ಆಕ್ರಮಣಕಾರಿ ಅವತಾರದಲ್ಲಿ ಕಾಂಗ್ರೆಸ್, ಭಾರತ್ ಜೋಡೋ ಯಾತ್ರೆ ಬಳಿಕ ಲಘುವಾಗಿ ತೆಗೆದುಕೊಳ್ಳದಿರಿ: ಜೈರಾಮ್ ರಮೇಶ್
ಭಾರತ್ ಜೋಡೋ ಯಾತ್ರೆಯನ್ನು 'ಜೀವ ರಕ್ಷಕ' ಎಂದು ಕರೆದಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಗುರುವಾರ, ದೇಶದಾದ್ಯಂತ ನಡೆಯುತ್ತಿರುವ ಈ ತಳಮಟ್ಟದ ಅಭಿಯಾನದಿಂದ ಪಕ್ಷವು ಹೊಸ 'ಆಕ್ರಮಣಕಾರಿ' ಅವತಾರದಲ್ಲಿ ಹೊರಹೊಮ್ಮಲಿದೆ. ಇದನ್ನು ಸ್ನೇಹಿತರು ಅಥವಾ ರಾಜಕೀಯ ವಿರೋಧಿಗಳು ಲಘುವಾಗಿ ತೆಗೆದುಕೊಳ್ಳುವಂತಿಲ್ಲ ಎಂದು ಹೇಳಿದ್ದಾರೆ.
Published: 08th September 2022 01:53 PM | Last Updated: 08th September 2022 03:56 PM | A+A A-

ಭಾರತ್ ಜೋಡೋ ಯಾತ್ರೆ ಬಗ್ಗೆ ಕನ್ಯಾಕುಮಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್
ಕನ್ಯಾಕುಮಾರಿ: ಭಾರತ್ ಜೋಡೋ ಯಾತ್ರೆಯನ್ನು 'ಜೀವ ರಕ್ಷಕ' ಎಂದು ಕರೆದಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಗುರುವಾರ, ದೇಶದಾದ್ಯಂತ ನಡೆಯುತ್ತಿರುವ ಈ ತಳಮಟ್ಟದ ಅಭಿಯಾನದಿಂದ ಪಕ್ಷವು ಹೊಸ 'ಆಕ್ರಮಣಕಾರಿ' ಅವತಾರದಲ್ಲಿ ಹೊರಹೊಮ್ಮಲಿದೆ. ಇದನ್ನು ಸ್ನೇಹಿತರು ಅಥವಾ ರಾಜಕೀಯ ವಿರೋಧಿಗಳು ಲಘುವಾಗಿ ತೆಗೆದುಕೊಳ್ಳುವಂತಿಲ್ಲ ಎಂದು ಹೇಳಿದ್ದಾರೆ.
ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪಕ್ಷದ ಹಲವಾರು ಕಾರ್ಯಕರ್ತರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,570 ಕಿಮೀ ಯಾತ್ರೆಯನ್ನು ಪ್ರಾರಂಭಿಸಿದ್ದು, ಯಾತ್ರೆಯನ್ನು ಟೀಕಿಸಿದ ಬಿಜೆಪಿ ವಿರುದ್ಧ ಪಕ್ಷದ ಸಂವಹನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕಿಡಿಕಾರಿದರು.
