ಮಲಯಾಳಂ ಸುದ್ದಿ ವಾಹಿನಿ 'ಮೀಡಿಯಾ ಒನ್‌' ಪ್ರಸಾರಕ್ಕೆ ಕೇಂದ್ರ ಸರ್ಕಾರ ಹೇರಿದ್ದ ನಿಷೇಧ ರದ್ದುಪಡಿಸಿದ ಸುಪ್ರೀಂ ಕೋರ್ಟ್!

ಭದ್ರತಾ ಕಾರಣಗಳಿಗಾಗಿ ಮಲಯಾಳಂ ಸುದ್ದಿವಾಹಿನಿ ‘ಮೀಡಿಯಾ ಒನ್’ ಪ್ರಸಾರವನ್ನು ನಿಷೇಧಿಸುವ ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದಿದ್ದ ಕೇರಳ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ತಳ್ಳಿಹಾಕಿದೆ.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ಮಲಯಾಳಂ ಸುದ್ದಿ ವಾಹಿನಿ ಮೀಡಿಯಾ ಒನ್‌ ಪ್ರಸಾರಕ್ಕೆ ಹೇರಲಾಗಿದ್ದ ನಿಷೇಧವನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್‌ ಇಂದು ತೀರ್ಪು ಪ್ರಕಟಿಸಿದೆ.

ಭದ್ರತಾ ಕಾರಣಗಳಿಗಾಗಿ ಮಲಯಾಳಂ ಸುದ್ದಿವಾಹಿನಿ ‘ಮೀಡಿಯಾ ಒನ್’ ಪ್ರಸಾರವನ್ನು ನಿಷೇಧಿಸುವ ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದಿದ್ದ ಕೇರಳ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ತಳ್ಳಿಹಾಕಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ಪೀಠವು ನಾಲ್ಕು ವಾರಗಳಲ್ಲಿ ಚಾನೆಲ್‌ಗೆ ನವೀಕರಣ ಪರವಾನಗಿ ನೀಡಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ (ಎಂಐಬಿ) ಸೂಚಿಸಿದೆ.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದಿಂದ ಭದ್ರತಾ ಅನುಮೋದನೆ ಪಡೆಯದೇ ಇರುವುದರಿಂದ ಚಾನಲ್‌ನ ಪ್ರಸಾರ ಪರವಾನಗಿಯನ್ನು ನವೀಕರಿಸದೇ ಇರಲು, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ನಿರ್ಧಾರವನ್ನು ಎತ್ತಿಹಿಡಿದ ಕೇರಳ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಮೀಡಿಯಾಒನ್‌ ವಾಹಿನಿಯ ಆಡಳಿತ ಸಂಸ್ಥೆಯು ಸುಪ್ರೀಂ ಕೋರ್ಟಿಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.

ನಿರ್ಧಾರ ಮಾನ್ಯವಾಗಿದೆ ಎಂದು ಹೈಕೋರ್ಟ್‌ ಹೇಗೆ ತಿಳಿದುಕೊಂಡಿತೆಂಬುದಕ್ಕೆ ಯಾವುದೇ ವಿವರಣೆಯಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ಪೀಠ ಹೇಳಿತಲ್ಲದೆ ವಾಹಿನಿಯ ಪರವಾನಗಿಯನ್ನು ನಾಲ್ಕು ವಾರಗಳೊಳಗೆ ನವೀಕರಿಸುವಂತೆ ಸಚಿವಾಲಯಕ್ಕೆ ಸೂಚಿಸಿದೆ.

