ದೇಶದಲ್ಲಿ ಯಾವಾಗ ಬೇಕಾದರೂ ಲೋಕಸಭೆ ಚುನಾವಣೆ ನಡೆಯಬಹುದು: ನಿತೀಶ್ ಕುಮಾರ್
ವಿಪಕ್ಷಗಳ ಒಗ್ಗಟ್ಟಿನಿಂದಾಗಿ ಬಿಜೆಪಿ ಹೆಚ್ಚು ನಷ್ಟ ಅನುಭವಿಸುವ ಭೀತಿಯಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆಯು ಯಾವಾಗ ಬೇಕಾದರೂ ನಡೆಯಬಹುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ಹೇಳಿದ್ದಾರೆ.
Published: 29th August 2023 04:30 PM | Last Updated: 29th August 2023 07:52 PM | A+A A-

ನಿತೀಶ್ ಕುಮಾರ್
ಪಾಟ್ನಾ: ವಿಪಕ್ಷಗಳ ಒಗ್ಗಟ್ಟಿನಿಂದಾಗಿ ಬಿಜೆಪಿಗೆ ನಷ್ಟ ಉಂಟಾಗುವ ಭೀತಿ ಎದುರಾಗಿದ್ದು, ದೇಶದಲ್ಲಿ ಯಾವಾಗ ಬೇಕಾದರೂ ಲೋಕಸಭೆ ಚುನಾವಣೆ ನಡೆಯಬಹುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ಹೇಳಿದ್ದಾರೆ.
'ಪ್ರತಿಪಕ್ಷಗಳ ಒಗ್ಗಟ್ಟಿನಿಂದ ಬಿಜೆಪಿಗೆ ಹೆಚ್ಚು ನಷ್ಟವಾಗುವ ಭೀತಿಯಿಂದಾಗಿ ಕೇಂದ್ರದ ಎನ್ಡಿಎ ನೇತೃತ್ವದ ಸರ್ಕಾರವು ಅವಧಿಪೂರ್ವ ಲೋಕಸಭೆ ಚುನಾವಣೆಗೆ ಹೋಗಬಹುದು ಎಂದು ಕಳೆದ ಏಳೆಂಟು ತಿಂಗಳಿಂದ ನಾನು ಹೇಳುತ್ತಿದ್ದೇನೆ. ಆದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಎಲ್ಲ ವಿರೋಧ ಪಕ್ಷಗಳು ಒಗ್ಗೂಡಬೇಕು. ಕೆಲವರು ದೇಶದಲ್ಲಿ ಏನು ಬೇಕಾದರೂ ಮಾಡಲು ಸಮರ್ಥರಾಗಿದ್ದಾರೆ' ಎಂದು ಅವರು ಹೇಳಿದರು.
'ನಾವು ಮುಂಬೈಗೆ ಹೋಗುತ್ತಿದ್ದೇವೆ ಮತ್ತು ದೇಶದ ಗರಿಷ್ಠ ಸಂಖ್ಯೆಯ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಕೆಲಸ ನನ್ನ ಕೈಯಲ್ಲಿದೆ. ವೈಯಕ್ತಿಕವಾಗಿ, ನನಗೆ ಯಾವುದೇ ಹುದ್ದೆಯಲ್ಲಿ ಆಸಕ್ತಿ ಇಲ್ಲ. ನಾನು ನಿನ್ನೆ ಅದನ್ನೇ ಹೇಳಿದ್ದೆ ಮತ್ತು ಇಂದು ಕೂಡ ಅದನ್ನೇ ಪುನರಾವರ್ತಿಸುತ್ತಿದ್ದೇನೆ' ಎಂದು ಹೇಳಿದರು.
ಭಾರತದಲ್ಲಿನ ಹೊಸ ರಾಜಕೀಯ ಪಕ್ಷಗಳ ಬಗ್ಗೆ ಪ್ರತಿಕ್ರಿಯಿಸಿದ ಕುಮಾರ್, 'ನಾನು ಸದ್ಯಕ್ಕೆ ಅದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಮುಂಬೈನಲ್ಲಿ ನಡೆಯುವ INDIA ಒಕ್ಕೂಟದ ಸಭೆಯಲ್ಲಿ ಇದು ಬಹಿರಂಗವಾಗಲಿದೆ' ಎಂದರು.
