'ಖರ್ಗೆ ನನಗಿಂತ ಹಿರಿಯರು, ಅವರ ವಿರುದ್ಧ ಸ್ಪರ್ಧಿಸುವುದನ್ನೂ ನಾನು ಯೋಚಿಸಲಾರೆ': ದಿಗ್ವಿಜಯ್ ಸಿಂಗ್
ಮಲ್ಲಿಕಾರ್ಜುನ ಖರ್ಗೆ ನನಗಿಂತ ಹಿರಿಯರಾಗಿದ್ದು, ಅವರ ವಿರುದ್ಧ ಸ್ಪರ್ಧಿಸುವುದನ್ನು ನಾನು ಕಲ್ಪನೆ ಕೂಡ ಮಾಡಲಾರೆ.. ಹೀಗಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
Published: 30th September 2022 01:24 PM | Last Updated: 07th November 2022 01:09 PM | A+A A-

ದಿಗ್ವಿಜಯ್ ಸಿಂಗ್
ನವದೆಹಲಿ: ಮಲ್ಲಿಕಾರ್ಜುನ ಖರ್ಗೆ ನನಗಿಂತ ಹಿರಿಯರಾಗಿದ್ದು, ಅವರ ವಿರುದ್ಧ ಸ್ಪರ್ಧಿಸುವುದನ್ನು ನಾನು ಕಲ್ಪನೆ ಕೂಡ ಮಾಡಲಾರೆ.. ಹೀಗಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಕಣ ರಂಗೇರಿದ್ದು, ಮಹತ್ವದ ಬೆಳವಣಿಗೆಯಲ್ಲಿ ನಿನ್ನೆಯಷ್ಟೇ ನಾಮಪತ್ರ ಸಂಗ್ರಹಿಸಿದ್ದ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ದಿಗ್ವಿಜಯ ಸಿಂಗ್ ಅವರು ಇಂದು ಬೆಳಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ನಂತರ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ನಿನ್ನೆ ತಡರಾತ್ರಿ ನಡೆದ ಸಭೆಯ ನಂತರ, ಕಾಂಗ್ರೆಸ್ ಹಿರಿಯ ನಾಯಕ ಕೆಸಿ ವೇಣುಗೋಪಾಲ್ ಅವರು ಖರ್ಗೆ ಅವರನ್ನು ಸ್ಪರ್ಧಿಸಲು ನಾಯಕತ್ವ ಬಯಸುತ್ತದೆ ಎಂದು ತಿಳಿಸಿದ ಹಿನ್ನಲೆಯಲ್ಲಿ ದಿಗ್ವಿಜಯ್ ಸಿಂಗ್ ಸ್ಪರ್ಧೆಯಿಂದ ಹಿಂದೆ ಸರಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷ ಚುನಾವಣೆ: ನಾಮಪತ್ರ ಸಂಗ್ರಹಿಸಿದ ಬೆನ್ನಲ್ಲೇ ರೇಸ್ ನಿಂದ ಹೊರ ಬಂದ ದಿಗ್ವಿಜಯ್ ಸಿಂಗ್, ಖರ್ಗೆ ಹಾದಿ ಸುಗಮ!
ಈ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಸ್ವತಃ ದಿಗ್ವಿಜಯ್ ಸಿಂಗ್ ಅವರು ಸುದ್ದಿಗಾರರಿಗೆ ಉತ್ತರಿಸಿದ್ದು, 'ಖರ್ಗೆ ಅವರಂತಹ ಹಿರಿಯ ನಾಯಕರ ವಿರುದ್ಧ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯೋಚಿಸಲು ಕೂಡ ನನಗೆ ಸಾಧ್ಯವಿಲ್ಲ ಎಂದು ಹೇಳಿದರು.
