ನವದೆಹಲಿ: ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದು, ಈ ನಡುವೆಯೇ ಇದೇ ಬುಧವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು INDIA ಮೈತ್ರಿಕೂಟದ ಸಭೆ ಕರೆದಿದ್ದಾರೆ.
ಹೌದು.. ಹಾಲಿ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ 2 ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, ತೆಲಂಗಾಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿ, ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದು ಹೇಳಲಾಗುತ್ತಿದ್ದ ಹಾಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 2 ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿ, ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಗೆ ತೀವ್ರ ಪೈಪೋಟಿ ನೀಡುತ್ತಿದೆ. ತೆಲಂಗಾಣದಲ್ಲಿ ಮಾತ್ರ ಕರ್ನಾಟಕದ ರೀತಿಯಲ್ಲೇ ಆಢಳಿತಾ ವಿರೋಧಿ ಅಲೆಯಿಂದಾಗಿ ಕಾಂಗ್ರೆಸ್ ಅಧಿಕಾರದ ಗದ್ದುಗೆಯತ್ತ ದಾಪುಗಾಲಿರಿಸಿದೆ.
ಈ ಬೆಳವಣಿಗೆಗಳ ನಡುವೆಯೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ INDIA ಮೈತ್ರಿಕೂಟದ ಸಭೆ ಕರೆದಿದ್ದು, ಇದೇ ಬುಧವಾರ ದೆಹಲಿಯಲ್ಲಿ ವಿರೋಧ ಪಕ್ಷದ ಮುಂದಿನ ಸಭೆ ನಡೆಸಲು ಕರೆ ನೀಡಲಾಗಿದೆ.
ಈ ಹಿಂದೆ ಲೋಕಸಭಾ ಚುನಾವಣೆಯ ಪೂರ್ವ ಸಿದ್ಧತೆಯ ಕೊರತೆಗೆ ಕಾಂಗ್ರೆಸ್ ಕಾರಣ ಎಂದು INDIA ಮೈತ್ರಿಕೂಟದ ಸದಸ್ಯ ಪಕ್ಷ ಜೆಡಿಯು ದೂಷಿಸಿತ್ತು. ಬಿಹಾರ ಸಿಎಂ ಹಾಗೂ ಜೆಡಿಯು ಸಂಸ್ಥಾಪಕ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ದೆಹಲಿ ಸಭೆಯಲ್ಲಿ ಸದಸ್ಯ ಪಕ್ಷಗಳ ಅಸಮಾಧಾನಗಳ ಕುರಿತು ಮಾತ್ರವಲ್ಲದೇ ಹಾಲಿ ವಿಧಾನಸಭಾ ಚುನಾವಣೆಯ ಕುರಿತೂ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ.
ಮೈತ್ರಿಕೂಟದ ಈ ಹಿಂದಿನ ಸಭೆ ಮುಂಬೈನಲ್ಲಿ ಆಗಸ್ಟ್ 31-ಸೆಪ್ಟೆಂಬರ್ 1 ರಂದು ನಡೆದಿತ್ತು. ಆದರೆ ಆ ಬಳಿಕ ಮುಂದಿನ ಸಭೆಯ ಕುರಿತು ಕಾಂಗ್ರೆಸ್ ಆಗಲಿ ಅಥವಾ ಇತರೆ ಸದಸ್ಯ ಪಕ್ಷಗಳು ಮಾಹಿತಿ ನೀಡಿರಲಿಲ್ಲ.
Advertisement