ಮಣಿಪುರದಲ್ಲಿ ಪರಿಸ್ಥಿತಿ ಉದ್ನಿಗ್ನ: ಸಿಎಂ ಬಿರೇನ್ ಸಿಂಗ್ ಉದ್ಘಾಟಿಸಬೇಕಿದ್ದ ಜಿಮ್ ಗೆ ಬೆಂಕಿ, ಸೆಕ್ಷನ್ 144 ಜಾರಿ, ಇಂಟರ್ನೆಟ್ ಸೇವೆ ಸ್ಥಗಿತ

ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಹಿಂಸಾಚಾರಪೀಡಿತ ಚುರಾಚಂದಪುರ ಜಿಲ್ಲೆಗೆ ಶುಕ್ರವಾರ ಭೇಟಿ ನೀಡಲಿದ್ದು, ಸ್ಥಳದಲ್ಲಿ ಸೆಕ್ಷನ್ 144 ಜಾರಿ ಮಾಡಿರುವ ಅಧಿಕಾರಿಗಳು, ಮೊಬೈಲ್ ಇಂಟರ್ನೆಟ್ ಸೇವೆಗಳು ಹಾಗೂ ಜನರು ದೊಡ್ಡ ಸಂಖ್ಯೆಯಲ್ಲಿ ಗುಂಪುಗೂಡುವುದನ್ನು ನಿಷೇಧಿಸಿದ್ದಾರೆ.
ಜಿಮ್'ಗೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳು.
ಜಿಮ್'ಗೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳು.

ಇಂಫಾಲ: ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಹಿಂಸಾಚಾರಪೀಡಿತ ಚುರಾಚಂದಪುರ ಜಿಲ್ಲೆಗೆ ಶುಕ್ರವಾರ ಭೇಟಿ ನೀಡಲಿದ್ದು, ಸ್ಥಳದಲ್ಲಿ ಸೆಕ್ಷನ್ 144 ಜಾರಿ ಮಾಡಿರುವ ಅಧಿಕಾರಿಗಳು, ಮೊಬೈಲ್ ಇಂಟರ್ನೆಟ್ ಸೇವೆಗಳು ಹಾಗೂ ಜನರು ದೊಡ್ಡ ಸಂಖ್ಯೆಯಲ್ಲಿ ಗುಂಪುಗೂಡುವುದನ್ನು ನಿಷೇಧಿಸಿದ್ದಾರೆ.

ಮೀಸಲು ಹಾಗೂ ಸಂರಕ್ಷಿತ ಅರಣ್ಯಗಳು ಮತ್ತು ನೀರಾವರಿ ಪ್ರದೇಶಗಳಂತಹ ಭಾಗಗಳಲ್ಲಿ ಬಿಜೆಪಿ ಸರ್ಕಾರ ಸಮೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದಂತೆ ನಿಗದಿಯಾಗಿದ್ದ ಬೆರೆನ್ ಸಿಂಗ್ ಅವರ ಕಾರ್ಯಕ್ರಮದ ಸ್ಥಳದಲ್ಲಿ ಗುರುವಾರ ದಾಂದಲೆ ನಡೆಸಿದ್ದ ಗುಂಪು, ಬೆಂಕಿ ಹಚ್ಚಿದೆ.

ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿ ಕದಡಲು ಹಾಗೂ ಮಾನವ ಜೀವ ಮತ್ತು ಆಸ್ತಿ ಪಾಸ್ತಿಗಳಿಗೆ ಅಪಾಯ ಉಂಟುಮಾಡುವ ಸಾಧ್ಯತೆ ಇರುವುದರಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಸರ್ಕಾರದ ಆದೇಶ ತಿಳಿಸಿದೆ.

ಇಂಡಿಜೀನಿಯಸ್ ಟ್ರೈಬಲ್ ಲೀಡರ್ಸ್ ಫೋರಂ ಎಂಬ ಸಂಘಟನೆಯು ಈ ಪ್ರತಿಭಟನೆಯ ನೇತೃತ್ವ ವಹಿಸಿತ್ತು ಎಂದು ಹೇಳಲಾಗುತ್ತಿದೆ.