ಗೃಹ ವ್ಯವಹಾರಗಳ ಸಚಿವಾಲಯವು ಭದ್ರತಾ ಅನುಮೋದನೆಗೆ ನಿರಾಕರಿಸುವುದಕ್ಕೆ ಕಾರಣಗಳನ್ನು ಬಹಿರಂಗಪಡಿಸದೇ ಇರುವುದು,  ನ್ಯಾಯಾಲಯಕ್ಕೆ ಮಾತ್ರ ಸೀಲ್‌ ಮಾಡಿದ ಲಕೋಟೆಯಲ್ಲಿ ಕಾರಣಗಳನ್ನು ಬಹಿರಂಗಪಡಿಸಿರುವುದು ನೈಸರ್ಗಿಕ ನ್ಯಾಯದ ತತ್ವಗಳು  ನ್ಯಾಯಯುತ ವಿಚಾರಣೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಚಾನೆಲ್‌ಗೆ ಪರವಾನಗಿಯನ್ನು ನವೀಕರಿಸದಿರುವುದು ವಾಕ್ ಸ್ವಾತಂತ್ರ್ಯದ ಹಕ್ಕಿನ ಮೇಲಿನ ನಿರ್ಬಂಧವಾಗಿದೆ ಮತ್ತು ಆರ್ಟಿಕಲ್ 19 (2) ರ ಅಡಿಯಲ್ಲಿ ಮಾತ್ರ ಅದನ್ನು ವಿಧಿಸಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಪೌರತ್ವ ತಿದ್ದುಪಡಿ ಕಾಯಿದೆ, ಎನ್‌ಆರ್‌ಸಿ, ನ್ಯಾಯಾಂಗ ಹಾಗೂ ಸರಕಾರದ ಮೇಲಿನ ಟೀಕೆಗಳ ಕುರಿತಾದ ಚಾನಲ್‌ ವರದಿಗಳನ್ನು ಸಚಿವಾಲಯ ಅವಲಂಬಿಸಿದೆ ಹಾಗೂ ಅದು ಸರಕಾರದ ವಿರುದ್ಧವಾಗಿದೆ ಎಂದು  ಈ ಮೂಲಕ ತಿಳಿಯಪಡಿಸಿದೆ. ಆದರೆ ಪ್ರಸಾರದ ಪರವಾನಗಿಯನ್ನು ನವೀಕರಿಸಲು ನಿರಾಕರಿಸುವುದು ಇವು ಸಮರ್ಥನೀಯ ಕಾರಣಗಳಾಗದು ಎಂದು ನ್ಯಾಯಾಲಯ ಹೇಳಿದೆ.

ಮಾಧ್ಯಮವು ಅಧಿಕಾರಸ್ಥರ ಮುಂದೆ ಸತ್ಯ ಮಾತನಾಡಬೇಕು ಮತ್ತು ಕಟು ವಾಸ್ತವಗಳನ್ನು ನಾಗರಿಕರ ಮುಂದಿಡಬೇಕು. ಸರಕಾರದ ನೀತಿಗಳ ವಿರುದ್ಧ ಟೀಕಾತ್ಮಕ ಅಭಿಪ್ರಾಯಗಳನ್ನು ಸರ್ಕಾರ-ವಿರೋಧಿ ಎಂದು ಪರಿಗಣಿಸಲು ಸಾದ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಚಾನಲ್‌ನ ಷೇರುದಾರರಿಗೆ ಜಮಾಅತ್-ಎ-ಇಸ್ಲಾಮಿ ಹಿಂದ್‌ ಜೊತೆ ನಂಟಿದೆ ಎಂಬ ಆರೋಪವು, ಚಾನಲ್‌ ಹಕ್ಕುಗಳನ್ನು ದಮನಿಸಲು ಸೂಕ್ತ ಕಾರಣವಾಗದು ಎಂದು ನ್ಯಾಯಾಲಯ ಹೇಳಿದೆಯಲ್ಲದೆ ರಾಷ್ಟ್ರೀಯ ಭದ್ರತೆಯ ನೆಪವನ್ನು ಹಾಗೆಯೇ ಸುಮ್ಮನೆ ಮುಂದಿಡಲಾಗದು, ಅದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಬೇಕು ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com