ದಸರಾ ವೇಳೆಗೆ ಕೆಸಿಆರ್ ಹೊಸ ರಾಷ್ಟ್ರೀಯ ಪಕ್ಷ ಸ್ಥಾಪನೆ?
ಹೈದ್ರಾಬಾದ್: ತೆಲಂಗಾಣ ಮುಖ್ಯಮಂತ್ರಿ ಮತ್ತು ಟಿಆರ್ ಎಸ್ ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್ ರಾಷ್ಟ್ರೀಯ ಪಕ್ಷ ಸ್ಥಾಪನೆಯೊಂದಿಗೆ ರಾಷ್ಟ್ರ ರಾಜಕಾರಣಕ್ಕೆ ಜಿಗಿಯಲಿದ್ದಾರೆ ಎನ್ನಲಾಗುತ್ತಿದೆ. ಆದಾಗ್ಯೂ, ಅವರ ಈ ಚಿಂತನೆ ಇನ್ನೂ ಅಂತಿಮಗೊಂಡಿಲ್ಲ ಎಂದು ಪಕ್ಷದ ಮೂಲಗಳು ಶನಿವಾರ ತಿಳಿಸಿವೆ.
ಅಕ್ಟೋಬರ್ ನಲ್ಲಿ ದಸರಾ ಆಚರಣೆ ಸಂದರ್ಭದಲ್ಲಿ ಹೊಸ ಪಕ್ಷದ ಯೋಜನೆಯನ್ನು ಕೆಸಿಆರ್ ಪ್ರಕಟಿಸಲಿದ್ದಾರೆ ಎಂಬ ಊಹಾಪೋಹಗಳು ಹರಡಿವೆ. ಆದರೆ, ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎಂದು ಮೂಲಗಳು ಹೇಳಿವೆ. ಕೇಂದ್ರದ ಎನ್ಡಿಎ ಸರ್ಕಾರದ ವಿವಿಧ ರಂಗಗಳಲ್ಲಿನ ವೈಫಲ್ಯಗಳ ಬಗ್ಗೆ ಜನರು ನಿರಾಶೆಗೊಂಡಿದ್ದಾರೆ ಮತ್ತು ಹೊಸ ಪಕ್ಷದ ಅವಶ್ಯಕತೆಯಿದೆ. ರಾವ್ ಅವರಿಗೆ ದೇಶ ಮತ್ತು ಜನರ ಅಗತ್ಯಗಳ ಬಗ್ಗೆ ಆಳವಾದ ತಿಳುವಳಿಕೆ ಇದೆ ಎಂದು ಅವು ತಿಳಿಸಿವೆ.
ಕೇಂದ್ರದಲ್ಲಿ ಬಿಜೆಪಿಯ ಜನವಿರೋಧಿ ಆಡಳಿತ ಕೊನೆಗಾಣಿಸಲು ರಾಷ್ಟ್ರೀಯ ರಾಜಕೀಯಕ್ಕೆ ಧುಮುಕುವಂತೆ ಟಿಆರ್ಎಸ್ ಜಿಲ್ಲಾ ಘಟಕಗಳ ಅಧ್ಯಕ್ಷರಿಗೆ ಕೆಸಿಆರ್ ಶುಕ್ರವಾರ ಕರೆ ನೀಡಿದ್ದರು. ಕೆಸಿಆರ್ ರಾಷ್ಟ್ರ ರಾಜಕೀಯ ಪ್ರವೇಶಿಸಬೇಕು ಮತ್ತು ಹೊಸ ರಾಷ್ಟ್ರೀಯ ಪಕ್ಷ ಪ್ರಾರಂಭಿಸಬೇಕು ಎಂದು ಟಿಆರ್ ಎಸ್ ಜಿಲ್ಲಾಘಟಕಗಳು ಮನವಿ ಮಾಡಿರುವುದಾಗಿ ಟಿಆರ್ಎಸ್ ಶಾಸಕ ಮತ್ತು ಮಂಚೇರಿಯಲ್ ಜಿಲ್ಲಾ ಘಟಕದ ಅಧ್ಯಕ್ಷ ಬಾಲ್ಕ ಸುಮನ್ ಹೇಳಿದ್ದಾರೆ.
ಕೆಲವು ಸಚಿವರು ಸೇರಿದಂತೆ ಹಲವಾರು ಇತರ ಟಿಆರ್ ಎಸ್ ನಾಯಕರು ರಾವ್ ರಾಷ್ಟ್ರೀಯ ರಾಜಕೀಯ ರಂಗಕ್ಕೆ ಪ್ರವೇಶಿಸುವ ಪರವಾಗಿ ಮಾತನಾಡಿದ್ದಾರೆ. ಈ ಜಿಲ್ಲಾ ನಾಯಕರ ಹೇಳಿಕೆಗಳು ರಾವ್ ಅವರು ರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸುವ ಬಗ್ಗೆ ವ್ಯಾಪಕ ಸುಳಿವು ಎಂದು ಪರಿಗಣಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