ಬಿಜೆಪಿ ಈ ಬಗ್ಗೆ ಹೆಚ್ಚು ಮಾತನಾಡಿದಷ್ಟೂ ಆ ಪಕ್ಷದೊಳಗೆ ಗಲಾಟೆಯಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. 'ಈ ಭಾರತ್ ಜೋಡೋ ಯಾತ್ರೆಯು ಕಾಂಗ್ರೆಸ್ಗೆ 'ಸಂಜೀವನಿ' ಎಂದು ನನಗೆ ಶೇ 100 ರಷ್ಟು ಖಚಿತವಾಗಿದೆ. ಇದು ಜೀವ ರಕ್ಷಕ, ಇದು ಕಾಂಗ್ರೆಸ್ ಅನ್ನು ಪುನರುಜ್ಜೀವನಗೊಳಿಸಲಿದೆ, ಇದು ಕಾಂಗ್ರೆಸ್ ಅನ್ನು ಪುನಶ್ಚೇತನಗೊಳಿಸಲಿದೆ, ಇದು ಕಾಂಗ್ರೆಸ್ ಅನ್ನು ನವೀಕರಿಸುತ್ತದೆ, ಇದರಿಂದ ಹೊಸ ಅವತಾರದಲ್ಲಿ ಕಾಂಗ್ರೆಸ್ ಕಾಣಿಸಿಕೊಳ್ಳಲಿದೆ' ಎಂದು ಯಾತ್ರೆಯ ಬೆಳಗಿನ ಅಧಿವೇಶನದ ನಂತರ ರಮೇಶ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ: ಮುಂದಿನ 150 ದಿನಗಳ ಕಾಲ ಕಂಟೈನರ್ನಲ್ಲಿ ತಂಗಲಿದ್ದಾರೆ ರಾಹುಲ್ ಗಾಂಧಿ!
'ಸಂಜೀವನಿ' ಎಂಬುದು ಹಿಂದೂ ಮಹಾಕಾವ್ಯ ರಾಮಾಯಣದಲ್ಲಿ ಕಂಡುಬರುವ ಪೌರಾಣಿಕ ಜೀವರಕ್ಷಕ ಮೂಲಿಕೆಯ ಉಲ್ಲೇಖವಾಗಿದೆ.
137 ವರ್ಷಗಳಲ್ಲಿ ಕಾಂಗ್ರೆಸ್ ಹಲವು ಅವತಾರಗಳನ್ನು ಎತ್ತಿದ್ದು, ಈಗ ಹೊಸ ಅವತಾರದಲ್ಲಿ ಬರಲಿದೆ. ಇದು ಹೆಚ್ಚು ಆಕ್ರಮಣಕಾರಿ ಕಾಂಗ್ರೆಸ್ ಆಗಿರುತ್ತದೆ, ಇದು ಹೆಚ್ಚು ಸಕ್ರಿಯ ಕಾಂಗ್ರೆಸ್ ಆಗಿರುತ್ತದೆ. ಸ್ನೇಹಿತರಿಂದ ಅಥವಾ ಅದರ ರಾಜಕೀಯ ವಿರೋಧಿಗಳಿಂದ ಇನ್ನು ಮುಂದೆ ಲಘುವಾಗಿ ತೆಗೆದುಕೊಳ್ಳಲಾಗದ ಕಾಂಗ್ರೆಸ್ ಆಗಿರುತ್ತದೆ. ಆದರೆ, ಸದ್ಯ ನಮ್ಮ ರಾಜಕೀಯ ವಿರೋಧಿಗಳು ಮಾತ್ರವಲ್ಲದೆ ನಮ್ಮ ಸ್ನೇಹಿತರು ಮತ್ತು ಮಿತ್ರರೂ ಸಹ ನಮ್ಮನ್ನು ಲಘುವಾಗಿ ಪರಿಗಣಿಸಿದ್ದಾರೆ' ಎಂದು ರಮೇಶ್ ಸೇರಿಸಿದ್ದಾರೆ.
ಇದನ್ನೂ ಓದಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ: ಕಾಂಗ್ರೆಸ್ 'ಭಾರತ್ ಜೋಡೋ' ಯಾತ್ರೆಗೆ ರಾಹುಲ್ ಗಾಂಧಿ ಚಾಲನೆ
ಕಾಂಗ್ರೆಸ್ ದೇಶದ ಅತ್ಯಂತ ಪುರಾತನ ರಾಜಕೀಯ ಪಕ್ಷವಾಗಿದೆ. ನಾವು ಅಧಿಕಾರದಲ್ಲಿ ಇಲ್ಲದಿರಬಹುದು ಆದರೆ ಪ್ರತಿ ಮೊಹಲ್ಲಾ, ಹಳ್ಳಿ, ಪಟ್ಟಣಗಳಲ್ಲಿ ನಾವು ಖಂಡಿತವಾಗಿಯೂ ಅಸ್ತಿತ್ವವನ್ನು ಹೊಂದಿದ್ದೇವೆ. ಇದು ತುಂಬಾ ಸ್ಪಷ್ಟವಾಗಿದೆ ಮತ್ತು ನಿಖರವಾಗಿದೆ' ಸ್ಪಷ್ಟವಾಗಿದೆ' ಎಂದು ಹೇಳಿದರು.
