ಮುಂಬೈ: ಸರ್ಕಾರಿ ಅಧಿಕಾರಿಗಳು ಲಂಚ ಪಡೆದ ಪ್ರಕರಣಗಳು ಸಾಮಾನ್ಯ.. ಆದರೆ ಪ್ರಖ್ಯಾತ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TCS) ನಲ್ಲೂ ಲಂಚಾವತಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ಹೌದು.. ಭಾರತದ ಅತೀದೊಡ್ಡ ಟೆಕ್ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ನಲ್ಲಿ ಬಹುಕೋಟಿ ಭ್ರಷ್ಟಾಚಾರ ಹಗರಣ ಕೇಳಿಬಂದಿದ್ದು, ಟಿಸಿಎಸ್ನಲ್ಲಿ ಕೆಲಸಕ್ಕಾಗಿ ಅಲ್ಲಿನ ಹಿರಿಯ ಅಧಿಕಾರಿಗಳು ಲಂಚ ಪಡೆದ ಪ್ರಕರಣದ ಮೇರೆಗೆ 4 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬರೋಬ್ಬರಿ 100 ಕೋಟಿ ಲಂಚ ಪಡೆದು ಉದ್ಯೋಗ ನೀಡಿದ ಹಗರಣ ಇದೀಗ ಬೆಳಕಿಗೆ ಬಂದಿದ್ದು, ಕಳೆದ ಮೂರು ವರ್ಷಗಳಿಂದ ಸುಮಾರು 100 ಕೋಟಿಯಷ್ಟು ಲಂಚ ಪಡೆದು ಸಾವಿರಾರು ಮಂದಿಗೆ ಕೆಲಸ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಪ್ರಕರಣ ಸಂಬಂಧ ನಾಲ್ವರು ಟಿಸಿಎಸ್ ಹಿರಿಯ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ.
ಮೂಲಗಳ ಪ್ರಕಾರ ನೇಮಕಾತಿಗೆ ದುಡ್ಡು ಪಡೆದಿದ್ದಲ್ಲದೆ ಅಸಮರ್ಥರಿಗೆ ಉದ್ಯೋಗ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಕಂಪನಿಯ ನೇಮಕಾತಿ ವಿಭಾಗದ ಚೀಫ್ ಎಕ್ಸೂಕೂಟೀವ್ ಆಫೀಸರ್, ಚೀಫ್ ಆಫರೇಟಿಂಗ್ ಆಫೀಸರ್, ರಿಸೋರ್ಸ್ ಮ್ಯಾನೇಜ್ಮೆಂಟ್ ಗ್ರೂಪ್ ಅಧಿಕಾರಿ ಸೇರಿ ನಾಲ್ವರು ಅಧಿಕಾರಿಗಳನ್ನು ಟಿಸಿಎಸ್ನಿಂದ ವಜಾ ಮಾಡಲಾಗಿದೆ.
ದೈತ್ಯ ಐಟಿ ಕಂಪನಿ ಟಿಸಿಎಸ್ ಒಟ್ಟು 6 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ಭಾರತದಲ್ಲಿ ಮಾತ್ರ 614,795 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಕಂಪನಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಕಂಪನಿ ಮುಂದಾಗಿದೆ. ಅಲ್ಲದೆ ಹಣ ನೀಡಿ ಕೆಲಸ ಪಡೆದ ನೌಕರರ ಮೇಲೂ ಸಂಸ್ಥೆ ಕ್ರಮಕ್ಕೆ ಮುಂದಾಗಿದ್ದು ಈ ಸಂಬಂಧ ಆಂತರಿಕ ತನಿಖೆ ನಡೆಸಲು ಮುಂದಾಗಿದೆ ಎಂದು ಹೇಳಲಾಗಿದೆ.
ಸದ್ಯ ಹಣ ನೀಡಿ ಕೆಲಸ ಗಿಟ್ಟಿಸಿಕೊಂಡವರಿಗೆ ಆತಂಕ ಶುರುವಾಗಿದ್ದು, ಯಾವಾಗ ಬೇಕಾದರೂ ಕಿತ್ತಾಕಬಹುದು.
Advertisement