ಬಾರಮುಲ್ಲಾ: ಇನ್ನೂ ಹತ್ತು ದಿನಗಳೊಳಗೆ ನೂತನ ರಾಜಕೀಯ ಪಕ್ಷವನ್ನು ರಚಿಸಲಾಗುವುದು ಎಂದು ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದ ಗುಲಾಂ ನಬಿ ಆಜಾದ್ ಭಾನುವಾರ ಹೇಳಿದ್ದಾರೆ ಮತ್ತು ನೂತನ ಪಕ್ಷದ ಸಿದ್ಧಾಂತವು 'ಸ್ವತಂತ್ರ'ವಾಗಿರುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರು ಪಡೆಯವುದು ಹಾಗೂ ಜನರ ಉದ್ಯೋಗ, ಭೂಮಿಯ ಹಕ್ಕುಗಳಿಗಾಗಿ ಹೋರಾಡುವುದು ಹೊಸ ರಾಜಕೀಯ ಪಕ್ಷದ ಕಾರ್ಯಸೂಚಿಯಾಗಿದೆ ಎಂದು ಅವರು ಹೇಳಿದ್ದಾರೆ.
ಕಾಶ್ಮೀರ ಕಣಿವೆ ಪ್ರದೇಶ ಬಾರಮುಲ್ಲಾದಲ್ಲಿ ತನ್ನ ಮೊದಲ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಗುಲಾಂ ನಬಿ ಆಜಾದ್, ನನ್ನೊಂದಿಗೆ ನಿಂತಿರುವ ನನ್ನ ಸಹೋದ್ಯೋಗಿಗಳಿಗೆ ಧನ್ಯವಾದ ಹೇಳುತ್ತೇನೆ. ಅವರು ನನ್ನ ಹೊಸ ಪಕ್ಷದ ಮೂಲವಾಗಿದ್ದಾರೆ. ಮುಂದಿನ 10 ದಿನಗಳಲ್ಲಿ ಹೊಸ ಪಕ್ಷವನ್ನು ಘೋಷಿಸಲಾಗುವುದು, ಅದರ ಸಿದ್ದಾಂತ ಮತ್ತು ಚಿಂತನೆಗಳು ನನ್ನ ಹೆಸರಿನಂತೆ ಸ್ವತಂತ್ರವಾಗಿರುತ್ತವೆ ಎಂದು ಅವರು ತಿಳಿಸಿದರು.
"ನನ್ನ ಪಕ್ಷವು ಅಭಿವೃದ್ಧಿ ಆಧಾರಿತವಾಗಿರುತ್ತದೆ. ಜನರಿಗೆ ಉದ್ಯೋಗಾವಕಾಶಗಳನ್ನು ನೀಡುವುದು ಇದರ ಕಾರ್ಯಸೂಚಿಯಾಗಿದೆ. ತಾನು ಯಾವುದೇ ರಾಷ್ಟ್ರೀಯ ಅಥವಾ ಪ್ರಾದೇಶಿಕ ಪಕ್ಷಗಳ ವಿರುದ್ಧವಾಗಿಲ್ಲ. ಪಕ್ಷಾತೀತವಾಗಿ ಅನೇಕರು ನನ್ನ ಸ್ನೇಹಿತರು ಎಂದು ಅವರು ಹೇಳಿದರು. 73 ವರ್ಷದ ಆಜಾದ್ ಅವರು ಆಗಸ್ಟ್ 26 ರಂದು ಕಾಂಗ್ರೆಸ್ ಜೊತೆಗಿನ ಐದು ದಶಕಗಳ ಕಾಲದ ಸಂಬಂಧವನ್ನು ಕಡಿದುಕೊಂಡಿದ್ದರು.
Advertisement