ಹೈದ್ರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಗೂ ಮುನ್ನಾ ಕಾಂಗ್ರೆಸ್ ಘೋಷಿಸಿದ್ದ ಆರು ಗ್ಯಾರಂಟಿ ಯೋಜನೆಗಳ ಪೈಕಿ 2ಕ್ಕೆ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಶನಿವಾರ ಚಾಲನೆ ನೀಡಿದರು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಬಡವರಿಗೆ 10 ಲಕ್ಷ ರೂ. ಆರೋಗ್ಯ ವಿಮೆ ಒದಗಿಸುವ ಯೋಜನೆಗಳನ್ನು ಉದ್ಘಾಟಿಸಲಾಯಿತು.
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜನ್ಮದಿನದಂದು ಇಲ್ಲಿನ ಶಾಸಕಾಂಗ ಸಭಾಂಗಣದಲ್ಲಿ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ, ಹಲವಾರು ಸಚಿವರು, ಹಂಗಾಮಿ ಸ್ಪೀಕರ್ ಆಗಿರುವ ಎಐಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೇವಂತ್ ರೆಡ್ಡಿ ಎರಡು ಯೋಜನೆಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ತೆಲಂಗಾಣ ರಾಜ್ಯ ರಚನೆಯ ಭರವಸೆಯನ್ನು ಸೋನಿಯಾ ಗಾಂಧಿ ಅವರು ಈಡೇರಿಸಿದ ರೀತಿಯಲ್ಲಿ, ಕಾಂಗ್ರೆಸ್ ಸರ್ಕಾರ 100 ದಿನಗಳಲ್ಲಿ ಆರು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ತೆಲಂಗಾಣವನ್ನು ಜನರ ಕಲ್ಯಾಣ ಮತ್ತು ಅಭಿವೃದ್ಧಿಗೆ ಹೆಸರುವಾಸಿಯಾದ ರಾಜ್ಯವನ್ನಾಗಿ ಮಾಡಲು ಶ್ರಮಿಸುತ್ತದೆ ಎಂದರು. 2009 ರ ಡಿಸೆಂಬರ್ 9 ರಂದು ಆಗಿನ ಯುಪಿಎ ಸರ್ಕಾರ ತೆಲಂಗಾಣ ರಾಜ್ಯವನ್ನು ಘೋಷಿಸಿದ್ದರಿಂದ ಡಿಸೆಂಬರ್ 9 ತೆಲಂಗಾಣಕ್ಕೆ ಹಬ್ಬದ ದಿನ ಎಂದು ಬಣ್ಣಿಸಿದರು.
ರಾಜೀವ್ ಆರೋಗ್ಯಶ್ರೀ ಆರೋಗ್ಯ ಯೋಜನೆಯಡಿ ಬಡವರಿಗೆ 10 ಲಕ್ಷ ರೂ. ವಿಮೆ ಒದಗಿಸಲಾಗುತ್ತಿದೆ. ಮಹಾಲಕ್ಷ್ಮಿ' ಯೋಜನೆಯಡಿ, ಮಹಿಳೆಯರು ಸರ್ಕಾರಿ ರಸ್ತೆ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಇದೇ ಸಂದರ್ಭದಲ್ಲಿ ರೇವಂತ್ ರೆಡ್ಡಿ, ರಾಜ್ಯ ಸರ್ಕಾರದ ಪರವಾಗಿ ಕುಸ್ತಿಪಟು ನಿಖತ್ ಜರೀನ್ ಅವರಿಗೆ 2 ಕೋಟಿ ರೂ. ಚೆಕ್ ನ್ನು ಹಸ್ತಾಂತರಿಸಿದರು.
Advertisement