ಇದನ್ನೂ ಓದಿ: INDIA ಸಂಚಾಲಕನಾಗಲು ಇಷ್ಟವಿಲ್ಲ, ಒಗ್ಗಟ್ಟಿನ ಮೂಲಕ ಬೇರೆಯವರನ್ನು ಆಯ್ಕೆ ಮಾಡುತ್ತೇವೆ: ನಿತೀಶ್ ಕುಮಾರ್
ಬಿಹಾರದ ಜಾತಿ ಆಧಾರಿತ ಸಮೀಕ್ಷೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿದ್ದಕ್ಕಾಗಿ ಮುಖ್ಯಮಂತ್ರಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡರು.
'ರಾಜ್ಯದ ಸಾಮಾನ್ಯ ಜನರ ಹಿತದೃಷ್ಟಿಯಿಂದ ನಾವು ಒಳ್ಳೆಯ ಕೆಲಸ ಮಾಡುತ್ತಿದ್ದೇವೆ. ಆದರೆ, ಕೆಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಾತಿವಾರು ಸಮೀಕ್ಷೆಗೆ ಆಕ್ಷೇಪ ಎತ್ತುವುದರಲ್ಲಿ ಅರ್ಥವಿಲ್ಲ. ದೇಶದಲ್ಲಿ ಜನಗಣತಿ ನಡೆಸುವ ಹಕ್ಕು ಕೇಂದ್ರಕ್ಕೆ ಇದೆ. ಜನಗಣತಿಗೆ ಒತ್ತಾಯಿಸಿದ್ದೇವೆ. ನಮ್ಮ ರಾಜ್ಯದಲ್ಲಿ ಜಾತಿವಾರು ಸಮೀಕ್ಷೆ ಮಾಡುತ್ತಿದ್ದೇವೆ. ಇದು ಸಾಮಾನ್ಯ ಜನರ ಆರ್ಥಿಕ ಸ್ಥಿತಿಗತಿಯನ್ನು ತಿಳಿಯಲು ಸಹಾಯ ಮಾಡುತ್ತದೆ. ಇದು ಪೂರ್ಣಗೊಂಡಿದೆ ಮತ್ತು ಶೀಘ್ರದಲ್ಲೇ ಸಾರ್ವಜನಿಕ ಡೊಮೇನ್ಗೆ ಅಪ್ಲೋಡ್ ಮಾಡಲಾಗುತ್ತದೆ. ಈಗ ಯಾರಾದರೂ ಸುಪ್ರೀಂ ಕೋರ್ಟ್ಗೆ ಹೋದರೆ ನಾನೇನು ಮಾಡಲು ಸಾಧ್ಯ' ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಬಿಜೆಪಿ ಡಿಸೆಂಬರ್ನಲ್ಲಿ ಲೋಕಸಭಾ ಚುನಾವಣೆ ಘೋಷಣೆ ಸಾಧ್ಯತೆ, ಪ್ರಚಾರಕ್ಕಾಗಿ ಎಲ್ಲಾ ಹೆಲಿಕಾಪ್ಟರ್ ಬುಕ್: ಮಮತಾ ಬ್ಯಾನರ್ಜಿ
'ಸಮಯ ಕಳೆದಿದ್ದರೂ ಅವರು ದೇಶದ ಜನಗಣತಿಯನ್ನು ನಡೆಸಿಲ್ಲ. ಜನಗಣತಿ ಮಾಡಲು 2021ರಲ್ಲಿ ಸಮಯ ನಿಗದಿಪಡಿಸಲಾಗಿತ್ತು. ನಾವು ಜಾತಿ ಆಧಾರಿತ ಸಮೀಕ್ಷೆಯನ್ನು ಮಾಡುತ್ತಿದ್ದೇವೆ. ಇದು ಪ್ರತಿಯೊಬ್ಬ ವ್ಯಕ್ತಿಯ ಆರ್ಥಿಕ ಸ್ಥಿತಿಯ ಬಗ್ಗೆ ಕಲ್ಪನೆಯನ್ನು ನೀಡುತ್ತದೆ ಮತ್ತು ಅವರ ಆರ್ಥಿಕ ಪ್ರಯೋಜನಗಳಿಗಾಗಿ ನಾವು ನೀತಿಗಳನ್ನು ರೂಪಿಸುತ್ತೇವೆ' ಎಂದು ಹೇಳಿದರು.