ಕನ್ಯಾಕುಮಾರಿ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬುಧವಾರ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶದಲ್ಲಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ದ್ವೇಷ ಹರಡುತ್ತಿದೆ. ಇದನ್ನು ತಡೆಯದಿದ್ದರೆ ಅಂತರ್ಯುದ್ಧಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಕ್ಷದ 3,570 ಕಿಮೀ ‘ಭಾರತ್ ಜೋಡೋ ಯಾತ್ರೆ’ಗೆ ಚಾಲನೆ ನೀಡುವ ಮುನ್ನ ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗಲು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಒಲವು ತೋರಿದ್ದಾರೆ ಎಂದು ಹೇಳಿದರು.
'ರಾಹುಲ್ ಗಾಂಧಿ ನೇತೃತ್ವದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ದೇಶದ ಮುಂದೆ ದೊಡ್ಡ ಸವಾಲುಗಳಿದ್ದು, ರಾಹುಲ್ ಗಾಂಧಿ ಪಕ್ಷದ ಮುಖ್ಯಸ್ಥರಾದರೆ ಅವುಗಳನ್ನು ಎದುರಿಸುವುದು ಸುಲಭವಾಗುತ್ತದೆ. ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ ದ್ವೇಷ, ಉದ್ವಿಗ್ನತೆ, ಹಿಂಸಾಚಾರ ಎಂಬ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ, ‘ಭಾರತ್ ಜೋಡೋ’ ಘೋಷಣೆಯನ್ನು ಮೊಳಗಿಸುವ ಅಗತ್ಯವಿದೆ' ಎಂದರು.
'ಈ ಬಗ್ಗೆ ಇಡೀ ದೇಶವೇ ಕಳವಳ ವ್ಯಕ್ತಪಡಿಸಿದೆ. ಜನರ ನಡುವೆ ಪ್ರೀತಿ, ಸಹೋದರತೆ ಮತ್ತು ಸೌಹಾರ್ದತೆ ಇರಬೇಕು. ಹಿಂಸಾಚಾರವನ್ನು ಸಹಿಸುವುದಿಲ್ಲ ಎಂದು ಹೇಳುವಂತೆ ನಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡುತ್ತಿದ್ದೇವೆ. ಆದರೆ, ಅವರು ಇಲ್ಲಿಯವರೆಗೂ ಈ ರೀತಿ ಮಾಡಿಲ್ಲ' ಎಂದು ಗೆಹ್ಲೋಟ್ ಹೇಳಿದರು.
'ಇಲ್ಲಿ ತುಂಬಾ ಧ್ರುವೀಕರಣವಿದೆ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ದ್ವೇಷವನ್ನು ಸೃಷ್ಟಿಸಲಾಗಿದೆ. ಇದನ್ನು ನಿಯಂತ್ರಿಸದಿದ್ದರೆ, ಅದು ಅಂತರ್ಯುದ್ಧದತ್ತ ಸಾಗಬಹುದು. ಉತ್ತಮ ಪ್ರಜ್ಞೆಯು ಮೇಲುಗೈ ಸಾಧಿಸಲಿ. ರಾಹುಲ್ ಗಾಂಧಿಯವರು ಅಹಿಂಸೆಯನ್ನು ನಂಬುತ್ತಾರೆ, ಅವರ ಹೃದಯದಲ್ಲಿ ಯಾವುದೇ ದ್ವೇಷವಿಲ್ಲ ಎಂದ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಕಿಡಿಕಾರಿದರು.
ಗಾಂಧಿಯೇತರ ಕುಟುಂಬಸ್ಥರು ಕಾಂಗ್ರೆಸ್ ಮುಖ್ಯಸ್ಥರಾಗಬೇಕು ಎನ್ನುವ ಮಾತುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ. ಈ ಮಧ್ಯೆ ಅಶೋಕ್ ಗೆಹ್ಲೋಟ್ ಅವರು ಗಾಂಧಿಯೇತರ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾಗಿ ಹೊರಹೊಮ್ಮುವ ಬಗ್ಗೆ ಮಾತುಗಳು ಕೇಳಿಬಂದಿವೆ.
ಇನ್ನೊಂದೆಡೆ, ಗಾಂಧಿ ಕುಟುಂಬವೇ ಪಕ್ಷದ ಚುಕ್ಕಾಣಿ ಹಿಡಿಯಲಿ ಎಂದು ಪಕ್ಷದಲ್ಲಿರುವ ಗಾಂಧಿ ನಿಷ್ಠರು ಕೂಡ ತಮ್ಮ ಪ್ರಚಾರವನ್ನು ತೀವ್ರಗೊಳಿಸಿದ್ದಾರೆ. ಗೆಹ್ಲೋಟ್ ಕೂಡ ಪದೇ ಪದೆ ರಾಹುಲ್ ಗಾಂಧಿಗೆ ಉನ್ನತ ಹುದ್ದೆಯನ್ನು ಅಲಂಕರಿಸುವಂತೆ ಕೇಳಿಕೊಂಡಿದ್ದಾರೆ.
Advertisement