ನೋಯ್ಡಾ: ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್ಪ್ರೆಸ್ವೇ (ವೈಎಕ್ಸ್ಪಿ) ನಲ್ಲಿ ಶನಿವಾರ ಅಪರಿಚಿತ ವಾಹನವೊಂದು ವ್ಯಾನ್ಗೆ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ಐವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಮಾರುತಿ ಇಕೋದಲ್ಲಿದ್ದ (Maruti Eeco) ಮೂವರು ಅಪ್ರಾಪ್ತರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರಬುಪುರ ಪೊಲೀಸ್ ಠಾಣೆ ವ್ಯಾಪ್ತಿಯ ವೈಎಕ್ಸ್ಪಿಯ 25ನೇ ಮೈಲಿಗಲ್ಲು ಬಳಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಇಕೋ ಒಳಗೆ ಎಂಟು ಜನರಿದ್ದರು. ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಅವಘಡ ಸಂಭವಿಸಿದೆ. ಘಟನೆಯಲ್ಲಿ ಐವರು ಪ್ರಯಾಣಿಕರು ಸಾವಿಗೀಡಾಗಿದ್ದು, ಮೂವರು ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ' ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಗ್ರೇಟರ್ ನೋಯ್ಡಾದ ಡಿಸಿಪಿ ಸಾದ್ ಮಿಯಾ ಖಾನ್ ಮಾತನಾಡಿ, ಕಾರು ದಕ್ಷಿಣ ದೆಹಲಿಯ ಮದನ್ಪುರ ಖಾದರ್ನಿಂದ ಹೊರಟು ಜಾರ್ಖಂಡ್ನ ಪಲಮು ಜಿಲ್ಲೆಗೆ ತೆರಳುತ್ತಿತ್ತು ಎಂದರು.
ಮೃತರನ್ನು ಉಪೇಂದ್ರ ಬೈತಾ (38), ಅವರ ಸಹೋದರ ಬಿಜೇಂದ್ರ ಬೈತಾ (36), ಬಿಜೇಂದ್ರ ಅವರ ಪತ್ನಿ ಕಾಂತಿ ದೇವಿ (30), ಅವರ 12 ವರ್ಷದ ಪುತ್ರಿ ಮತ್ತು ಸುರೇಶ್ ಬೈತಾ (45) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಪೇಂದ್ರ ಅವರ ಪುತ್ರ ಸೂರಜ್ (16) ಮತ್ತು ಬಿಜೇಂದ್ರ ಅವರ ಮಕ್ಕಳಾದ ಆಯುಷ್ (8) ಮತ್ತು ಆರ್ಯನ್ (10) ಗಾಯಗೊಂಡಿದ್ದಾರೆ.
Advertisement