ಹೈದರಾಬಾದ್: ತೆಲಂಗಾಣದ ಹನಮಕೊಂಡ ಜಿಲ್ಲೆಯ ಎಂಜಿನಿಯರಿಂಗ್ ಕಾಲೇಜಿನ ಬಾಲಕಿಯರ ಹಾಸ್ಟೆಲ್ನಿಂದ ಮೊಬೈಲ್ ಫೋನ್ ಮತ್ತು ಲ್ಯಾಪ್ಟಾಪ್ಗಳನ್ನು ಕದ್ದು ಕಳ್ಳನೊಬ್ಬ ಬಾವಿಗೆ ಬಿದ್ದಿದ್ದಾನೆ.
ಜಿಲ್ಲೆಯ ಹಾಸನಪರ್ತಿ ಮಂಡಲದ ಅನಂತಸಾಗರದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ.
ಕಳ್ಳ ಬಾವಿಯಲ್ಲಿ ರಾತ್ರಿ ಕಳೆಯಬೇಕಾಯಿತು ಮತ್ತು ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ ನಂತರ ಮರುದಿನ ಪೊಲೀಸರು ಆತನನ್ನು ರಕ್ಷಿಸಿದ್ದಾರೆ.
ಎಸ್ಆರ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲ್ನಲ್ಲಿ ಕಳ್ಳತನ ಮಾಡಿದ ನಂತರ ಕಳ್ಳ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿಯೆಲ್ಲಾ ಬಾವಿಯಲ್ಲೇ ಇದ್ದ ಆತ, ಮರುದಿನ ಬೆಳಗ್ಗೆ ಸಹಾಯಕ್ಕಾಗಿ ಕೂಗಿದಾಗ ಇದನ್ನು ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಹಗ್ಗದ ಸಹಾಯದಿಂದ ಆತನನ್ನು ಬಾವಿಯಿಂದ ಮೇಲೆತ್ತಲಾಗಿದೆ.
ಹಾಸ್ಟೆಲ್ನಿಂದ ನಾಲ್ಕು ಸೆಲ್ಫೋನ್ಗಳು ಮತ್ತು ಲ್ಯಾಪ್ಟಾಪ್ಗಳನ್ನು ಕದ್ದು ಪರಾರಿಯಾಗುವಾಗ ಬಾವಿಗೆ ಬಿದ್ದಿರುವುದಾಗಿ ವ್ಯಕ್ತಿ ಒಪ್ಪಿಕೊಂಡಿದ್ದಾನೆ.
ಪೊಲೀಸರ ಹೆಚ್ಚಿನ ವಿಚಾರಣೆಯಿಂದ ಮೂರು ದಿನಗಳಲ್ಲಿ 14 ಸೆಲ್ಫೋನ್ಗಳು ಮತ್ತು ಆರು ಲ್ಯಾಪ್ಟಾಪ್ಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಕಳ್ಳತನ ನಡೆದರೂ ಆಡಳಿತ ಮಂಡಳಿ ಅಗತ್ಯ ಕ್ರಮ ಕೈಗೊಂಡು ಸೂಕ್ತ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
Advertisement