ಒಂದು ಹಂತದ ಪರೀಕ್ಷೆ ಮಾತ್ರ ನಿಮ್ಮ ಜೀವನವನ್ನು ನಿರ್ಧರಿಸುವುದಿಲ್ಲ, ನಿಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಪ್ರತಿಭೆ ಬಳಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ನವದೆಹಲಿ:ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(CBSE)ನ 12ನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಶುಕ್ರವಾರ ಪ್ರಕಟವಾಗಿದ್ದು, ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಪರೀಕ್ಷಾ ಯೋಧರು #ExamWarriors ಎಂದು ವಿದ್ಯಾರ್ಥಿಗಳನ್ನು ಕರೆದಿರುವ ಪ್ರಧಾನ ಮಂತ್ರಿಗಳು, 12ನೇ ತರಗತಿ ಸಿಬಿಎಸ್ ಇ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಧನ್ಯವಾದಗಳು. ಯುವ ಪ್ರತಿಭಾವಂತರ ಕಠಿಣ ಶ್ರಮ ಮತ್ತು ನಿಷ್ಠೆ ಕಂಡರೆ ಹೆಮ್ಮೆಯಾಗುತ್ತದೆ. ಯಶಸ್ವಿ ಯುವಶಕ್ತಿನ್ನು ಬೆಳೆಸಿ ಪೋಷಿಸುವಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದಿದ್ದಾರೆ.
ಪರೀಕ್ಷೆಯಲ್ಲಿ ಇನ್ನಷ್ಟು ಉತ್ತಮ ಅಂಕ ಗಳಿಸಬಹುದಾಗಿತ್ತು ಮತ್ತು ಗಳಿಸಿದ ಅಂಕ ಸಾಕಾಗಲಿಲ್ಲ ಎಂದು ಬೇಸರಪಟ್ಟುಕೊಳ್ಳುವ ಯುವ ವಿದ್ಯಾರ್ಥಿಗಳಿಗೆ ನಾನು ಹೇಳಲು ಬಯಸುವುದೆಂದರೆ ಮುಂದಿನ ಸಮಯಗಳಲ್ಲಿ ನಿಮಗೆ ಸಾಕಷ್ಟು ಅವಕಾಶಗಳ ಬಾಗಿಲು ತೆರೆದಿರುತ್ತದೆ. ಒಂದು ಹಂತದ ಪರೀಕ್ಷೆ ಮಾತ್ರ ನಿಮ್ಮ ಜೀವನವನ್ನು ನಿರ್ಧರಿಸುವುದಿಲ್ಲ. ನೀವು ಆಸಕ್ತಿ ಹೊಂದಿರುವ ಕ್ಷೇತ್ರಗಳಲ್ಲಿ ನಿಮ್ಮ ಪ್ರತಿಭೆಯನ್ನು ಬಳಸಿಕೊಳ್ಳಿ. ಆಗ ನೀವು ಹೆಚ್ಚು ಪ್ರಕಾಶಮಾನರಾಗುತ್ತೀರಿ ಎಂದು ಕಿವಿಮಾತು ಹೇಳಿದ್ದಾರೆ.
ಈ ವರ್ಷ 12ನೇ ತರಗತಿ ಸಿಬಿಎಸ್ ಇ ಪರೀಕ್ಷೆಯಲ್ಲಿ ಒಟ್ಟು ಶೇಕಡಾ 87.33 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ತಿರುವನಂತಪುರ ಶೇಕಡಾ 99.91 ಫಲಿತಾಂಶದೊಂದಿಗೆ ಅಗ್ರಸ್ಥಾನದಲ್ಲಿದೆ.
ಈ ಬಾರಿ ಶೇ. 90.68 ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದು, ಹುಡುಗರಿಗಿಂತ ಶೇ. 6.01 ರಷ್ಟು ಮುಂದಿದ್ದಾರೆ. ಸಿಬಿಎಸ್ಇ ಫಲಿತಾಂಶವನ್ನು cbseresults.nic.in ಅಧಿಕೃತ ವೆಬ್ಸೈಟ್ ನಲ್ಲಿ ನೋಡಬಹುದು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