ಬೆಂಗಳೂರು: ಕರ್ನಾಟಕದಲ್ಲಿ ನೀರಾವರಿ ಯೋಜನೆಗಳು ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರ್ಕಾರವು ಅಡ್ಡಿಪಡಿಸುತ್ತಿದೆ ಮತ್ತು ಸಹಕಾರ ನೀಡುತ್ತಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಕ್ಕೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿರುಗೇಟು ನೀಡಿದ್ದಾರೆ.
ಸುಳ್ಳು ವದಂತಿಗಳು ಮತ್ತು ತಪ್ಪು ಮಾಹಿತಿಯನ್ನು ಜನರ ಮಧ್ಯೆ ಹಬ್ಬುವುದು ಕಾಂಗ್ರೆಸ್ ಗೆ ಅಭ್ಯಾಸವಾಗಿ ಹೋಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಸಿಎಂ ಸಿದ್ದರಾಮಯ್ಯನವರು ಮಾಡುತ್ತಿರುವುದು ಸರಿಯಲ್ಲ. ಮೇಕೆದಾಟು ಯೋಜನೆಯ(Mekedatu project) ಸ್ಥಿತಿಗತಿಯ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ - ಇಲ್ಲದಿದ್ದರೆ, ನಾವು ನಿಮಗೆ ನೆನಪಿಸುತ್ತೇವೆ. ನಿಮ್ಮ ವಿವರಣಾ ತಂಡವು ಸರಿಯಾಗಿ ಕೆಲಸ ಮಾಡಿಲ್ಲವೆಂದು ತೋರುತ್ತದೆ ಎಂದಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(CWMA)ಯ ವಿವಿಧ ಸಭೆಗಳಲ್ಲಿ ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ(DPR) ಮೇಲಿನ ಚರ್ಚೆಯನ್ನು ಅಜೆಂಡಾದಲ್ಲಿ ಸೇರಿಸಲಾಗಿತ್ತು. ಆದರೆ ರಾಜ್ಯಗಳಲ್ಲಿ ಪಕ್ಷಗಳ ನಡುವೆ ಒಮ್ಮತದ ಕೊರತೆಯಿಂದಾಗಿ ಚರ್ಚೆ ನಡೆಯಲು ಸಾಧ್ಯವಾಗಲಿಲ್ಲ. ಕಳಸಾ ಮತ್ತು ಬಂಡೂರ ನಾಲಾ ಯೋಜನೆ ಡಿಪಿಆರ್ಗೆ ಈಗಾಗಲೇ ಕೇಂದ್ರ ಜಲ ಆಯೋಗ (CWC) ಕೆಲವು ಷರತ್ತುಗಳೊಂದಿಗೆ ಅನುಮೋದನೆ ನೀಡಿದೆ. ಇದನ್ನು ಕರ್ನಾಟಕ ಸರ್ಕಾರಕ್ಕೆ ತಿಳಿಸಲಾಗಿದೆ ಎಂದು ಶೇಖಾವತ್ ಹೇಳಿದರು.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ಅಡಿಯಲ್ಲಿ ಆದ್ಯತೆಯಲ್ಲಿ ಕರ್ನಾಟಕದಿಂದ ಐದು ಯೋಜನೆಗಳಲ್ಲಿ 2017-17 ರಲ್ಲಿ ತ್ವರಿತ ನೀರಾವರಿ ಪ್ರಯೋಜನಗಳ ಕಾರ್ಯಕ್ರಮಗಳಲ್ಲಿ ಮೂರು ಪೂರ್ಣಗೊಂಡಿವೆ ಎಂದು ಸಚಿವರು ಹೇಳಿದರು. ಇನ್ನೆರಡು ಕೆಲಸ ನಡೆಯುತ್ತಿವೆ. 