ಮಾತುಕತೆ, ರಾಜತಾಂತ್ರಿಕತೆಯಿಂದ ಮಾತ್ರ ಉಕ್ರೇನ್ ಬಿಕ್ಕಟ್ಟು ಪರಿಹರಿಸಲು ಸಾಧ್ಯ: ನರೇಂದ್ರ ಮೋದಿ

ಭಾರತಕ್ಕೆ ಭೇಟಿ ನೀಡಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯ ನಂತರ ಜಂಟಿ ಹೇಳಿಕೆಯಲ್ಲಿ ಮೋದಿ, 'ಉಕ್ರೇನ್ ವಿವಾದವನ್ನು ಮಾತುಕತೆ ಮತ್ತು ರಾಜತಾಂತ್ರಿಕತೆ ಮೂಲಕ ಪರಿಹರಿಸಬಹುದು ಎಂದು ಭಾರತವು ಮೊದಲಿನಿಂದಲೂ ಸ್ಪಷ್ಟಪಡಿಸಿದೆ' ಎಂದು ಹೇಳಿದರು.
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ - ನರೇಂದ್ರ ಮೋದಿ
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ - ನರೇಂದ್ರ ಮೋದಿ
Updated on

ನವದೆಹಲಿ: ಉಕ್ರೇನ್ ಬಿಕ್ಕಟ್ಟನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

ಭಾರತಕ್ಕೆ ಭೇಟಿ ನೀಡಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯ ನಂತರ ಜಂಟಿ ಹೇಳಿಕೆಯಲ್ಲಿ ಮೋದಿ, 'ಉಕ್ರೇನ್ ವಿವಾದವನ್ನು ಮಾತುಕತೆ ಮತ್ತು ರಾಜತಾಂತ್ರಿಕತೆ ಮೂಲಕ ಪರಿಹರಿಸಬಹುದು ಎಂದು ಭಾರತವು ಮೊದಲಿನಿಂದಲೂ ಸ್ಪಷ್ಟಪಡಿಸಿದೆ' ಎಂದು ಹೇಳಿದರು.

ಭಾರತಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿರುವ ಮೆಲೋನಿ, G20 ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಕಾರಣ ಉಕ್ರೇನ್‌ನಲ್ಲಿನ ಯುದ್ಧವನ್ನು ನಿಲ್ಲಿಸಲು ಸಮಾಲೋಚನಾ ಪ್ರಕ್ರಿಯೆಯನ್ನು ಸುಗಮಗೊಳಿಸುವಲ್ಲಿ ಭಾರತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬಹುಪಕ್ಷೀಯ ಸಮುದಾಯವನ್ನು ಒಟ್ಟಿಗೆ ಇಟ್ಟುಕೊಳ್ಳುವುದು ಮುಖ್ಯವಾಗಿದೆ ಮತ್ತು ಭಾರತದ ಅಧ್ಯಕ್ಷ ಸ್ಥಾನವು ಇನ್ನೂ ಹೆಚ್ಚಿನದನ್ನು ಮಾಡಬಹುದೆಂದು ನಾವು ಭಾವಿಸುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಉಭಯ ದೇಶಗಳ ಸಂಬಂಧ ಬಲವರ್ಧನೆಗೆ ಜಿ20 ಶೃಂಗಸಭೆಗೆ ನಮ್ಮ ಸಹಕಾರವನ್ನು ಪ್ರಧಾನಿ ಮೋದಿ ಅವಲಂಬಿಸಬಹುದು. ನಾವಿಬ್ಬರು ಒಟ್ಟಿಗೆ ಮಾಡಲು ಸಾಕಷ್ಟು ಇದೆ ಎಂಬುದನ್ನು ನಾನು ನಂಬುತ್ತೇನೆ ಎಂದು ತಿಳಿಸಿದರು.

ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತನಾಡಿದ ಮೋದಿ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಇಟಲಿಯ ಸಕ್ರಿಯ ಭಾಗವಹಿಸುವಿಕೆಯನ್ನು ಸ್ವಾಗತಿಸಿದರು. ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮಕ್ಕೆ ಇಟಲಿ ಸೇರಲು ನಿರ್ಧರಿಸಿರುವುದು ಸಂತಸದ ವಿಷಯ ಎದು ಮೋದಿ ಹೇಳಿದರು.

