ನವದೆಹಲಿ: ಈ ಹಿಂದೆ ಆರ್ಎಸ್ಎಸ್ ಸಮವಸ್ತ್ರದ ಭಾಗವಾಗಿದ್ದ ಖಾಕಿ ಚಡ್ಡಿಗೆ ಬೆಂಕಿ ಹಚ್ಚಿರುವ ಚಿತ್ರವನ್ನು ಕಾಂಗ್ರೆಸ್ ಸೋಮವಾರ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಇದು 'ಹಿಂಸಾಚಾರಕ್ಕೆ ಪ್ರಚೋದನೆ' ಎಂದು ಬಣ್ಣಿಸಿರುವ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
'ದೇಶವನ್ನು ದ್ವೇಷದ ಸಂಕೋಲೆಯಿಂದ ಮುಕ್ತಗೊಳಿಸಲು ಮತ್ತು ಬಿಜೆಪಿ-ಆರ್ಎಸ್ಎಸ್ ಮಾಡಿರುವ ಹಾನಿಯನ್ನು ನಿವಾರಿಸಲು ಹಂತ ಹಂತವಾಗಿ ನಾವು ನಮ್ಮ ಗುರಿಯನ್ನು ತಲುಪುತ್ತೇವೆ' ಎಂದು ಚಿತ್ರದೊಂದಿಗೆ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇನ್ನೂ 145 ದಿನಗಳು ಬಾಕಿಯಿವೆ ಎಂದು ಪಕ್ಷದಿಂದ ನಡೆಯುತ್ತಿರುವ 'ಭಾರತ್ ಜೋಡೋ ಯಾತ್ರೆ' ಬಗ್ಗೆ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ, ಕಾಂಗ್ರೆಸ್ ನಡೆಸುತ್ತಿರುವ ಯಾತ್ರೆಯನ್ನು 'ಭಾರತ್ ತೋಡೋ ಯಾತ್ರೆ' ಎಂದಿದೆ.
ಸದ್ಯ ಕಾಂಗ್ರೆಸ್ ಯಾತ್ರೆ ನಡೆಸುತ್ತಿರುವ ಕೇರಳದಲ್ಲಿ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಎಂದು ಪರಿಗಣಿಸಲಾದ ಹಿಂದೂ ಸಂಘಟನೆಯಾದ ಆರ್ಎಸ್ಎಸ್ನ ಸದಸ್ಯರನ್ನು ಕೊಲ್ಲಲಾಗುತ್ತಿದೆ ಎಂದು ದೂರಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ವಿರೋಧ ಪಕ್ಷವು ದಕ್ಷಿಣದ ರಾಜ್ಯದಲ್ಲಿ ನಮ್ಮ ಕಾರ್ಯಕರ್ತರನ್ನು ಗುರಿಯಾಗಿಸಲು 'ಭಯೋತ್ಪಾದಕರಿಗೆ' ಸೂಚಿಸಿದೆ ಎಂದು ಆರೋಪಿಸಿದ್ದಾರೆ.
ಭಾರತದ ಸಾಂವಿಧಾನಿಕ ವಿಷಯಗಳ ಯೋಜನೆಯಲ್ಲಿ ಹಿಂಸಾಚಾರಕ್ಕೆ ಅವಕಾಶವಿಲ್ಲ ಎಂದಿರುವ ಪಾತ್ರಾ, ಕೂಡಲೇ ಈ ಪೋಸ್ಟ್ ಅನ್ನು ಹಿಂತೆಗೆದುಕೊಳ್ಳುವಂತೆ ಕಾಂಗ್ರೆಸ್ಗೆ ಒತ್ತಾಯಿಸಿದ್ದಾರೆ. ಪಕ್ಷದ ಒಂದು ಭಾಗವು 'ಬೆಂಕಿ'ಯೊಂದಿಗೆ ಹಳೆಯ ಸಂಬಂಧವನ್ನು ಹೊಂದಿದೆ ಎಂದು ಹೇಳಿದರು.
ಪಕ್ಷ ಅಧಿಕಾರದಲ್ಲಿದ್ದಾಗ ಪಂಜಾಬ್ಗೆ ಬೆಂಕಿ ಹಚ್ಚಲಾಯಿತು ಮತ್ತು 1984 ರ ಗಲಭೆಯಲ್ಲಿ ಸಿಖ್ಖರನ್ನು ಜೀವಂತವಾಗಿ ಸುಡಲಾಯಿತು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಕಿಡಿ
ಇದಕ್ಕೆ ತಿರುಗೇಟು ನೀಡಿರುವ ಸಂಸದ ತೇಜಸ್ವಿ ಸೂರ್ಯ, ಈ ಚಿತ್ರವು ಕಾಂಗ್ರೆಸ್ ಮಾಡುವ ರಾಜಕೀಯದ ಸಂಕೇತವಾಗಿದ್ದು, ದೇಶದಲ್ಲಿ ಬೆಂಕಿ ಹೊತ್ತಿಸುತ್ತಿದೆ. ಈ ಹಿಂದೆ ಅವರು ಹಚ್ಚಿದ ಬೆಂಕಿ ದೇಶದ ಬಹುತೇಕ ಭಾಗವನ್ನು ಸುಟ್ಟು ಹಾಕಿದೆ. ರಾಜಸ್ಥಾನ ಹಾಗೂ ಛತ್ತೀಸಗಡದಲ್ಲಿ ಉಳಿದಿರುವ ಕೆಂಡ ಶೀಘ್ರದಲ್ಲೇ ಬೂದಿಯಾಗಲಿದೆ ಎಂದು ಹೇಳಿದ್ದಾರೆ.
Advertisement