ಇಂದೋರ್ ದೇವಾಲಯದ ಮೆಟ್ಟಿಲು ಬಾವಿ ದುರಂತಕ್ಕೆ ಅಕ್ರಮ ನಿರ್ಮಾಣ ಕಾರಣ: ಕಮಲ್ ನಾಥ್
36 ಜನರನ್ನು ಬಲಿ ಪಡೆದ ಇಂದೋರ್ ದೇವಸ್ಥಾನದ ಮೆಟ್ಟಿಲು ಬಾವಿ ದುರಂತಕ್ಕೆ ಅಕ್ರಮ ನಿರ್ಮಾಣಗಳು ಕಾರಣ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಅವರು ಶನಿವಾರ ಆರೋಪಿಸಿದ್ದಾರೆ.
Published: 01st April 2023 05:26 PM | Last Updated: 01st April 2023 05:26 PM | A+A A-

ಕಮಲ್ ನಾಥ್
ಇಂದೋರ್: 36 ಜನರನ್ನು ಬಲಿ ಪಡೆದ ಇಂದೋರ್ ದೇವಸ್ಥಾನದ ಮೆಟ್ಟಿಲು ಬಾವಿ ದುರಂತಕ್ಕೆ ಅಕ್ರಮ ನಿರ್ಮಾಣಗಳು ಕಾರಣ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಅವರು ಶನಿವಾರ ಆರೋಪಿಸಿದ್ದಾರೆ.
ಆಡಳಿತಾರೂಢ ಭಾರತೀಯ ಜನತಾ ಪಕ್ಷದ(ಬಿಜೆಪಿ) ಒತ್ತಡಕ್ಕೆ ಮಣಿದು ಸ್ಥಳೀಯ ಮಹಾನಗರ ಪಾಲಿಕೆ ಮೆಟ್ಟಿಲುಬಾವಿಯ ಮೇಲಿನ ಅನಧಿಕೃತ ನಿರ್ಮಾಣಗಳನ್ನು ಕೆಡವಲಿಲ್ಲ ಎಂದ ಕಮಲ್ ನಾಥ್ ಅವರು, ಮುಂದಿನ ಏಳು ದಿನಗಳಲ್ಲಿ ಅಕ್ರಮ ನಿರ್ಮಾಣಗಳನ್ನು ತೆರವು ಮಾಡದಿದ್ದರೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪಟೇಲ್ ನಗರದ ಬಾಳೇಶ್ವರ ಮಹಾದೇವ ಜುಲೇಲಾಲ್ ದೇವಸ್ಥಾನದಲ್ಲಿ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಕಮಲ್ ನಾಥ್, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸಾರ್ವಜನಿಕ ಸ್ಥಳಗಳಲ್ಲಿ ಭದ್ರತಾ ಪರಿಶೋಧನೆ ಕಡ್ಡಾಯಗೊಳಿಸಲು ಕಾನೂನು ಜಾರಿಗೆ ತರಲಿದೆ ಎಂದು ಹೇಳಿದರು.
ಗುರುವಾರ ಮೆಟ್ಟಿಲುಬಾವಿಯ ಮೇಲೆ ನಿರ್ಮಿಸಲಾದ ದೇವಾಲಯದ ನೆಲ ಕುಸಿದು 21 ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಮೂವತ್ತಾರು ಜನ ಸಾವನ್ನಪ್ಪಿದ್ದಾರೆ.