1,238.30 ಕೋಟಿ ರೂಪಾಯಿಗಳಲ್ಲಿ 1,190.05 ಕೋಟಿ ರೂಪಾಯಿಗಳನ್ನು ಈಗಾಗಲೇ ಇಲ್ಲಿಯವರೆಗೆ ಬಿಡುಗಡೆ ಮಾಡಲಾಗಿದೆ. ಅಟಲ್ ಭುಜಲ್ ಯೋಜನೆ ಅಡಿಯಲ್ಲಿ, ಕರ್ನಾಟಕವು ಈಗಾಗಲೇ ಕೇಂದ್ರದಿಂದ 629.54 ಕೋಟಿ ರೂಪಾಯಿಗಳನ್ನು ಪಡೆದು ಅಕ್ಟೋಬರ್ 28 ರವರೆಗೆ ಕೇವಲ 274.05 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ, ಇದಕ್ಕೆ ಏನು ವಿವರಣೆ ಕೊಡುತ್ತೀರಿ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ಮಳೆ ಕೊರತೆಯ ನಡುವೆಯೂ ಕೇಂದ್ರ ಸರ್ಕಾರ ಕರ್ನಾಟಕದ ನೀರಿನ ಸಮಸ್ಯೆಗೆ ಸ್ಪಂದಿಸಿಲ್ಲ ಎಂಬ ಸಿಎಂ ಆರೋಪಕ್ಕೆ ಕೇಂದ್ರ ಸಚಿವರು ಪ್ರತಿಕ್ರಿಯಿಸಿ, ಮೇಕೆದಾಟು, ಮಹದಾಯಿ ಯೋಜನೆಗಳು ಕೇಂದ್ರದ ಅನುಮೋದನೆಗೆ ಬಾಕಿ ಇವೆ. ರಾಜ್ಯದ ಉಪಕ್ರಮ, ಉತ್ತರ ಕರ್ನಾಟಕದ ನೀರಾವರಿಗಾಗಿ ಕೃಷ್ಣಾ ಮೇಲ್ದಂಡೆ ಯೋಜನೆಯ ಗೆಜೆಟ್ ಅಧಿಸೂಚನೆ ಮತ್ತು ಕೇಂದ್ರದಿಂದ ರಾಷ್ಟ್ರೀಯ ಸ್ಥಾನಮಾನಕ್ಕಾಗಿ ಕಾಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ನಿನ್ನೆ ಸೋಮವಾರವೂ ಕೇಂದ್ರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಸಿಎಂ, 2018-19ರ ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಭರವಸೆ ನೀಡಿದಂತೆ ಬೆಂಗಳೂರು ಉಪನಗರ ರೈಲು ಯೋಜನೆಗೆ 18,000 ಕೋಟಿ ರೂಪಾಯಿ ಹಣ ಎಲ್ಲಿದೆ ಎಂದು ಪ್ರಶ್ನಿಸಿದ್ದರು. ಬೆಂಗಳೂರು ದಕ್ಷಿಣದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈ ಕುರಿತು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನೀವು ಕರ್ನಾಟಕದ ಮುಖ್ಯಮಂತ್ರಿ. ಆದರೆ ನೀವು ಕರ್ನಾಟಕದ ಮುಖ್ಯ ಸುಳ್ಳುಗಾರ ಆಗಿದ್ದೀರಿ. ಬೆಂಗಳೂರು ಉಪನಗರ ರೈಲು ಯೋಜನೆಗಾಗಿ ಕೇಂದ್ರ ಸರ್ಕಾರವು ಈಗಾಗಲೇ 500 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿರುವ ಅಧಿಸೂಚನೆಗಳನ್ನು ಲಗತ್ತಿಸಿ, ಆದರೆ 2023-24 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಯಾವುದೇ ಹಣವನ್ನು ಬಿಡುಗಡೆ ಮಾಡಿಲ್ಲ ಎಂದಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರ ಉದ್ದೇಶಿತ ಸತ್ಯ ತಪಾಸಣೆ ಘಟಕವು ನಮ್ಮ ಸುಳ್ಳುಗಾರ ಸಿಎಂಗೆ ಹೆಚ್ಚಿನ ಹೊರೆಯಾಗಲಿದೆ,” ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿ ಲೇವಡಿ ಮಾಡಿದ್ದಾರೆ.
Advertisement