ಆಸ್ತಿಗಾಗಿ ತಂದೆ, ತಾಯಿ ಸಹೋದರನಿಗೆ ಗುಂಡಿಕ್ಕಿ ಹತ್ಯೆಗೈದ ವ್ಯಕ್ತಿ!

ಪಂಜಾಬ್‌ನ ಜಲಂಧರ್‌ನಲ್ಲಿ ತ್ರಿವಳಿ ಕೊಲೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಕುಟುಂಬದ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. 
ಪೊಲೀಸರಿಂದ ಪರಿಶೀಲನೆ
ಪೊಲೀಸರಿಂದ ಪರಿಶೀಲನೆ

ಪಂಜಾಬ್‌ನ ಜಲಂಧರ್‌ನಲ್ಲಿ ತ್ರಿವಳಿ ಕೊಲೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಕುಟುಂಬದ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. 

ಜಲಂಧರ್‌ನ ಲಂಬ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಲ್ಯಾಂಬ್ರಾದ ಟವರ್ ಎನ್‌ಕ್ಲೇವ್ ಹಂತ 3ರಲ್ಲಿ ವಾಸಿಸುತ್ತಿದ್ದ ವ್ಯಕ್ತಿ ತನ್ನ ತಂದೆ, ತಾಯಿ ಮತ್ತು ಸಹೋದರನನ್ನು ಕೊಂದಿದ್ದಾನೆ.

ಹರ್‌ಪ್ರೀತ್ ಎಂಬ ವ್ಯಕ್ತಿ ತನ್ನ ತಂದೆಯ ಪರವಾನಗಿ ಪಡೆದ ಗನ್‌ನಿಂದ ತನ್ನ ತಂದೆ, ನಂತರ ತಾಯಿ ಮತ್ತು ಸಹೋದರನ ಮೇಲೆ ಗುಂಡು ಹಾರಿಸಿದ್ದಾನೆ. ತ್ರಿವಳಿ ಹತ್ಯೆಯ ನಂತರ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದರು.

ಮೂರು ಕೊಲೆಗಳ ಬಗ್ಗೆ ಜಲಂಧರ್ (ಗ್ರಾಮೀಣ) ಡಿಸಿಪಿ ಬಲ್ಬೀರ್ ಸಿಂಗ್ ಅವರು, 'ಕುಟುಂಬದ ನಡುವೆ ಆಸ್ತಿ ವಿವಾದ ಇದ್ದ ಬಗ್ಗೆ ನಮಗೆ ಶಂಕೆ ಇದೆ. ಕೊಲೆಗೆ ಬಳಸಿದ್ದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ. ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದರು.

ಆರೋಪಿ ಮಗ ಮೊದಲು ಲೈಸನ್ಸ್ ಪಡೆದ ರೈಫಲ್‌ನಿಂದ ತಂದೆಯ ಕುತ್ತಿಗೆಗೆ ಗುಂಡು ಹಾರಿಸಿದ್ದಾನೆ. ನಂತರ ತಂದೆಯನ್ನು ರಕ್ಷಿಸಲು ಬಂದ ತಾಯಿ ಮತ್ತು ಸಹೋದರನ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಬಲ್ಬೀರ್ ಸಿಂಗ್ ಹೇಳಿದ್ದಾರೆ.

ಪೊಲೀಸ್ ಅಧಿಕಾರಿ ಪ್ರಕಾರ, ಆರೋಪಿ ಮಗ ತನ್ನ ಹೆಸರಿಗೆ ಮನೆಯನ್ನು ವರ್ಗಾಯಿಸುವಂತೆ ಪೋಷಕರಿಗೆ ಒತ್ತಡ ಹೇರುತ್ತಿದ್ದನು. ಈ ವಿಷಯದ ಬಗ್ಗೆ ಜಗಳವಾಗಿತ್ತು. ಈ ವಿಚಾರವಾಗಿ ಈ ಹಿಂದೆ ಕುಟುಂಬದಲ್ಲಿ ಜಗಳ ನಡೆದಿದ್ದು, ಆ ವೇಳೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆ ಸಮಯದಲ್ಲಿ ರಾಜಿ ಸಂಧಾನ ಮಾಡಲಾಗಿತ್ತು.

ವರದಿಯ ಪ್ರಕಾರ, 52 ವರ್ಷದ ಜಗ್ಬೀರ್ ಸಿಂಗ್ ವೃತ್ತಿಯಲ್ಲಿ ಖಾಸಗಿ ಭದ್ರತಾ ಸಿಬ್ಬಂದಿಯಾಗಿದ್ದು, ಎರಡು ವರ್ಷಗಳ ಹಿಂದೆ ತನ್ನ ಕುಟುಂಬದೊಂದಿಗೆ ಟವರ್ ಎನ್‌ಕ್ಲೇವ್‌ಗೆ ಸ್ಥಳಾಂತರಗೊಂಡಿದ್ದರು. ಇಬ್ಬರು ಗಂಡು ಮಕ್ಕಳ ತಂದೆ ಜಗ್ಬೀರ್ ಸಿಂಗ್ ಪ್ಲಾಟ್ ನಲ್ಲಿ ಮನೆ ಕಟ್ಟಿಕೊಂಡಿದ್ದರು. ಅವರ ಹಿರಿಯ ಮಗ ಗಗನ್‌ದೀಪ್ ಸಿಂಗ್ ಅವರ ಮಾನಸಿಕ ಸ್ಥಿತಿ ಉತ್ತಮವಾಗಿಲ್ಲದ ಕಾರಣ ಅವರು ಮದುವೆಯಾಗಲು ಸಾಧ್ಯವಾಗಲಿಲ್ಲ, ಆದರೆ ಅವರ ಕಿರಿಯ ಮಗ ಹರ್‌ಪ್ರೀತ್ ಸಿಂಗ್ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.

ಆಸ್ತಿ ವಿವಾದದಲ್ಲಿ ಕೊಲೆ
ಹರ್‌ಪ್ರೀತ್ ಅವರ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ಪೋಷಕರ ಮನೆಗೆ ಹೋದಾಗ ಮನೆಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಆರೋಪಿ ತನ್ನ ತಂದೆಯ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದನು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದು ತಂದೆಯ ಮೇಲೆ ಒಂದರ ಹಿಂದೆ ಒಂದರಂತೆ ಐದು ಗುಂಡು ಹಾರಿಸಿದ್ದಾನೆ.

ತಂದೆಯನ್ನು ರಕ್ಷಿಸಲು ಬಂದ ತಾಯಿ ಹಾಗೂ ಸಹೋದರನ ಮೇಲೂ ಗುಂಡು ಹಾರಿಸಿದ್ದಾರೆ. ಅಲ್ಲಿ ಮೂವರೂ ಮೃತಪಟ್ಟಿದ್ದಾರೆ. ಇದಾದ ಬಳಿಕ ಹರಪ್ರೀತ್ ಮನೆಗೆ ಬೀಗ ಹಾಕಿ ಓಡಿ ಹೋಗಿದ್ದ. ಅಕ್ಕಪಕ್ಕದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರು ಸ್ಥಳಕ್ಕಾಗಮಿಸಿ ಮನೆ ತೆರೆದು ಶವಗಳನ್ನು ಹೊರತೆಗೆದಿದ್ದಾರೆ. ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com