ಕೇರಳ: 5 ವರ್ಷದಲ್ಲಿ 35,724 ಬೀದಿನಾಯಿ ದಾಳಿ ಪ್ರಕರಣ; ದಯಾಮರಣಕ್ಕೆ ಅನುಮತಿ ಕೋರಿ 'ಸುಪ್ರೀಂ' ಮೆಟ್ಟಿಲೇರಿದ ಸರ್ಕಾರ

ಕೇರಳದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಕಣ್ಣೂರಿನಲ್ಲಿ ಬೀದಿನಾಯಿಗಳ ದಾಳಿಯಿಂದ ಮಗು ಸಾವನ್ನಪ್ಪಿದ ಬೆನ್ನಲ್ಲೇ ಬೀದಿ ನಾಯಿಗಳಿಗೆ ದಯಾಮರಣ ನೀಡಲು ಅನುಮತಿ ನೀಡುವಂತೆ ಸ್ಥಳೀಯ ಪಂಚಾಯಿತಿ ಆಡಳಿತಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿವೆ.
ಕೇರಳದಲ್ಲಿ ಬೀದಿ ನಾಯಿ ಹಾವಳಿ
ಕೇರಳದಲ್ಲಿ ಬೀದಿ ನಾಯಿ ಹಾವಳಿ

ಕಣ್ಣೂರು: ಕೇರಳದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಕಣ್ಣೂರಿನಲ್ಲಿ ಬೀದಿನಾಯಿಗಳ ದಾಳಿಯಿಂದ ಮಗು ಸಾವನ್ನಪ್ಪಿದ ಬೆನ್ನಲ್ಲೇ ಬೀದಿ ನಾಯಿಗಳಿಗೆ ದಯಾಮರಣ ನೀಡಲು ಅನುಮತಿ ನೀಡುವಂತೆ ಸ್ಥಳೀಯ ಪಂಚಾಯಿತಿ ಆಡಳಿತಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿವೆ.

ಹೌದು.. ಕಣ್ಣೂರು ಜಿಲ್ಲೆಯಲ್ಲಿ ಬೀದಿನಾಯಿಗಳಿಂದ ಹಿಂಸಾತ್ಮಕ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾನವೀಯ ರೀತಿಯಲ್ಲಿ ಶಂಕಿತ ಕ್ರೋಧ ನಾಯಿ/ಅತ್ಯಂತ ಅಪಾಯಕಾರಿ ನಾಯಿಗಳಿಗೆ ದಯಾಮರಣ ನೀಡುವಂತೆ ಕೋರಿ ಕಣ್ಣೂರಿನ ಜಿಲ್ಲಾ ಪಂಚಾಯತ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಯಲ್ಲಿ ಅರ್ಜಿದಾರರು ಹಲವು ಅಂಶಗಳನ್ನು ಉಲ್ಲೇಖಿಸಿದ್ದು, ಪ್ರಮುಖವಾಗಿ ಜೂನ್ 11, 2023 ರಂದು ಕಣ್ಣೂರಿನಲ್ಲಿ 11 ವರ್ಷದ ಮಗುವನ್ನು ಬೀದಿನಾಯಿಗಳ ಗುಂಪೊಂದು ದಾಳಿ ಮಾಡಿ ಕಚ್ಚಿ ಎಳೆದಾಡಿ ಕೊಂದು ಹಾಕಿದ್ದವು. ಕಳೆದ ವರ್ಷ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ 12 ವರ್ಷ ವಯಸ್ಸಿನ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ಗಂಭೀರವಾಗಿ ಹಾನಿ ಮಾಡಿದ್ದವು. ಅಂತೆಯೇ ಕೇವಲ ಕಳೆದ 5 ವರ್ಷಗಳ ಅವಧಿಯಲ್ಲಿ ಕಣ್ಣೂರಿನಲ್ಲಿ 35,724 ಬೀದಿನಾಯಿ ದಾಳಿಗಳು ವರದಿಯಾಗಿದೆ ಎಂದು ಹೇಳಿದೆ.

ಈ ಪೈಕಿ 2019 ರಲ್ಲಿ 5794 ಬೀದಿ ನಾಯಿ ದಾಳಿ ಪ್ರಕರಣಗಳು, 2020 ರಲ್ಲಿ 3951 ಪ್ರಕರಣಗಳು, 2021 ರಲ್ಲಿ 7927 ಪ್ರಕರಣಗಳು, 2022 ರಲ್ಲಿ ಅತೀ ಹೆಚ್ಚು ಅಂದರೆ 11776 ಪ್ರಕರಣಗಳು ದಾಖಲಾಗಿವೆ. 2023 ರ ಜೂನ್ 19 ರವರೆಗೆ 6276 ಪ್ರಕರಣಗಳು ವರದಿಯಾಗಿವೆ. ಇದು ಕಣ್ಣೂರಿನಲ್ಲಿಯೇ ವರದಿಯಾಗಿದೆ. ಇಲ್ಲಿ ಅರ್ಜಿದಾರರ ಮಿತಿಯಲ್ಲಿ ಸುಮಾರು 28000 ಬೀದಿನಾಯಿಗಳಿವೆ ಎಂದು ಅರ್ಜಿದಾರರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಸ್ಥಳೀಯ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದರೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ದಾಳಿ, ಕಚ್ಚುವಿಕೆ, ನಾಯಿಗಳ ಡಿಕ್ಕಿಯಿಂದ ರಸ್ತೆ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದಲ್ಲದೆ, ರಾಜ್ಯದಲ್ಲಿ ಇತ್ತೀಚೆಗೆ ಹಿಂಸಾತ್ಮಕ ಬೀದಿನಾಯಿಗಳಿಂದ 65 ಬಾತುಕೋಳಿಗಳು ಮತ್ತು ಹೆಚ್ಚಿನ ಸಂಖ್ಯೆಯ ಸಾಕುಪ್ರಾಣಿಗಳು ಸಾವನ್ನಪ್ಪಿವೆ ಎಂದು ಪಂಚಾಯಿತಿ ಅರ್ಜಿಯಲ್ಲಿ ತಿಳಿಸಿದೆ.

ಅದರಂತೆ, "ಶಂಕಿತ ಕ್ರೋಧೋನ್ಮತ್ತ ನಾಯಿಗಳು/ಅತ್ಯಂತ ಅಪಾಯಕಾರಿ ನಾಯಿಗಳನ್ನು ಮಾನವೀಯ ರೀತಿಯಲ್ಲಿ" ದಯಾಮರಣಕ್ಕೆ ನಿರ್ದೇಶಿಸುವಂತೆ ಪಂಚಾಯತ್ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದೆ. ಅರ್ಜಿಯನ್ನು ಅಡ್ವೊಕೇಟ್ ಆನ್ ರೆಕಾರ್ಡ್ ಬಿಜು ಪಿ ರಾಮನ್ ಮೂಲಕ ರವಾನಿಸಲಾಗಿದೆ. 2015 ರ ಕೇರಳ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಸಿವಿಲ್ ಮೇಲ್ಮನವಿಯಲ್ಲಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಲಾಗಿದೆ. ಕಳೆದ ವರ್ಷವೂ ಕೂಡ, ಕೇರಳ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಇದೇ ರೀತಿಯ ಮನವಿಯನ್ನು ಸಲ್ಲಿಸಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com