ಬಿರೆನ್ ಸಿಂಗ್ ಅವರ ಸರ್ಕಾರವು ತಾವು ತೀವ್ರ ಗೌರವಿಸುವ ಚರ್ಚ್‌ಗಳ ಅಪಾರವಾದ ಪಾವಿತ್ರ್ಯವನ್ನು ಗಣನೆಗೆ ತೆಗೆದುಕೊಳ್ಳದೆ ಅವುಗಳನ್ನು ತೆರವುಗೊಳಿಸಿದೆ ಎಂದು ಬುಡಕಟ್ಟು ನಾಯಕರ ವೇದಿಕೆ ಆರೋಪಿಸಿದೆ.

ಸಿಎಂ ಸಿಂಗ್ ಅವರು ಚುರಾಚಂದಪುರ ಜಿಲ್ಲೆಯಲ್ಲಿ ಶುಕ್ರವಾರ ಜಿಮ್- ಕ್ರೀಡಾ ಸೌಲಭ್ಯವನ್ನು ಉದ್ಘಾಟಿಸುವ ಕಾರ್ಯಕ್ರಮ ನಿಗದಿಯಾಗಿದ್ದು, ಈ ನಡುವಲ್ಲೇ ಕಾರ್ಯಕ್ರಮದ ವೇದಿಕೆಯನ್ನು ಧ್ವಂಸಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಈ ಸ್ಥಳದಲ್ಲಿ ಹಾಕಿದ್ದ ಕುರ್ಚಿಗಳು ಮತ್ತು ಇತರೆ ವಸ್ತುಗಳನ್ನು ಒಡೆದು ಧ್ವಂಸಗೊಳಿಸಿದ ಗುಂಪು, ಹೊಸದಾಗಿ ನಿರ್ಮಾಣಗೊಂಡ ಜಿಮ್ ಒಳಗಿದ್ದ ಕ್ರೀಡಾ ಪರಿಕರಗಳಿಗೆ ಬೆಂಕಿ ಹಚ್ಚಿದೆ. ಕೂಡಲೇ ಕ್ರಮ ಕೈಗೊಂಡ ಸ್ಥಳೀಯ ಪೊಲೀಸರು ಉದ್ರಿಕ್ತ ಗುಂಪುಗಳನ್ನು ಸ್ಥಳದಿಂದ ಚೆದುರಿಸಿದರು. ಆದರೆ ನೂರಾರು ಕುರ್ಚಿಗಳು ಹೊತ್ತಿ ಉರಿದ ಪರಿಣಾಮ ಸ್ಥಳ ಬಹುತೇಕ ಸುಟ್ಟುಕರಕಲಾಗಿವೆ. ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಗಮನಿಸಿದ ಚುರಾಚಂದಪುರ ಜಿಲ್ಲಾಡಳಿತ ಜಿಲ್ಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಿತು. ಆದರೆ, ಸನ್ನಿವೇಶ ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ.

ಮೀಸಲು ಮತ್ತು ಸಂರಕ್ಷಿತ ಅರಣ್ಯ ಭಾಗಗಳು ಹಾಗೂ ನೀರಾವರಿ ಪ್ರದೇಶಗಳನ್ನು ಬಿಜೆಪಿ ನೇತೃತ್ವದ ಸರ್ಕಾರ ಸಮೀಕ್ಷೆ ನಡೆಸಲು ಮುಂದಾಗಿದೆ. ಇದಕ್ಕೆ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ, ಬೆಳಿಗ್ಗೆ 8 ಗಂಟೆಯಿಂದ 8 ಗಂಟೆಗಳ ಕಾಲ ಜಿಲ್ಲೆಯಲ್ಲಿ ಮುಷ್ಕರಕ್ಕೆ ಕರೆ ನೀಡಿದೆ.

ರಾಜ್ಯದಲ್ಲಿನ ಬುಡಕಟ್ಟು ಸಮುದಾಯಗಳ ಕಡೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಕುಕಿ ವಿದ್ಯಾರ್ಥಿ ಸಂಘಟನೆ ಕೂಡ ವೇದಿಕೆಯ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com