'ನಾವು ಈ ಸಂಬಂಧವನ್ನು ಮತ್ತಷ್ಟು ಹೆಚ್ಚಿಸಲು ಬಯಸಿದ್ದೇವೆ ಮತ್ತು ನಾವು ನಮ್ಮ ಪಾಲುದಾರಿಕೆಯನ್ನು ಕಾರ್ಯತಂತ್ರದ ಪಾಲುದಾರಿಕೆಯಾಗಿ ಪರಿವರ್ತಿಸಲು ನಿರ್ಧರಿಸಿದ್ದೇವೆ. ಏಕೆಂದರೆ, ನಾವು ಬಹಳ ಬಲಿಷ್ಟವಾದ ಸಂಬಂಧವನ್ನು ಹೊಂದಿದ್ದೇವೆ' ಎಂದು ಮೆಲೋನಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತ ಮತ್ತು ಇಟಲಿ ನಡುವೆ ರಾಷ್ಟ್ರಗಳು 'ಸ್ಟಾರ್ಟ್ ಅಪ್ ಸೇತುವೆ'ಯನ್ನು ಸ್ಥಾಪಿಸಲಿವೆ. ನಾವು ಇದನ್ನು ಸ್ವಾಗತಿಸುತ್ತೇವೆ. ರಕ್ಷಣಾ ಸಹಕಾರದ ಮೂಲದ ಉಭಯ ದೇಶಗಳು ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಭಾರತದ ರಕ್ಷಣಾ ಉತ್ಪಾದನಾ ವಲಯದಲ್ಲಿ, ಸಹ-ಉತ್ಪಾದನೆ ಮತ್ತು ಸಹ-ಅಭಿವೃದ್ಧಿಗೆ ಅವಕಾಶಗಳು ಉದ್ಭವಿಸುತ್ತಿವೆ. ಇದು ಎರಡೂ ದೇಶಗಳಿಗೆ ಪ್ರಯೋಜನಕಾರಿಯಾಗಿದೆ. ನಿಯಮಿತವಾಗಿ ಜಂಟಿ ಅಭ್ಯಾಸ ಮತ್ತು ತರಬೇತಿ ಕೋರ್ಸ್‌ಗಳನ್ನು ನಡೆಸಲು ನಾವು ನಿರ್ಧರಿಸಿದ್ದೇವೆ. ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಇಟಲಿ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿವೆ. ಈ ಸಹಕಾರವನ್ನು ಇನ್ನಷ್ಟು ಬಲಪಡಿಸಲು ನಾವು ವಿವರವಾದ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು.

ಈ ವರ್ಷ ಭಾರತ ಮತ್ತು ಇಟಲಿ ದ್ವಿಪಕ್ಷೀಯ ಸಂಬಂಧದ 75ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿವೆ. ನವೀಕರಿಸಬಹುದಾದ ಇಂಧನ, ಹೈಡ್ರೋಜನ್, ಐಟಿ, ಟೆಲಿಕಾಂ, ಸೆಮಿಕಂಡಕ್ಟರ್‌ಗಳು ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಭಾರತವು ಇಟಲಿಯೊಂದಿಗೆ ತನ್ನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಮೋದಿ ಹೇಳಿದರು.

ಇದಕ್ಕೂ ಮೊದಲು ಮೆಲೋನಿ ಅವರನ್ನು ಸ್ವಾಗತಿಸಿದ ಮೋದಿ, ಇಟಲಿಯ ಜನರು ಅವರಿಗೆ ಮತ ಹಾಕಿದ್ದಾರೆ ಮತ್ತು ಅವರು ಇಟಲಿಯ ಮೊದಲ ಮಹಿಳೆ ಮತ್ತು ಕಿರಿಯ ಪ್ರಧಾನಿಯಾಗಿದ್ದಾರೆ. ಈ ಐತಿಹಾಸಿಕ ಸಾಧನೆಗಾಗಿ ಭಾರತೀಯರ ಪರವಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com