ಪ್ರಯಾಗ್ರಾಜ್: ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿ, ದರೋಡೆಕೋರ-ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ನನ್ನು ಮಾಧ್ಯಮಗಳು ಹಾಗೂ ಪೊಲೀಸರ ಎದುರೇ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ವೈದ್ಯಕೀಯ ತಪಾಸಣೆಗಾಗಿ ಈ ಇಬ್ಬರನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದಾಗಲೇ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ನೆಲಕ್ಕೆ ಬಿದ್ದ ಅಹ್ಮದ್ ಮತ್ತು ಆತನ ಸಹೋದರನ ಮೇಲೆ ಕನಿಷ್ಠ ಇಬ್ಬರು ವ್ಯಕ್ತಿಗಳು ಹತ್ತಿರದಿಂದ ಗುಂಡು ಹಾರಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಗುಂಡಿನ ದಾಳಿ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸನ್ನಿ, ಲವಲೇಶ್ ಮತ್ತು ಅರುಣ್ ಎಂದು ಗುರುತಿಸಲಾಗಿದ್ದು, ದಾಳಿಕೋರರು ಮಾಧ್ಯಮದವರಂತೆ ವೇಷ ಧರಿಸಿದ್ದರು ಎನ್ನಲಾಗಿದೆ.
ಅತೀಕ್ ಅಹ್ಮದ್ ಪುತ್ರ ಅಸದ್ನನ್ನು ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಪೊಲೀಸರು ಏಪ್ರಿಲ್ 13 ರಂದು ಎನ್ಕೌಂಟ್ ಮಾಡಿದ ಬೆನ್ನಲ್ಲೇ ಈ ಗುಂಡಿನ ದಾಳಿ ನಡೆದಿದೆ.
Advertisement