ಕರ್ನಾಟಕದ ಬಳಿಕ ತೆಲಂಗಾಣ: ಕಾಂಗ್ರೆಸ್ ಗೆ ಮತ್ತೊಂದು ಗೆಲುವು ತಂದ ಚುನಾವಣಾ ಚಾಣಕ್ಯ, ಸುನಿಲ್ ಬಿಟ್ಟು ಕೈ ಸುಟ್ಟುಕೊಂಡರೇ ಕೆಸಿಆರ್!

ಕಳೆದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡಿ ಅಭೂತಪೂರ್ವ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಚುನಾವಣಾ ತಂತ್ರಗಾರ ಸುನಿಲ್ ಕನುಗೋಲು ಇದೀಗ ತೆಲಂಗಾಣದಲ್ಲೂ ಮ್ಯಾಜಿಕ್ ಮಾಡಿದ್ದಾರೆ.
ಸುನಿಲ್ ಕುನಗೋಲು
ಸುನಿಲ್ ಕುನಗೋಲು

ಹೈದರಾಬಾದ್: ಕಳೆದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡಿ ಅಭೂತಪೂರ್ವ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಚುನಾವಣಾ ತಂತ್ರಗಾರ ಸುನಿಲ್ ಕನುಗೋಲು ಇದೀಗ ತೆಲಂಗಾಣದಲ್ಲೂ ಮ್ಯಾಜಿಕ್ ಮಾಡಿದ್ದಾರೆ.

ಹೌದು.. ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮ್ಯಾಜಿಕ್ ಮಾಡಿದ್ದು, ಆಡಳಿತಾ ರೂಢ ಪ್ರಬಲ ಬಿಆರ್ಎಸ್ ಪಕ್ಷವನ್ನೇ 2ನೇ ಸ್ಥಾನಕ್ಕೆ ಹಿಂದಿಕ್ಕಿ ಅಧಿಕಾರದ ಗದ್ದುಗೆಯತ್ತ ಸಾಗಿದೆ. ಒಟ್ಟು 119 ವಿಧಾಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 65 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಅಧಿಕಾರದ ಗದ್ದುಗೆಯತ್ತ ಸಾಗಿದೆ. ಆಡಳಿತಾರೂಢ ಬಿಆರ್ಎಸ್ 38 ಸ್ಥಾನಗಳಿಗೆ ಕುಸಿದಿದ್ದು, ಬಿಜೆಪಿ 9 ಮತ್ತು ಎಐಎಂಐಎಂ 5 ಸ್ಥಾನಗಳಿಸಿವೆ. ತೆಲಂಗಾಣದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು 60 ಮ್ಯಾಜಿಕ್ ನಂಬರ್ ಆಗಿದ್ದು, ಕಾಂಗ್ರೆಸ್ ಪಕ್ಷ ಅದನ್ನೂ ದಾಟಿ ಮುನ್ನುಗ್ಗುತ್ತಿದೆ. ಒಂದು ವೇಳೆ ಕಾಂಗ್ರೆಸ್ ಹೊರತು ಪಡಿಸಿ ಇತರೆ ಪಕ್ಷಗಳು ಜೊತೆಗೂಡಿ ಅಧಿಕಾರ ರಚನೆಗೆ ಹೊರಟರೂ ಅವರಿಗೆ ಕನಿಷ್ಠ ಬಹುಮತ ಸಿಗುವುದೂ ಕಷ್ಟಕರ.  

ಕಾಂಗ್ರೆಸ್ ಗೆ ಮತ್ತೊಂದು ಗೆಲುವು ತಂದ ಚುನಾವಣಾ ಚಾಣಕ್ಯ ಸುನಿಲ್ ಕನುಗೋಲು
ಕಳೆದ ಮೇನಲ್ಲಿ ನಡೆದ ಚುನಾವಣೆಯಲ್ಲಿ ಸುನೀಲ್​ ತಮ್ಮ ತವರು ರಾಜ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಡಬಲ್ ಡಿಜಿಟ್​​​ಗೆ ತಲುಪಿಸಿದ್ದರು. ಆ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಕರ್ನಾಟಕದ ಬಳಿಕ ತೆಲಂಗಾಣದಲ್ಲಿ ಚುನಾವಣಾ ತಂತ್ರಗಾರಿಕೆ ಮಾಡುವ ನೇತೃತ್ವ ವಹಿಸಿಕೊಂಡ ಸುನಿಲ್ ಅಲ್ಲಿಯೂ ಯಶಸ್ಸು ಸಾಧಿಸಿದ್ದಾರೆ. ಕಾಂಗ್ರೆಸ್ ಸೇರಿದ ನಂತರ ಸುನಿಲ್ ತೆಲಂಗಾಣ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಗಳೆರಡರಲ್ಲೂ ಕೆಲಸ ಮಾಡಲು ಪ್ರಾರಂಭಿಸಿದರು. ಸುನೀಲ್​​ ತಮ್ಮ ತಂತ್ರಗಳ ಮೂಲಕ ಮೊದಲು ಪಕ್ಷವನ್ನು ಒಂದು ಸುಸ್ಥಿತಿಗೆ ತಂದಿದ್ದರು. ತೆಲಂಗಾಣದಲ್ಲಿ ಆಡಳಿತರೂಢ ಕೆಸಿಆರ್ ಅವರನ್ನು ಕರ್ನಾಟಕದಂತೆಯೇ ಹಿಂದಿಕ್ಕುವ ಕಾರ್ಯತಂತ್ರ ಸಿದ್ಧಪಡಿಸಲು ಪ್ರಾರಂಭಿಸಿದರು.

