ನವದೆಹಲಿ: ಏ.03 ರಿಂದ ಭೂತಾನ್ ನ ರಾಜ ನಾಮ್ಗೈಲ್ ವಾಂಗ್ಚುಕ್ 3 ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಅವರ ಭೇಟಿ ವೇಳೆ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ನಾಮ್ಗೈಲ್ ವಾಂಗ್ಚುಕ್ ಮಾತುಕತೆ ನಡೆಸಲಿದ್ದಾರೆ.
ಈ ಭೇಟಿ ಉಭಯ ರಾಷ್ಟ್ರಗಳಿಗೂ ದ್ವಿಪಕ್ಷೀಯ ಮಹತ್ವ ಪಡೆದುಕೊಳ್ಳಲಿದೆ ಹಾಗೂ ಆರ್ಥಿಕ ಹಾಗೂ ಅಭಿವೃದ್ಧಿ ಸಹಕಾರವನ್ನು ಮತ್ತಷ್ಟು ಗಾಢವಾಗಿಸುವ ಉದ್ದೇಶವನ್ನು ಹೊಂದಿದೆ ಎಂದು ಎಂಇಎ ಹೇಳಿದೆ.
ಬೆಲ್ಜಿಯನ್ ಪತ್ರಿಕೆ ಲೆ ಲಿಬ್ರೆ ಪತ್ರಿಕೆಗೆ ಭೂತಾನ್ ಪ್ರಧಾನಿ ಲೊಟೇ ಶೆರಿಂಗ್, ಅವರು ನೀಡಿದ್ದ ಸಂದರ್ಶನದಲ್ಲಿ ಚೀನಾದ ಬಗ್ಗೆ ಉಲ್ಲೇಖಿಸುತ್ತಾ, ಬೌಂಡರಿ ವಿಷಯವಾಗಿ ಚೀನಾ ಸಮಾನವಾದ ಪಾಲುದಾರ ಎಂಬ ಹೇಳಿಕೆ ನೀಡಿದ್ದರು ಇದರಿಂದ ಭಾರತದಿಂದ ಭೂತಾನ್ ದೂರವಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿತ್ತು. ಭೂತಾನ್ ಪ್ರಧಾನಿಯ ಈ ಹೇಳಿಕೆ ಬೆನ್ನಲ್ಲೇ ಅಲ್ಲಿನ ರಾಜ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.
ಚೀನಾ ಭೂತಾನ್ ನ ಪ್ರದೇಶವನ್ನು ಆಕ್ರಮಿಸಿಕೊಂಡಿದೆ ಎಂಬ ಹೇಳಿಕೆಗಳನ್ನು ಶೆರಿಂಗ್ ತಳ್ಳಿಹಾಕಿದ್ದರು. ಅಷ್ಟೇ ಅಲ್ಲದೇ ಭಾರತ, ಭೂತಾನ್ ಮತ್ತು ಚೀನಾ ಒಟ್ಟಾಗಿ ಗಡಿ ವಿವಾದವನ್ನು ಬಗೆಹರಿಸಿಕೊಳ್ಳುವಂತೆಯೂ ಅವರು ಸಲಹೆ ನೀಡಿದರು. ಇದು ಭಾರತದ ಕೆಂಗಣ್ಣಿಗೆ ಗುರಿಯಾಗಿತ್ತು.
Advertisement