3,500 ಕಿ.ಮೀ.ಗಳಲ್ಲಿ, ಪಕ್ಷವು ಬೆಳಗಿನ ಅವಧಿಯಲ್ಲಿ 13 ಕಿ.ಮೀ ದೂರವನ್ನು ಕ್ರಮಿಸಿದೆ. ಕನ್ಯಾಕುಮಾರಿಯ ಸುಚಿಂದ್ರಂ ತಲುಪಲು ನಾಯಕರು ಸುಮಾರು ಮೂರು ಗಂಟೆ ತೆಗೆದುಕೊಂಡರು.
'ಇದು ಕೆಟ್ಟದ್ದಲ್ಲ, ನಾವು 13-15 ಕಿಮೀ ಕ್ರಮಿಸುತ್ತೇವೆ ಎಂದು ನಾವು ನಿರೀಕ್ಷಿಸಿದ್ದೇವೆ. ನಾವು ಇಂದು ಸ್ವಲ್ಪ ತಡವಾಗಿ ಪ್ರಾರಂಭಿಸಿದ್ದೇವೆ. ಸಿಡಬ್ಲ್ಯುಸಿ ಸದಸ್ಯರು, ಹಿರಿಯ ಕಾಂಗ್ರೆಸ್ ನಾಯಕರು ಇದ್ದರು. ನಾಳೆಯಿಂದ ನಾವು ಬೆಳಿಗ್ಗೆ 15 ಕಿಮೀ ದೂರವನ್ನು ಮುಗಿಸುತ್ತೇವೆ. ಸಂಜೆ 8 ಕಿಮೀ ಪೂರ್ಣಗೊಳಿಸುವ ಆಲೋಚನೆ ಇದೆ' ಎಂದು ಅವರು ಹೇಳಿದರು.
ಇದನ್ನೂ ಓದಿ: ರಾಬರ್ಟ್ ವಾದ್ರಾ ಇರುವ ಪೋಸ್ಟರ್: ಕಾಂಗ್ರೆಸ್ ನ 'ಪರಿವಾರ್ ಜೋಡೋ' ಎಂದು ಬಿಜೆಪಿ ಟೀಕೆ
ಬಿಜೆಪಿಯವರ ಟೀಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮೇಶ್, 'ಇದು ಭಾರತ್ ಜೋಡೋ ಯಾತ್ರೆ. ಬಿಜೆಪಿಯವರು ಏನು ಹೇಳುತ್ತಾರೆ ಎನ್ನುವ ಬಗ್ಗೆ ಚಿಂತೆ ನನಗಿಲ್ಲ. ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯ ಬಗ್ಗೆ ಗಮನಹರಿಸಿದ್ದೇನೆ. ಈ ಯಾತ್ರೆಯ ಬಗ್ಗೆ ಬಿಜೆಪಿಯವರು ಹೆಚ್ಚು ಮಾತನಾಡಿದಷ್ಟೂ ಪಕ್ಷವು ಗಲಿಬಿಲಿಗೊಂಡಿರುವುದು ಸ್ಪಷ್ಟವಾಗುತ್ತದೆ. ಈ ಮೂಲಕ ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸಲಾಗುವುದು ಎಂದರು.
ದೇಶದ ಕನ್ಯಾಕುಮಾರಿಯಲ್ಲಿ ಆರಂಭಗೊಂಡು ಶ್ರೀನಗರದಲ್ಲಿ ಕೊನೆಗೊಳ್ಳುವ ಭಾರತ್ ಜೋಡೋ ಯಾತ್ರೆಯು, 150 ದಿನಗಳ ಕಾಲ 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಚರಿಸಲಿದೆ.