ಕಾನೂನು ಸುವ್ಯವಸ್ಥೆಯನ್ನು ಹಸ್ತಾಂತರಿಸಿ, ದೆಹಲಿಯನ್ನು ಸುರಕ್ಷಿತವಾಗಿಸುವುದು ಹೇಗೆಂದು ತೋರಿಸುತ್ತೇವೆ: ಕೇಜ್ರಿವಾಲ್
ನವದೆಹಲಿ: ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಕುರಿತು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಪೊಲೀಸರೊಂದಿಗೆ ಸಭೆ ಕರೆದಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಭೆ ಕರೆಯುವುದು ಔಪಚಾರಿಕವಾಗಿದೆ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸಲು ಕೇಂದ್ರವು ಯಾವುದೇ ಯೋಜನೆಯನ್ನು ಹೊಂದಿದೆಯೇ ಎಂದು ಪ್ರಶ್ನಿಸಿದ್ದಾರೆ.
ಪ್ರಗತಿ ಮೈದಾನದ ಸುರಂಗ ದರೋಡೆ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ಸಿಎಂ ಕೇಜ್ರಿವಾಲ್, ದೆಹಲಿಯಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿಪಡಿಸುವ ಯಾವುದೇ ಯೋಜನೆ ಕೇಂದ್ರಕ್ಕೆ ಇಲ್ಲ ಎಂದು ತೋರುತ್ತಿದೆ. ಸಭೆ ಕರೆಯುವುದು ಔಪಚಾರಿಕವಾಗಿದೆ. ಜಿ-20 ಸಭೆ ನಡೆಯಲಿರುವ ಪ್ರಗತಿ ಮೈದಾನದಲ್ಲಿ ವಾಹನ ನಿಲ್ಲಿಸಿ ಹಣ ದೋಚಿದ್ದಾರೆ. ದೆಹಲಿಯಲ್ಲಿ ಜಂಗಲ್ ರಾಜ್ ಇದೆ, ಇಲ್ಲಿ ಯಾರೂ ಸುರಕ್ಷಿತವಾಗಿಲ್ಲ ಎಂದಿದ್ದಾರೆ.
'ಎಲ್ಲೋ ಮಾರುಕಟ್ಟೆಯಲ್ಲಿ ಬೀಗ ಮುರಿದು ದರೋಡೆ ನಡೆದಿದೆ ಎಂದು ಬೆಳಿಗ್ಗೆ ಓದಿದ್ದೆ. ಇದಕ್ಕೆ ಕಾರಣ ಕೇಂದ್ರ ಮತ್ತು ಎಲ್ಜಿ ದೆಹಲಿಯ ಉತ್ತಮ ಕೆಲಸವನ್ನು ನಿಲ್ಲಿಸಲು ಎಲ್ಲಾ ಶಕ್ತಿಯನ್ನು ಬಳಸುತ್ತಿವೆ. ಅವರು ಮೊಹಲ್ಲಾ ಕ್ಲಿನಿಕ್ಗಳನ್ನು ಹೇಗೆ ನಿಲ್ಲಿಸಬೇಕು ಎಂಬುದರಲ್ಲಿ ತೊಡಗಿಕೊಂಡಿದ್ದಾರೆ. ನಮ್ಮ ಕೆಲಸವನ್ನು ನಾವು ಮಾಡಲು ಬಿಡಿ ಮತ್ತು ನೀವು ನಿಮ್ಮ ಕೆಲಸವನ್ನು ಮಾಡಿ ಎಂದು ನಾನು ವಿನಂತಿಸುತ್ತೇನೆ. ನಿಮಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ, ಅದನ್ನು ನಮಗೆ ನೀಡಿ. ದೆಹಲಿಯನ್ನು ಸುರಕ್ಷಿತ ನಗರವನ್ನಾಗಿ ಮಾಡುವುದು ಹೇಗೆಂದು ನಾವು ತೋರಿಸುತ್ತೇವೆ' ಎಂದು ಕೇಜ್ರಿವಾಲ್ ತಿಳಿಸಿದರು.
ಶನಿವಾರ, ಸಂತ್ರಸ್ತರು ಹಣ ತಲುಪಿಸಲು ಕ್ಯಾಬ್ನಲ್ಲಿ ಗುರುಗ್ರಾಮದ ಕಡೆಗೆ ಹೋಗುತ್ತಿದ್ದಾಗ ಶನಿವಾರದಂದು ಡೆಲಿವರಿ ಏಜೆಂಟ್ ಮತ್ತು ಅವರ ಸಹಚರರನ್ನು ಸುತ್ತುವರಿದ ನಾಲ್ವರು ಅಪರಿಚಿತ ವ್ಯಕ್ತಿಗಳು ಪ್ರಗತಿ ಮೈದಾನದ ಸುರಂಗದೊಳಗೆ ಬಂದೂಕು ತೋರಿಸಿ 2 ಲಕ್ಷ ರೂ. ದೋಚಿದ್ದರು. ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ.
ದೆಹಲಿಯ ಕಲ್ಕಾಜಿಯಲ್ಲಿ 28 ವರ್ಷದ ಮಹಿಳೆಯೊಬ್ಬರ ಮುಖದ ಮೇಲೆ ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಕಳೆದ ಶುಕ್ರವಾರ ದೆಹಲಿಯ ಬ್ರಿಜ್ಪುರಿ ಪ್ರದೇಶದಲ್ಲಿ 19 ವರ್ಷದ ಯುವಕನೊಬ್ಬನಿಗೆ ಚೂರಿಯಿಂದ ಇರಿದಿದ್ದು, ಆತನ ಸೋದರ ಸಂಬಂಧಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಸೌತ್ ಕ್ಯಾಂಪಸ್ನಲ್ಲಿ ನಡೆದ ಹೋರಾಟದ ವೇಳೆ ವಿದ್ಯಾರ್ಥಿಯೊಬ್ಬನನ್ನು ಇರಿದು ಹತ್ಯೆ ಮಾಡಲಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