'ಮಲ್ಲಿಕಾರ್ಜುನ ಖರ್ಗೆ ನನ್ನ ನಾಯಕರು ಮತ್ತು ನನ್ನ ಹಿರಿಯರು, ನಿನ್ನೆ ಅವರ ನಿವಾಸಕ್ಕೆ ಹೋಗಿ ಅವರು ಸ್ಪರ್ಧಿಸುತ್ತೀರಾ ಎಂದು ಕೇಳಿದ್ದೆ, ಅವರು ಸ್ಪರ್ಧಿಸಿದರೆ ನಾನು ಅರ್ಜಿಯನ್ನು ಭರ್ತಿ ಮಾಡುವುದಿಲ್ಲ ಎಂದು ಹೇಳಿದ್ದೆ. ಈ ಹಿಂದೆ ಖರ್ಗೆ ಅವರು ಸ್ಪರ್ಧಿಸುವ ಉದ್ದೇಶವಿಲ್ಲ ಎಂದು ನನಗೆ ಮಾಧ್ಯಮಗಳ ಮೂಲಕ ತಿಳಿದುಬಂದಿತ್ತು. ಹೀಗಾಗಿ ನಾನು ಸ್ಪರ್ಧೆಗೆ ಮುಂದಾದೆ. ಈಗ ಅವರು ಸ್ಪರ್ಧೆಗೆ ನಾನೇ ಒತ್ತಾಯಿಸುತ್ತಿದ್ದೇನೆ. ನಾನು ಇಂದು ಬೆಳಿಗ್ಗೆ ಅವರನ್ನು ಭೇಟಿಯಾಗಲು ಹೋಗಿದ್ದೆ, ಅವರು ನಾಮಪತ್ರ ಸಲ್ಲಿಸುವ ವೇಳೆ ನಾನು ಕೂಡ ಅವರೊಂದಿಗೆ ಹೋಗುತ್ತೇನೆ ಎಂದು ಸಿಂಗ್ ಹೇಳಿದರು.
ಖರ್ಗೆ ಅವರು ಪಕ್ಷದ ಹಿರಿಯ ಮತ್ತು ಗೌರವಾನ್ವಿತ ನಾಯಕ ಮತ್ತು ಅವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಾನು ಯೋಚಿಸುವುದಿಲ್ಲ. ಖರ್ಗೆ ಅವರು ನನಗೆ ಮೊದಲೇ ಹೇಳಿದ್ದರೆ, ನಾನು ನಾಮಪತ್ರವನ್ನು ಸಂಗ್ರಹಿಸಲು ಹೋಗುತ್ತಿರಲಿಲ್ಲ. ಈಗ ಅವರು ತಮ್ಮ ನಾಮಪತ್ರವನ್ನು ಸಲ್ಲಿಸಲು ಉದ್ದೇಶಿಸಿದ್ದಾರೆ, ನಾನು ಅವರ ಪ್ರಸ್ತಾಪಕನಾಗುತ್ತೇನೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಒಂದೆರೆಡು ದಿನದಲ್ಲಿ ರಾಜಸ್ಥಾನ ಮುಖ್ಯಮಂತ್ರಿಯ ಬಗ್ಗೆ ನಿರ್ಧಾರ: ಕಾಂಗ್ರೆಸ್
ಇದೇ ವೇಳೆ ನೆಹರು-ಗಾಂಧಿ ಕುಟುಂಬಕ್ಕೆ ತಮ್ಮ ಬದ್ಧತೆಯಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಿಂಗ್ ಅವರು, "ನಾನು ನನ್ನ ಜೀವನದುದ್ದಕ್ಕೂ ಕಾಂಗ್ರೆಸ್ಗಾಗಿ ಕೆಲಸ ಮಾಡಿದ್ದೇನೆ ಮತ್ತು ಅದನ್ನು ಮುಂದುವರಿಸುತ್ತೇನೆ. ನಾನು ಮೂರು ವಿಷಯಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಮೊದಲನೆಯದು, ದಲಿತ, ಬುಡಕಟ್ಟು ಮತ್ತು ಬಡವರ ವಿಚಾರಕ್ಕೆ, ಎರಡನೆಯದು, ಕೋಮು ಶಾಂತಿ ಕದಡುವಲ್ಲಿ ತೊಡಗಿರುವವರೊಂದಿಗೆ ನಾನು ರಾಜಿ ಮಾಡುವುದಿಲ್ಲ. ಮೂರನೆಯದಾಗಿ ನೆಹರೂ-ಗಾಂಧಿ ಕುಟುಂಬಕ್ಕೆ ನನ್ನ ಬದ್ಧತೆಯ ಮೇಲೆ ರಾಜಿ ಮಾಡಿಕೊಳ್ಳುವುದಿಲ್ಲ," ಎಂದು ಅವರು ಹೇಳಿದರು.