
ನವದೆಹಲಿ: ಚಂದ್ರಯಾನ-3ರ ಯಶಸ್ಸನ್ನು ಶ್ಲಾಘಿಸಿ ಕಾಂಗ್ರೆಸ್ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರಿಗೆ ಪತ್ರ ಬರೆದಿದ್ದಾರೆ. ಇಸ್ರೋದ ಪ್ರಭಾವಶಾಲಿ ಸಾಮರ್ಥ್ಯಗಳನ್ನು ಹಲವು ವರ್ಷಗಳಿಂದ ಅಭಿವೃದ್ಧಿಪಡಿಸಲಾಗಿದೆ ಮತ್ತು 1960ರ ದಶಕದಿಂದಲೂ ಅದು ಸ್ವಾವಲಂಬನೆ ಸಾಧಿಸಿರುವುದು ಅದರ ಗಮನಾರ್ಹ ಸಾಧನೆಗಳಿಗೆ ಕೊಡುಗೆ ನೀಡಿದೆ ಎಂದು ಹೇಳಿದ್ದಾರೆ.
ಬುಧವಾರ ಸಂಜೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಭವ್ಯ ಸಾಧನೆಯಿಂದ ತಾನೆಷ್ಟು ರೋಮಾಂಚನಗೊಂಡಿದ್ದೇನೆ ಎಂಬುದನ್ನು ತಿಳಿಸಲು ಸೋಮನಾಥ್ ಅವರಿಗೆ ಪತ್ರ ಬರೆದಿರುವುದಾಗಿ ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ತಿಳಿಸಿದ್ದಾರೆ.
'ಇದು ಎಲ್ಲಾ ಭಾರತೀಯರಿಗೆ, ವಿಶೇಷವಾಗಿ ಯುವ ಪೀಳಿಗೆಗೆ ಅತ್ಯಂತ ಹೆಮ್ಮೆ ಮತ್ತು ಉತ್ಸಾಹದ ವಿಷಯವಾಗಿದೆ' ಸೋನಿಯಾ ಗಾಂಧಿ ಹೇಳಿದ್ದಾರೆ.
ಇಸ್ರೋದ ಪ್ರಭಾವಶಾಲಿ ಸಾಮರ್ಥ್ಯಗಳನ್ನು ಹಲವು ವರ್ಷಗಳಿಂದ ಅಭಿವೃದ್ಧಿಪಡಿಸಲಾಗಿದೆ ಮತ್ತು 1960ರ ದಶಕದಿಂದಲೂ ಅದರ ಸ್ವಾವಲಂಬನೆಯ ಅಡಿಪಾಯವು ಅದರ ಗಮನಾರ್ಹ ಸಾಧನೆಗಳಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಂಸ್ಥೆಯಲ್ಲಿ ಪ್ರಮುಖ ವ್ಯಕ್ತಿಗಳು ಇದ್ದಾರೆ ಮತ್ತು ಸಾಮೂಹಿಕ ಪ್ರಯತ್ನದ ಮನೋಭಾವವು ಯಾವಾಗಲೂ ಸಂಸ್ಥೆಯನ್ನು ಮುನ್ನಡೆಸುತ್ತಿದೆ. ತನ್ನದೇ ಆದ ಸಂಪನ್ಮೂಲಗಳು ಮತ್ತು ತಂತ್ರಜ್ಞಾನಗಳನ್ನು ಅವಲಂಬಿಸಿರುವವ ಇಸ್ರೋದ ಸಾಮರ್ಥ್ಯವು ಬಾಹ್ಯಾಕಾಶ ಕ್ಷೇತ್ರದಲ್ಲಿನ ಅದರ ಯಶಸ್ವಿ ಪ್ರಯತ್ನಗಳಿಗೆ ಕೊಡುಗೆ ನೀಡಿದೆ ಎಂದು ಸೋನಿಯಾ ಪತ್ರದಲ್ಲಿ ತಿಳಿಸಿದ್ದಾರೆ.
'ಇಡೀ ಇಸ್ರೋದ ಒಗ್ಗಟ್ಟಿಗೆ ನಾನು ಶುಭ ಹಾರೈಸುತ್ತೇನೆ ಮತ್ತು ಈ ಮಹತ್ವದ ಸಂದರ್ಭದಲ್ಲಿ ಅದರ ಪ್ರತಿಯೊಬ್ಬ ಸದಸ್ಯರಿಗೂ ನನ್ನ ಆತ್ಮೀಯ ಅಭಿನಂದನೆಯನ್ನು ತಿಳಿಸುತ್ತೇನೆ' ಎಂದು ಅವರು ಹೇಳಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಸ್ಥೆ ಅಥವಾ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ 3 ಯಶಸ್ವಿಯಾಗಿದ್ದು, ಭಾರತ ಹೊಸ ದಾಖಲೆ ಬರೆದಿದೆ. ಆಗಸ್ಟ್ 23ರ ಬುಧವಾರ ಸಂಜೆ 6.04 ನಿಮಿಷಕ್ಕೆ ಸರಿಯಾಗಿ ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡ್ ರೋವರ್ ಇಳಿದಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿದ ಮೊದಲ ದೇಶವೆಂಬ ಹೆಗ್ಗಳಿಕೆ ಭಾರತದ ಪಾಲಾಗಿದೆ.
ಇಸ್ರೋ ಚಂದ್ರಯಾನ-3 ನೌಕೆಯನ್ನು ಜುಲೈ 14ರಂದು ಉಡಾವಣೆ ಮಾಡಿತ್ತು.
ಭಾರತವು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡ ನಾಲ್ಕನೇ ದೇಶವಾಗಿದೆ. ಈ ಮೊದಲು ಅಮೆರಿಕ, ಚೀನಾ ಮತ್ತು ರಷ್ಯಾ ದೇಶಗಳು ಚಂದ್ರಯಾನದಲ್ಲಿ ಯಶಸ್ಸನ್ನು ಕಂಡಿದ್ದವು. ಅವು ಚಂದ್ರನ ಉತ್ತರ ಧ್ರುವದ ಮೇಲೆ ಇಳಿದಿದ್ದವು.
Advertisement