ಧಂಡ್ಬಾದ್: ಸೀಲ್ದಾಹ್ ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಕೋಚ್ ಅಟೆಂಡೆಂಟ್ ಜೊತೆ ಜಗಳವಾಡಿದ ಪ್ರಯಾಣಿಕನೊಬ್ಬ ಸಿಟ್ಟಿನಲ್ಲಿ ಗುಂಡಿನ ದಾಳಿ ನಡೆಸಿರುವ ಘಟನೆಯೊಂದು ಗುರುವಾರ ನಡೆದಿದೆ.
ಪ್ರಯಾಣಿಕನನ್ನು 41 ವರ್ಷದ ಹರ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ, ಈತ ನಿವೃತ್ತ ಸೇನಾ ಸಿಬ್ಬಂದಿ ಎಂದು ತಿಳಿದುಬಂದಿದೆ.
ಹೌರಾ-ನವದೆಹಲಿ ರಾಜಧಾನಿ ಎಕ್ಸ್ಪ್ರೆಸ್ಗೆ ಟಿಕೆಟ್ ಪಡೆದಿದ್ದ ಹರ್ವಿಂದರ್, ತಪ್ಪಾಗಿ ಸೀಲ್ದಾಹ್-ನವದೆಹಲಿ ರಾಜಧಾನಿ ಎಕ್ಸ್ಪ್ರೆಸ್ ಹತ್ತಿದ್ದ. ಸೀಟಿನ ವಿಚಾರಕ್ಕೆ ಕೋಚ್ ಅಟೆಂಡೆಂಟ್ ಜೊತೆಗೆ ಗಲಾಟೆಗೆ ಇಳಿದಿದ್ದ. ಈ ವೇಳೆ ಕೆಂಡಾಮಂಡಲಗೊಂಡ ಹರ್ವಿಂದರ್ ಸಿಂಗ್, ತನ್ನ ಬಳಿಯಿದ್ದ ಪಿಸ್ತೂಲ್ ತೆಗೆದುಕೊಂಡು ಗುಂಡು ಹಾರಿಸಿದ್ದಾನೆ. ಕೂಡಲೇ ಆರ್ಪಿಎಫ್ ಸಿಬ್ಬಂದಿ ಪಿಸ್ತೂಲ್'ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಘಟನೆ ಬಳಿಕ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಘಟನೆ ವೇಳೆ ಹರ್ವಿಂದರ್ ಸಿಂಗ್ ಮದ್ಯದ ಅಮಲಿನಲ್ಲಿದ್ದದ್ದು ಮೇಲ್ನೋಟಕಕ್ಕೆ ಕಂಡು ಬಂದಿದೆ ಎಂದು ಧನ್ಬಾದ್ ರೈಲು ವಿಭಾಗದ ವಾಣಿಜ್ಯ ವ್ಯವಸ್ಥಾಪಕ ಅಮರೇಶ್ ಕುಮಾರ್ ಅವರು ಹೇಳಿದ್ದಾರೆ.
Advertisement