದಿಸಿದ ಮಮತಾ, ಜಸ್ಟಿಸ್ ಯುಯು ಲಲಿತ್ ಅವರನ್ನು ಅಭಿನಂದಿಸಬೇಕು, ಈ ವೇದಿಕೆಯಲ್ಲಿ ಈ ರೀತಿಯಲ್ಲಿ ಹೇಳುತ್ತೇನೆ ಅಂದುಕೊಂಡಿರಲಿಲ್ಲ. ಆದರೆ, ಎರಡು ತಿಂಗಳಲ್ಲಿ ನ್ಯಾಯಾಂಗ ಅಂದರೆ ಏನು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ದೇಶದ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಆದರೆ, ಇಂದಿನ ಪರಿಸ್ಥಿತಿ ತೀವ್ರವಾಗಿ ಹದೆಗಟ್ಟಿದೆ. ನ್ಯಾಯಾಂಗ ಜನರ ಸಂಕಷ್ಟವನ್ನು ಕೇಳಬೇಕು, ಅವರನ್ನು ಅನ್ಯಾಯದಿಂದ ರಕ್ಷಿಸಬೇಕು. ಈಗ ಜನರು ಮುಚ್ಚಿದ ಕೊಠಡಿಯೊಳಗೆ ಅಳುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ದೇಶದಲ್ಲಿ ಕಾನೂನು ನೆರವು ಕಾರ್ಯ ನಿರ್ಲಕ್ಷ್ಯ: ಸಿಜೆಐ ಯುಯು ಲಲಿತ್
ಇತರ ಯಾವುದೇ ದಾರಿಗಳು ತೋಚದಿದ್ದಾಗ ಜನರು ನ್ಯಾಯಕ್ಕಾಗಿ ಕೋರ್ಟ್ ಬಾಗಿಲು ಹತ್ತುತ್ತಾರೆ ಎಂಬ ಅಂಶವನ್ನು ಉಲ್ಲೇಖಿಸಿದ ಮಮತಾ, ಯುವ ವಕೀಲರು ಕಾನೂನು ಮತ್ತು ನ್ಯಾಯವನ್ನು ಎತ್ತಿಹಿಡಿಯಬೇಕಾಗಿದೆ ಎಂದರು. ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ಪಶ್ಚಿಮ ಬಂಗಾಳದ ಕ್ಯಾಬಿನೆಟ್ ಸಚಿವರ ಬಂಧನ ಸೇರಿದಂತೆ ಪ್ರತಿಪಕ್ಷಗಳ ಹಿರಿಯ ಮುಖಂಡರ ಬಂಧನ, ಕಿರುಕುಳದತ್ತ ಮಮತಾ ಬ್ಯಾನರ್ಜಿ ಭಾಷಣ ಕೇಂದ್ರಿಕರಿಸಿತ್ತು.
ಮಮತಾ ಬ್ಯಾನರ್ಜಿ ಭಾಷಣವನ್ನು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸೇರಿದಂತೆ ಹಲವು ಮುಖಂಡರು ಶ್ಲಾಘಿಸಿದ್ದಾರೆ. ಆಕೆಯ ಭಾಷಣ ನ್ಯಾಯಾಂಗ ವ್ಯವಸ್ಥೆ ಮೇಲೆ ಒತ್ತಡ ಹೇರುವ ತಂತ್ರವಾಗಿತ್ತು ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ಆದರೆ, ಮಮತಾ ಅವರ ಆರೋಪ ಅವರ ಸ್ವಂತ ಪಕ್ಷಕ್ಕೆ ಸಂಬಂಧಿಸಿದ್ದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜೂಂದಾರ್ ಹೇಳಿದ್ದಾರೆ.