ಇದೀಗ ಅವರ ಎಲ್ಲ ಕಾರ್ಯತಂತ್ರಗಳು ಫಲ ನೀಡಿದ್ದು ಕರ್ನಾಟಕದ ಬಳಿಕ ತೆಲಂಗಾಣದಲ್ಲೂ ಕಾಂಗ್ರೆಸ್ ಜಯಭೇರಿ ಭಾರಿಸಿದೆ.

ಸುನಿಲ್ ಬಿಟ್ಟು ಕೈ ಸುಟ್ಟುಕೊಂಡರೇ ಕೆಸಿಆರ್!
ಕಳೆದ ಎರಡು ವರ್ಷಗಳ ಹಿಂದೆ ತೆಲಂಗಾಣದ ಕೆಸಿಆರ್, ಸುನೀಲ್ ಕನುಗೋಲು (Sunil Kunugolu) ಅವರನ್ನು ಹೈದರಾಬಾದ್ ಬಳಿಯ ತಮ್ಮ ಫಾರ್ಮ್ ಹೌಸ್‌ಗೆ ಆಹ್ವಾನಿಸಿ ಚುನಾವಣೆಯ ಉಸ್ತುವಾರಿ ನೇಮಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಚರ್ಚಿಸಿದ್ದರು. ಆ ವೇಳೆಗೆ ಸುನೀಲ್ ತಮಿಳುನಾಡು ಚುನಾವಣೆಯನ್ನು (Tamilnadu Election) ಮುಗಿಸಿ ಹೊಸ ಹುದ್ದೆ ನಿರ್ವಹಿಸಲು ಸಿದ್ಧರಾಗಿದ್ದರು. ನಾಲ್ಕು ದಿನಗಳ ಕಾಲ ಮಾತುಕತೆ ನಡೆದರೂ ಅಂತಿಮವಾಗಿ ಸುನೀಲ್​, ಕೆಸಿಆರ್​ ಪರ ಕಾರ್ಯನಿರ್ವಹಿಸಲು ನೋ ಎಂದಿದ್ದರು. ಆದರೆ ಇದಾದ ಕೆಲ ದಿನಗಳ ನಂತರ ಎಲ್ಲರಿಗೂ ಬಿಗ್​ ಶಾಕ್​ ಎದುರಾಗಿತ್ತು. ಸುನೀಲ್ಎಐಸಿಸಿ ಚುನಾವಣಾ ತಂತ್ರಗಾರಿಕೆ (Election Strategy) ಸಮಿತಿಯ ಅಧ್ಯಕ್ಷರಾಗಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು ಮತ್ತು ಇದೇ ಕೆಸಿಆರ್​ ವಿರುದ್ಧ ಕೆಲಸ ಮಾಡಲು ನೇಮಕಗೊಂಡಿದ್ದರು.

ಕೆಸಿಆರ್​ ಅಂದು ಸುನೀಲ್​​ ಅವರನ್ನು ಬಿಆರ್​​​​ಸ್​​ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಗಟ್ಟಿ ನಿರ್ಧಾರ ತೆಗೆದುಕೊಳ್ಳದಕ್ಕೆ ಇಂದು ವಿಷಾದ ಪಡುತ್ತಿದ್ದಾರೆ. ಇದು ಕಳೆದ ಕೆಲ ವರ್ಷಗಳಲ್ಲಿ ಕೆಸಿಆರ್ ತೆಗೆದುಕೊಂಡ ಬಹುದೊಡ್ಡ ತಪ್ಪು ನಿರ್ಧಾರ ಎಂದು ಹೇಳಬಹುದು. ಕಾಂಗ್ರೆಸ್ ಸೇರಿದ ನಂತರ ಸುನೀಲ್ ತೆಲಂಗಾಣ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಗಳೆರಡರಲ್ಲೂ ಕೆಲಸ ಮಾಡಲು ಪ್ರಾರಂಭಿಸಿದರು. ಕಳೆದ ಮೇನಲ್ಲಿ ನಡೆದ ಚುನಾವಣೆಯಲ್ಲಿ ಸುನೀಲ್​ ತಮ್ಮ ತವರು ರಾಜ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಡಬಲ್ ಡಿಜಿಟ್​​​ಗೆ ತಲುಪಿಸಿದ್ದರು. ಇದೀಗ ಮತ್ತೆ ತೆಲಂಗಾಣದಲ್ಲೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com